ಬೆಂಗಳೂರು: ಪ್ರತಿದಿನ ಹೆಲ್ತ್ ಬುಲೆಟಿನ್ ಮಾದರಿಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಕೋವಿಡ್ ಚಿಕಿತ್ಸೆಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಒಟ್ಟು ಬೆಡ್ ಗಳ ಕುರಿತು ಬುಲೆಟಿನ್ ಪ್ರಕಟಿಸುವುದಾಗಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ಆರೋಗ್ಯಸೌಧ ದಲ್ಲಿ ಇರುವ ಕರ್ನಾಟಕ ವಾರ್ ರೂಮಿಗೆ (ಬೆಂಗಳೂರು ಹೊರತುಪಡಿಸಿ) ಭೇಟಿ ನೀಡಿ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು.
ಕೋವಿಡ್ ಸೋಂಕಿತರಿಗೆ ಸಮರ್ಪಕವಾಗಿ ಹಾಸಿಗೆ ಲಭ್ಯವಾಗುತ್ತಿಲ್ಲ. ಹಾಸಿಗೆ ನೀಡುವ ವಿಚಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಸವರಾಜ್ ಬೊಮ್ಮಾಯಿ ಮತ್ತು ಆರ್ ಅಶೋಕ್ ನೇತೃತ್ವದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಂಡವನ್ನು ರಚನೆ ಮಾಡಿದ್ದಾರೆ.
ಅದರ ಭಾಗವಾಗಿ ಬುಧವಾರ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ಹಾಸಿಗೆ ಲಭ್ಯತೆ, ಬಳಕೆಯಾಗಿರುವ ಬೆಡ್ ಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಕೋವಿಡ್ ವಾರ್ ರೂಂ ಕುರಿತು ಸಚಿವರಾದ ಬೊಮ್ಮಾಯಿ, ಆರ್. ಅಶೋಕ್ ಮತ್ತು ವಾರ್ ರೂಂ ಮುಖ್ಯಸ್ಥ ಅರವಿಂದ್ ಲಿಂಬಾವಳಿ ಸಭೆ ನಡೆಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ರಾಜ್ಯದಲ್ಲಿ ಪ್ರತಿ ದಿವಸ ಎಷ್ಟು ಬೆಡ್ ಗಳು ಖಾಲಿಯಿವೆ. ಎಷ್ಟು ಬೆಡ್ ಗಳು ಭರ್ತಿಯಾಗಿವೆ. ಯಾವ ಯಾವ ವಿಭಾಗದ ಬೆಡ್ ಗಳು ಭರ್ತಿಯಾಗಿವೆ ಎಂಬುದರ ಕುರಿತು ಪಾರದರ್ಶಕವಾದ ಬುಲೆಟಿನ್ ನ್ನು ಬಿಡುಗಡೆ ಮಾಡಲಾಗುವುದು. ಎರಡು-ಮೂರು ದಿನಗಳಲ್ಲಿ ಇದಕ್ಕೆ ಒಂದು ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ