ಜಿಟಿಡಿ ಜೊತೆ ಜಗಳ ತಾರಕಕ್ಕೆ: ಗದ್ಗದಿತರಾಗಿ ರಾಜಕೀಯ ನಿವೃತ್ತಿ ಮಾತಾಡಿದ ಸಾ.ರಾ.ಮಹೇಶ

ಮೈಸೂರು : ನಿಮಗೆ ನನ್ನ ಮೇಲೆ ಯಾಕಿಷ್ಟು ಸಿಟ್ಟು? ನನ್ನನ್ನು ಯಾಕೆ ಇಷ್ಟೊಂದು ವಿರೋಧಿಸುತ್ತಿದೀರಿ? ನೀವು ಜೆಡಿಎಸ್‌ಗೆ ಬರುತ್ತೇನಂದ್ರೆ ನಾನೇ ಪಕ್ಷ ಬಿಡುತ್ತೇನೆ, ರಾಜಕೀಯ ನಿವೃತ್ತಿಯನ್ನೂ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್‌ ನಾಯಕ ಸಾ.ರಾ.ಮಹೇಶ ಗದ್ಗದಿತರಾಗಿ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಸಾ.ರಾ.ಮಹೇಶ್​ ಮಾತನಾಡುವ ವೇಳೆ ಗದ್ಗದಿತರಾಗಿ, ನಾನು ಎರಡು ವರ್ಷದ ಬಳಿಕ ಸಾರ್ವಜನಿಕ ಜೀವನದಿಂದಲೇ ನಿವೃತ್ತಿಯಾಗುತ್ತೇನೆ. ಯಾರ ವಿಚಾರವನ್ನೂ ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ನನ್ನಿಂದ ಜಿ.ಟಿ.ದೇವೇಗೌಡರಿಗೆ ತೊಂದರೆ ಆಗಿದೆ ಎಂದು ಚಾಮುಂಡೇಶ್ವರಿ ತಾಯಿ ಮೇಲೆ ಪ್ರಮಾಣ ಮಾಡಲಿ.ಹಾಗೆ ಮಾಡಿದ್ದೇ ಆದರೆ ನಾನು ರಾಜಕೀಯದಲ್ಲೇ ಇರುವುದಿಲ್ಲ. ಅವರ ಬಗ್ಗೆ ನನಗೆ ಸಾಕಷ್ಟು ಗೌರವ ಇದೆ. ನಾನು ಅವರಿಗೆ ಏನು ಅನ್ಯಾಯ ಮಾಡಿದ್ದೇನೆ? ನನ್ನನ್ನು ಏಕೆ‌ ಪದೇಪದೆ ದೂಷಣೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಜಿ.ಟಿ.ದೇವೇಗೌಡ ಶಕುನಿ, ಮಂಥರೆ. ಎಂದು ಹೇಳಿದ್ದಕ್ಕೆ ಉತ್ತರ ನೀಡಿದ ಅವರು, ಶಕುನಿ ಇಲ್ಲದಿದ್ದರೆ ಮಹಾಭಾರತ ನಡೆಯುತ್ತಿರಲಿಲ್ಲ, ಮಂಥರೆ ಇರಲಿಲ್ಲವಾದರೆ ರಾಮಾಯಣ ನಡೆಯುತ್ತಿರಲಿಲ್ಲ. ಅವರಿಬ್ಬರೂ ಧರ್ಮ ರಾಜ್ಯ ಸ್ಥಾಪನೆಗೆ ಕಾರಣಕರ್ತರು ಎಂದು ಹೇಳಿ ತಿರುಗೇಟಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್‌ ರೇವಣ್ಣ ಪ್ರಕರಣ : ದೇವೇಗೌಡ, ಎಚ್‌ಡಿಕೆಯನ್ನು ತಪ್ಪಾಗಿ ಬಿಂಬಿಸಿ ಸುದ್ದಿ ಪ್ರಸಾರ ಮಾಡದಂತೆ 89 ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ

ಜಿ.ಟಿ.ದೇವೇಗೌಡ ಹುಣಸೂರು, ಪಿರಿಯಾಪಟ್ಟಣದಲ್ಲಿ ಜೆಡಿಎಸ್​ ಪಕ್ಷವನ್ನು ಬೆಂಬಲಿಸಿದ್ದಾರಾ? ಅವರು ಕಾಂಗ್ರೆಸ್​ ಕಾರ್ಯಕತರಿಗೇ ಮಣೆ ಹಾಕುತ್ತಾರೆ. ಹೆಚ್.ಡಿ.ಕೋಟೆಯಲ್ಲೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮಣೆ ಹಾಕಿದ್ದಾರೆ. ಮೈಸೂರು ತಾಲೂಕಿನಲ್ಲಿಯೂ ಅದೇ ರೀತಿ‌ ಮಾಡಿದ್ದಾರೆ. ಎರಡು ಕಡೆ ಬಿಜೆಪಿ, ಕಾಂಗ್ರೆಸ್, ಜಿ.ಟಿ.ದೇವೇಗೌಡ ಒಂದಾದರು. ಇಷ್ಟೆಲ್ಲಾ ಮಾಡಿ, ಈ ಚುನಾವಣೆಯಲ್ಲಿ ಪಕ್ಷವನ್ನು ತರಬಾರದೆಂದು ಹೇಳುತ್ತಾರೆ. ಇಷ್ಟಕ್ಕೂ ಪಕ್ಷವನ್ನು ತಂದವರು ಯಾರು ಎಂದು ಪ್ರಶ್ನಿಸಿದರು.
ಜಿಟಿಡಿ ಆಲದ ಮರ ಇದ್ದಂತೆ, ಆಲದ ಮರ ಬೇರು ಬಿಟ್ಟರೆ ಬೇರೆ ಸಸಿ ಬೆಳೆಯಲು ಬಿಡುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ ಅವರು, ವಿಧಾನ ಪರಿಷತ್‌ ಚುನಾವಣೆಯಲ್ಲಿ ಚುನಾವಣೆಯಲ್ಲಿ ಲಕ್ಷ್ಮಣ ಸವದಿಗೆ ಮತ ಹಾಕಿದ್ದೀರಿ. ಮೈಸೂರು ಮೇಯರ್ ಚುನಾವಣೆಗೆ ಬರಲಿಲ್ಲ. ಹಾಗಾದರೆ ನಿಮ್ಮ ನಿಲುವು ಏನು ಎಂದು ಪ್ರಶ್ನಿಸಿರುವ ಸಾ.ರಾ. ಮಹೇಶ್, ಜಿ.ಟಿ.ದೇವೇಗೌಡ ಎಂಬ ಮರಕ್ಕೆ ಜೆಡಿಎಸ್​ ಕಾರ್ಯಕರ್ತರು ನೀರು ಹಾಕಿದ್ದಾರೆ. ಆದರೆ, ಅವರು ಯಾರನ್ನೂ ಬೆಳೆಯಲಿಕ್ಕೆ ಬಿಟ್ಟಿಲ್ಲ. ಹೀಗಾಗಿ ನಾವು ಬೇರೆ ಸಸಿ ನೆಡುವ ಕೆಲಸ ಮಾಡಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಯಾರನ್ನ ಯಾರೂ ದಾರಿ ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ನಾನು ಹೆಚ್‌.ಡಿ.ಕುಮಾರಸ್ವಾಮಿ ವಿಚಾರದಲ್ಲಿ ನಿಷ್ಠಾವಂತ ಕಾರ್ಯಕರ್ತ. ನಾನು ಅಧಿಕಾರಕ್ಕಾಗಿ ಆಸೆ ಪಡುವವನಲ್ಲ. ಜಿ.ಟಿ.ದೇವೇಗೌಡರಿಗಿಂತ ನಾನೇ 6 ತಿಂಗಳು ಜಾಸ್ತಿ ಶಾಸಕನಾಗಿದ್ದೇನೆ. 172 ತಿಂಗಳು ಜಿ.ಟಿ.ದೇವೇಗೌಡರು ಶಾಸಕರಾಗಿದ್ದಾರೆ, ನಾನು 180 ತಿಂಗಳು ಶಾಸಕನಾಗಿದ್ದೇನೆ ಎಂದು ಹೇಳಿದ ಅವರು, ಸಾ.ರಾ.ಮಹೇಶ್​ ಅವರು ಕುಮಾರಸ್ವಾಮಿ ದಾರಿ ತಪ್ಪಿಸುತ್ತಿದ್ದಾರೆ ಎಂಬುದಕ್ಕೆ ಉತ್ತರ ನೀಡಿದರು. ಈಗಾಗಲೇ ಒಬ್ಬರು ಚಾಮುಂಡಿಬೆಟ್ಟದಲ್ಲಿ ಕಣ್ಣೀರು ಹಾಕಿಸಿ ಅನುಭವಿಸುತ್ತಿದ್ದಾರೆ. ಸತ್ಯಾಸತ್ಯತೆ ಚಾಮುಂಡೇಶ್ವರಿ ಮುಂದೆ ನಿರ್ಧಾರವಾಗಲಿ ಎಂದರು.
ಶಾಸಕ ಜಿ.ಟಿ. ದೇವೇಗೌಡರನ್ನು ಪಕ್ಷಕ್ಕೆ ಬಂದು ಸಕ್ರಿಯರಾಗಿ, ಜವಾಬ್ದಾರಿ ತೆಗೆದುಕೊಳ್ಳಲಿ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಅಶ್ಲೀಲ‌ ವೀಡಿಯೊ ಇಟ್ಟುಕೊಳ್ಳುವುದು ಅಪರಾಧ, ಡಿಲೀಟ್‌ ಮಾಡಿ : ಎಸ್‌ಐಟಿ ಮುಖ್ಯಸ್ಥರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement