ಬೆಂಗಳೂರು:ಕರ್ನಾಟಕದಲ್ಲಿ ಈಗ ಲಾಕ್ಡೌನ್ ವಿಸ್ತರಣೆ ಚರ್ಚಾ ವಿಷಯ. ಮೇ 10ರಿಂದ 24ರ ವರೆಗೆ ಲಾಕ್ಡೌನ್ ಆದೇಶವನ್ನ ಸರ್ಕಾರ ಜಾರಿ ಮಾಡಿದ ಬಳಿಕ ಸೋಂಕಿನ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಈ ಫಲಿತಾಂಶವನ್ನ ಆಧರಿಸಿ ಲಾಕ್ಡೌನ್ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಹೆಚ್ಚಾಗಿದೆ.
ರಾಜ್ಯದ ಅನೇಕ ಸಚಿವರೂ ಲಾಕ್ಡೌನ್ ಮುಂದುವರಿಸುವುದಕ್ಕೆ ಒಲವು ತೋರಿದ್ದಾರೆ. ಜೊತೆಗೆ ತಜ್ಞರು ಸಹ ಲಾಕ್ಡೌನ್ ವಿಸ್ತರಣೆ ಬಗ್ಗೆ ಸರ್ಕಾರಕ್ಕೆ ಹೇಳಿದ್ದಾರೆ. ಹೀಗಾಗಿ ಲಾಕ್ಡೌನ್ ಬಗ್ಗೆ ಸರ್ಕಾರ ಏನು ನಿರ್ಧಾರ ಕೈಗೊಲ್ಳಲಿದೆ ಎಂಬುದು ಜನರಲ್ಲಿರುವ ಕುತೂಹಲ. ಈ ಮಧ್ಯೆ ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲಾಕ್ಡೌನ್ ಕುರಿತು ಮೂರು ದಿನಗಳೊಳಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಬುಧವಾರ (ಮಾ.೧೯) ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ಕರೆದಿದ್ದಾರೆ. ನಾಳೆಯ ಸುದ್ದಿಗೋಷ್ಠಿಯಲ್ಲೇ ಲಾಕ್ಡೌನ್ ಬಗ್ಗೆ ಮುಖ್ಯಮಂತ್ರಿಗಳು ಸರ್ಕಾರದ ನಿರ್ಧಾರ ತಿಳಿಸುತ್ತಾರೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಈ ವಾರ ಸಚಿವ ಸಂಪುಟ ಸಭೆ ನಿಗದಿಯಾಗಿಲ್ಲ. ಹೀಗಾಗಿ ಲಾಕ್ಡೌನ್ ವಿಸ್ತರಣೆ ಕುರಿತಂತೆ ಹಿರಿಯ ಸಚಿವರ ಜೊತೆ ಚರ್ಚಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಳೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಲಾಕ್ಡೌನ್ ವಿಸ್ತರಣೆ ಮಾಡಿದರೂ ಸಹ ಕೈಗಾರಿಕೆ ಸೇರಿದಂತೆ ಕೆಲ ಆಯ್ದ ವಲಯಗಳಿಗೆ ವಿನಾಯಿತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಮಾತ್ರವಲ್ಲದೇ ಲಾಕ್ಡೌನ್ ಸಂದರ್ಭದಲ್ಲಿ ಜನರ ಜೀವನ ನಿರ್ವಹಣೆಯೂ ಸರ್ಕಾರದ ಜವಾಬ್ದಾರಿ ಆಗಿರುವುದರರಿಂದ ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತ ಊಟ ಹಾಗೂ ಪಡಿತರ ಚೀಟಿ ಹೊಂದಿರುವವರಿಗೆ ಧವಸ ಧಾನ್ಯಗಳನ್ನ ನೀಡುವ ಬಗ್ಗೆ ಹಾಗೂ ವಿಶೇಷ ಪ್ಯಾಕೇಜ್ ಬಗ್ಗೆ ನಾಳೆ ಮುಖ್ಯಮಂತ್ರಿಗಳು ಘೋಷಣೆ ಮಾಡುವ ಸಾಧ್ಯತೆ ಇದೆ.


ನಿಮ್ಮ ಕಾಮೆಂಟ್ ಬರೆಯಿರಿ