ಮುಂಬೈ: ಪಾಲ್ಘರ್ ಜಿಲ್ಲೆಯ ವಾಸೈ ವಿರಾರ್ ಪುರಸಭೆಯ ಮಿತಿಯಲ್ಲಿರುವ ವಿರಾರ್ನ ಕೋವಿಡ್ -19 ಕೇಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಕನಿಷ್ಠ 14 ಕೊರೊನಾ ವೈರಸ್ ರೋಗಿಗಳು ಮೃತಪಟ್ಟಿದ್ದಾರೆ. ಈ ಘಟನೆ ವಿಜಯ್ ವಲ್ಲಭ್ ಆಸ್ಪತ್ರೆಯಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಕೋವಿಡ್-19 ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದರ ನಂತರ ರೋಗಿಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಹವಾನಿಯಂತ್ರಣದ ಶಾರ್ಟ್ ಸರ್ಕ್ಯೂಟ್ನಿಂದಾಗಿ ಮುಂಜಾನೆ 3.15 ರ ಸುಮಾರಿಗೆ ಬೆಂಕಿ ಪ್ರಾರಂಭವಾಗಿದೆ ಎಂದು ಶಂಕಿಸಲಾಗಿದೆ.
ಐಸಿಯುನಲ್ಲಿ 17 ಕೋವಿಡ್ ರೋಗಿಗಳಿದ್ದರು ಎಂದು ಅಗ್ನಿಶಾಮಕ ಇಲಾಖೆ ಖಚಿತಪಡಿಸಿದೆ. ಬದುಕುಳಿದವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ವಿಜಯ್ ವಲ್ಲಭ್ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಘಟಕವಾಗಿದೆ.
ಮುಂಜಾನೆ 3 ಗಂಟೆ ಸುಮಾರಿಗೆ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ತೀವ್ರ ನಿಗಾ ಘಟಕದ ಎಸಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಜಿಲ್ಲಾ ವಿಪತ್ತು ನಿಯಂತ್ರಣ ಕೋಶದ ಮುಖ್ಯಸ್ಥ ವಿವೇಕಾನಂದ್ ಕದಮ್ ತಿಳಿಸಿದ್ದಾರೆ.
ವಾಸೈ ವಿರಾರ್ ಮಹಾನಗರ ಪಾಲಿಕೆಯ ಅಗ್ನಿಶಾಮಕ ದಳದ ಸಿಬ್ಬಂದಿ ಒಂದು ಗಂಟೆಯೊಳಗೆ ಬೆಂಕಿ ನಂದಿಸಿದ್ದಾರೆ ಎಂದು ಕದಮ್ ತಿಳಿಸಿದ್ದಾರೆ.
ವಾಸೈ ಶಾಸಕ ಹಿತೇಂದ್ರ ಠಾಕೂರ್ ಸ್ಥಳಕ್ಕೆ ತಲುಪಿದ್ದಾರೆ. ಏತನ್ಮಧ್ಯೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಘಟನೆ ತನಿಖೆಗೆ ಆದೇಶಿಸಿದ್ದಾರೆ.
ಆಮ್ಲಜನಕದ ಪೂರೈಕೆ ಟ್ಯಾಂಕಿನಲ್ಲಿ ಸೋರಿಕೆಯಾದ ಹಿನ್ನೆಲೆಯಲ್ಲಿ ನಾಸಿಕ್ನ ಡಾ.ಜಕೀರ್ ಹುಸೇನ್ ಆಸ್ಪತ್ರೆಯಲ್ಲಿ ಆಮ್ಲಜನಕದ ಬೆಂಬಲದ (ಸಪೋರ್ಟ್) ಮೇಲಿದ್ದ 24 ಕೋವಿಡ್ -19 ರೋಗಿಗಳು ಮೃತಪಟ್ಟ ಎರಡು ದಿನಗಳಲ್ಲೇ ಮತ್ತೊಂದು ದುರಂತ ಸಂಭವಿಸಿದೆ. .
ನಾಸಿಕ್ ಮುನ್ಸಿಪಲ್ ಕಾರ್ಪೊರೇಷನ್ (ಎನ್ಎಂಸಿ) ನಡೆಸುತ್ತಿರುವ ಡಾ ಝಕಿರ್ ಹುಸೇನ್ ಆಸ್ಪತ್ರೆಯಲ್ಲಿನ ಮುಖ್ಯ ಸಂಗ್ರಹಣೆಯಲ್ಲಿನ ಅಸಮರ್ಪಕ ಕಾರ್ಯದಿಂದಾಗಿ ರೋಗಿಗಳಿಗೆ ಆಮ್ಲಜನಕದ ಪೂರೈಕೆ ಇದ್ದಕ್ಕಿದ್ದಂತೆ ನಿಂತುಹೋದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿತ್ತು.
ಘಟನೆಯ ಬಗ್ಗೆ ಮಹಾರಾಷ್ಟ್ರ ಸರ್ಕಾರ ಬುಧವಾರ ಏಳು ಸದಸ್ಯರ ಸಮಿತಿಯೊಂದನ್ನುರಚಿಸಿದೆ ಮತ್ತು ಪ್ರತಿ ಸಂತ್ರಸ್ತ ಕುಟುಂಬಗಳಿಗೆ 5 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಕಳೆದ ತಿಂಗಳ ಆರಂಭದಲ್ಲಿ, ಮುಂಬೈನ ಭಂಡಪ್ ಪ್ರದೇಶದ ಮಾಲ್ನ ಮೂರನೇ ಮಹಡಿಯಲ್ಲಿರುವ ಕೋವಿಡ್ -19 ಆಸ್ಪತ್ರೆಯಲ್ಲಿ ಸಂಭವಿಸಿದ ದೊಡ್ಡ ಬೆಂಕಿಯಲ್ಲಿ ಕನಿಷ್ಠ ಹತ್ತು ರೋಗಿಗಳು ಮೃತಪಟ್ಟಿದ್ದರು..
ನಿಮ್ಮ ಕಾಮೆಂಟ್ ಬರೆಯಿರಿ