ಮುಂಬೈ: ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಹೇಳುತ್ತಿರುವ ಕೇಂದ್ರ ಸರಕಾರ ಬಂದರುಗಳು ಹಾಗೂ ವಿಮಾನ ನಿಲ್ದಾಣಗಳನ್ನು ಖಾಸಗೀಯವರಿಗೆ ನೀಡುತ್ತಿರುವ ಕ್ರಮವನ್ನು ಖಂಡಿಸಿದ ಶಿವಸೇನಾ ಕೇಂದ್ರ ಸರಕಾರ ಇಬ್ಬಗೆ ನಿಲುವು ಹೊಂದಿದೆ ಎಂದು ಜರಿದಿದೆ.
ರೈಲ್ವೆ ಖಾಸಗೀಕರಣ ಮಾಡುವುದಿಲ್ಲ ಎಂದು ರೈಲ್ವೆ ಸಚಿವ ಪಿಯುಷ್ ಗೋಯಲ್ ಹೇಳಿದರೆ, ಭಾರತೀಯ ಜೀವವಿಮಾ ಸಂಸ್ಥೆಯನ್ನು ಖಾಸಗೀಯವರಿಗೆ ನೀಡುವುದಿಲ್ಲ ಎಂದು ಮತ್ತೊಬ್ಬ ಸಚಿವ ಪ್ರಕಾಶ ಜಾವಡೇಕರ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದಕ್ಕೆ ವಿರುದ್ಧವಾಗಿ ಖಾಸಗೀಕರಣಕ್ಕೆ ಮಣೆ ಹಾಕುತ್ತಿದ್ದಾರೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ.
ಕೇಂದ್ರದ ಖಾಸಗೀಕರಣ ಪರವಾದ ನೀತಿಗಳನ್ನು ಟೀಕಿಸಿದ ಪತ್ರಿಕೆ, ಸಾರ್ವಜನಿಕ ಆಸ್ತಿಯನ್ನು ಹೂಡಿಕೆದಾರರ ಬೆವರಿನಿಂದ ನಿರ್ಮಿಸಲಾಗಿಲ್ಲ ಎಂಬುದನ್ನು ಕೇಂದ್ರ ಸರಕಾರ ತಿಳಿದುಕೊಳ್ಳಬೇಕು. ಮೋದಿ ಸರ್ಕಾರ ಈ ರಾಷ್ಟ್ರೀಯ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದು, ವಿಮಾನ ನಿಲ್ದಾಣಗಳು, ಬಂದರುಗಳ ಮೇಲೆ ಈಗ ಕೈಗಾರಿಕೋದ್ಯಮಿಗಳ ಹಿಡಿತವಿರಲಿದೆ ಎಂದು ತಿಳಿಸಿದೆ.
ಸರ್ಕಾರವನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗದಿದ್ದರೆ ಕೈಗಾರಿಕೆ, ವ್ಯಾಪಾರ, ವಾಣಿಜ್ಯ ಸಚಿವಾಲಯಗಳಿಗೆ ಬೀಗ ಹಾಕಬೇಕು ಎಂದು ಖಾರವಾಗಿ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ