ಮುಂಬೈ,:ರಂಜಾನ್ ಆಚರಣೆ ಆರಂಭವಾಗಿದ್ದು, ಮಸೀದಿಯೊಳಗೆ ನಮಾಜ್ ಮಾಡಲು ಅನುಮತಿ ಕೋರಿ ಜುಮ್ಮಾ ಮಸೀದಿ ಟ್ರಸ್ಟ್ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
ಕರ್ನಾಟಕ, ದೆಹಲಿ ಸೇರಿದಂತೆ ವಿವಿಧೆಡೆ ರಂಜಾನ್ ಆಚರಣೆ ಕುರಿತಂತೆ ಕೋವಿಡ್ ಮಾರ್ಗಸೂಚಿ ಜಾರಿ ಮಾಡಲಾಗಿದೆ.ಇಫ್ತಾರ್ ಕೂಟ ನಡೆಸುವಂತಿಲ್ಲ,
ಮುಂಬೈನಲ್ಲಿ 87,443 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.ಕಳೆದ 24 ಗಂಟೆಗಳಲ್ಲಿ 9,925 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದೆ, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 5,44,942ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 54 ಮಂದಿ ಕೊವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ.
ರಂಜಾನ್ ತಿಂಗಳಲ್ಲಿ ದಕ್ಷಿಣ ಮುಂಬೈನ ಜುಮ್ಮಾ ಮಸೀದಿಯೊಳಗೆ ನಮಾಜ್ ಮಾಡಲು ಅವಕಾಶ ಕೋರಿ ಜುಮ್ಮಾ ಮಸೀದಿ ಟ್ರಸ್ಟ್ನ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿದೆ ಎಂದು ಬಾರ್ ಎಂಡ್ ಬೆಂಚ್ ವರದಿ ಮಾಡಿದೆ.
ಮಸೀದಿಯೊಳಗೆ ದಿನಂಪ್ರತಿ ಐದು ಬಾರಿ ಪ್ರಾರ್ಥನೆ ಸಲ್ಲಿಸಲು ಮತ್ತು ತಾರವೀಹ್ ನಮಾಜ್ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಕೋರಿ ಜುಮ್ಮಾ ಮಸೀದಿ ಟ್ರಸ್ಟ್ ಬಾಂಬೆ ಹೈಕೋರ್ಟ್ನ ರಜಾಕಾಲದ ಪೀಠದ ಮುಂದೆ ಮನವಿ ಮಾಡಿತ್ತು.
ಮಹಾರಾಷ್ಟ್ರ ಮತ್ತು ಮುಂಬೈ ನಗರದಲ್ಲಿ ವ್ಯಾಪಕವಾಗಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಆರ್ ಡಿ ಧನುಕಾ ಮತ್ತು ವಿ ಜಿ ಬಿಷ್ಟ್ ಅವರಿದ್ದ ವಿಭಾಗೀಯ ಪೀಠವು ಮನವಿ ಆಲಿಸಲು ನಿರಾಕರಿಸಿದೆ.
ಸಂಭ್ರಮಾಚರಣೆಯ ಹಕ್ಕು ಅಥವಾ ಧಾರ್ಮಿಕ ಆಚರಣೆಗಳನ್ನು ಅನುಸರಿಸುವುದು ಮುಖ್ಯವಾದರೂ ಸಾರ್ವಜನಿಕ ಹಿತಾಸಕ್ತಿ ಮತ್ತು ನಾಗರಿಕರ ಸುರಕ್ಷತೆ ಬಹುಮುಖ್ಯವಾಗಿದೆ” ಎಂದು ನ್ಯಾಯಾಲಯ ಹೇಳಿದೆ. ”ಸದ್ಯ ಕೋವಿಡ್ ಪರಿಸ್ಥಿತಿ ಗಂಭೀರವಾಗುತ್ತಿರುವುದರಿಂದ ನಮ್ಮ ದೃಷ್ಟಿಯಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅರ್ಜಿದಾರರ ಕೋರಿಕೆಯನ್ನು ಪರಿಗಣಿಸಲಾಗದು” ಎಂದು ಪೀಠ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ