ಸರ್ಕಾರಕ್ಕೆ ಜನರ ಜೀವ ಲೆಕ್ಕಕ್ಕಿಲ್ಲವೇ: ಆಮ್ಲಜನಕ ಕೊರತೆ ಬಗ್ಗೆ ಕೇಂದ್ರಕ್ಕೆ ದೆಹಲಿ ಹೈಕೋರ್ಟ್‌ ತರಾಟೆ

ನವ ದೆಹಲಿ: ರಾಜಧಾನಿ ದೆಹಲಿ ಹಾಗೂ ದೇಶಾದ್ಯಂತ ಕೊರೊನಾ ಎರಡನೇ ಅಲೆಯಿಂದಾಗಿ ಉಲ್ಬಣಿಸಿರುವ ವೈದ್ಯಕೀಯ ಆಮ್ಲಜನಕ ಬಿಕ್ಕಟ್ಟು ನಿಭಾಯಿಸಲು ವಿಫಲವಾದ ಕೇಂದ್ರ ಸರ್ಕಾರವನ್ನು ಬುಧವಾರ ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ವಾಸ್ತವ ಸ್ಥಿತಿ ಏಕೆ ಗೊತ್ತಾಗುತ್ತಿಲ್ಲ ಎಂದು ಪ್ರಶ್ನಿಸಿದೆ.
ಆಮ್ಲಜನಕ ಬಿಕ್ಕಟ್ಟಿನಿಂದಾಗಿ ಕೋವಿಡ್-19 ಅಥವಾ ಇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಉಳಿಸಲು ಹಲವು ಆಸ್ಪತ್ರೆಗಳು ಪರದಾಡುತ್ತಿವೆ. ಆಮ್ಲಜನಕ ಸರಬರಾಜಿಗೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹೊಯ್ದಾಟ ನಡೆಸುತ್ತಿವೆ. ತಾನು ಮಂಗಳವಾರ ನೀಡಿದ ಆದೇಶದ ಹೊರತಾಗಿಯೂ ಕೈಗಾರಿಕೆಗಳಿಗೆ ಆಮ್ಲಜನಕ ಬಳಕೆಗೆ ಅವಕಾಶ ನೀಡಿರುವ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು,ಜನರು ಸಾಯುತ್ತಿರುವಾಗ ನೀವು ಕೈಗಾರಿಕೆಗಳ ಬಗ್ಗೆ ಚಿಂತಿಸುತ್ತಿದ್ದೀರಿ. ಇದರ ಅರ್ಥ ಸರ್ಕಾರಕ್ಕೆ ಜನರ ಜೀವ ಲೆಕ್ಕಕ್ಕಿಲ್ಲವೇ. ಇದು ಹಾಸ್ಯಾಸ್ಪದ ಎಂದು ಹೇಳಿದರು.
ದೇಶದ ಆಸ್ಪತ್ರೆಗಳಲ್ಲಿ ಈಗ ಆಮ್ಲಜನಕದ ಅವಶ್ಯಕತೆ ಹಲವು ಪಟ್ಟು ಹೆಚ್ಚಾಗಿದೆ. ಆಸ್ಪತ್ರೆಗಳಿಗೆ ಸಾಕಷ್ಟು ಆಮ್ಲಜನಕ ಪೂರೈಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಜೀವನದ ಮೂಲಭೂತ ಹಕ್ಕುಗಳ ರಕ್ಷಣೆಗೆ ನಾವು ನಿರ್ದೇಶನ ನೀಡುತ್ತೇವೆ. ನೆಲದ ವಾಸ್ತವತೆಯನ್ನುಸರ್ಕಾರ ಮರೆಯಬಾರದು. ಆಮ್ಲಜನಕ ಇಲ್ಲದೆ ಜನರು ಸಾಯಲು ಬಿಡಬಾರದು. ನೀವು ನಿಮ್ಮದೇ ಆದ ಸಮಯ ತೆಗೆದುಕೊಳ್ಳುತ್ತಿದ್ದೀರಿ. ಜನ ಸಾಯುತ್ತಿದ್ದಾರೆ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ದೆಹಲಿ ಪ್ರಮುಖ ಮ್ಯಾಕ್ಸ್ ಆಸ್ಪತ್ರೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.
ಅರ್ಜಿ ನಮಗೆ ಅಚ್ಚರಿ ತಂದಿದೆ ಎಂದು ಕೇಂದ್ರದ ಪರ ವಕೀಲರು ಹೇಳಿದಾಗ, ಈ ಅರ್ಜಿಯಿಂದ ಅಚ್ಚರಿ ಪಡಬೇಡಿ. ನೀವು ಪರಿಸ್ಥಿತಿ ತಿಳಿದುಕೊಳ್ಳಬೇಕು. ನಾವು ಮಂಗಳವಾರ ಪೆಟ್ರೋಲಿಯಂ ಹಾಗೂ ಸ್ಟೀಲ್ ಕೈಗಾರಿಕೆಗಳ ಆಮ್ಲಜನಕದ ಬಗ್ಗೆ ಹೇಳಿದ್ದೆವು. ಅದು ಏನಾಯಿತು ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ನೀವು ಏನು ಮಾಡಿದ್ದೀರಿ? ಅದರ ಫಲಿತಾಂಶ ಏನಾಗಿದೆ? ನಾವು ಈ ಫೈಲ್ ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೈಗಾರಿಕೆಗಳು ಸಹಾಯ ಮಾಡಲು ಸಿದ್ಧವಾಗಿವೆ. ಪೆಟ್ರೋಲಿಯಂ ಕಂಪೆನಿಗಳನ್ನು ನೀವೇ ನಡೆಸುತ್ತಿದ್ದೀರಿ. ನಿಮ್ಮಲ್ಲಿ ವಾಯುಪಡೆಯಿದೆ. ನಾವು ನಿನ್ನೆ ಹಲವು ಆದೇಶಗಳನ್ನು ನೀಡಿದ್ದೆವು. ಇಡೀ ದಿನ ಏನು ಮಾಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement