ಹಳಿಯಾಳ: ಹಿಂದೂ ಸಂಘಟನೆಗಳ ಮುಖಂಡ, ಆರ್ ಎಸ್ ಎಸ್ ಸ್ವಯಂ ಸೇವಕ , ಹಿಂದೂ ಮಹಾಸಭಾ ರಾಜ್ಯಧ್ಯಾಕ್ಷ , ಬಿಜೆಪಿ ಧುರೀಣ ರಾಜು ಬಾಬುರಾವ ಧೂಳಿ(57) ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
15 ದಿನಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರು ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಮೂರು ದಿನಗಳ ಹಿಂದೆ ತೀವ್ರ ಉಸಿರಾಟದ ತೊಂದರೆಯಿಂದಾಗಿ ಅವರನ್ನು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಿಸದೆ ಶನಿವಾರ ಕೊನೆಯುಸಿರೆಳೆದಿದ್ದಾರೆ.
ಕಳೆದ ವಾರ ಇವರ ತಾಯಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು.ಆಕ್ಸಿಜನ್ ಹಾಕಿಕೊಂಡೇ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ವಿಶಿಷ್ಟ ವ್ಯಕ್ತಿತ್ವವದ ಮೂಲಕ ಯುವಕರ ಗಮನ ಸೆಳೆದಿದ್ದ ರಾಜು ಧೂಳಿ ಕಳೆದ ಮೂರು ದಶಕಗಳಿಂದ ಹಿಂದೂಪರ ಸಂಘಟನೆಗಳ ಗುರುತಿಸಿಕೊಂಡಿದ್ದ ಇವರು ಉತ್ತಮ ಸಂಘಟನಾಕಾರರಾಗಿ ಹೆಸರು ಗಳಿಸಿದ್ದರು. ಪ್ರತಿಯೊಂದು ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಇವರು ಅಖಿಲ ಭಾರತ ಹಿಂದೂ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಸಮಯದಲ್ಲಿ ಪಕ್ಷ ಜಾತಿ ಭೇದ ಮರೆತು ಪ್ರತಿಯೊಬ್ಬರೂ ಇವರಿಗೆ ಅಭಿನಂದನೆ ಸಲ್ಲಿಸಿದ್ದರು..
ರಾಜು ಧೂಳಿ ಅವರು ಪತ್ನಿ, ಓರ್ವ ವಿವಾಹಿತೆ ಪುತ್ರಿ, ಸಹೋದರ ಮತ್ತು ಅಪಾರ ಬಂಧು- ಅಭಿಮಾನಿ ಬಳಗವನ್ನು ಬಿಟ್ಟು ಅಗಲಿದ್ದಾರೆ ಅವರ ನಿಧನಕ್ಕೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ,ಶಾಸಕ ಆರ್. ವಿ. ದೇಶಪಾಂಡೆ, ಸಂಸದ ಅನಂತಕುಮಾರ್ ಹೆಗಡೆ, ವಿಧಾನಪರಿಷತ್ ಸದಸ್ಯ ಎಸ್. ಎಲ್. ಘೋಟ್ನೆಕರ, ಮಾಜಿ ಶಾಸಕ ಸುನೀಲ ಹೆಗಡೆ ಕಂಬನಿ ಮಿಡಿದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ