ಬೆಂಗಳೂರು: ಕೊರೊನಾ ಹೆಚ್ಚಳದ ಕಾರಣಕ್ಕೆ ದ್ವಿತೀಯ ಪಿಯು ಪರೀಕ್ಷೆ ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳನ್ನು ಪಾಸು ಮಾಡಿ ಆದೇಶ ಹೊರಡಿಸಿದ್ದ ಸರ್ಕಾರಕ್ಕೆ ಗುರುವಾರದ ವರೆಗೆ ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ತಡೆ ನೀಡಿದೆ.
ರಿಪೀಟರ್ಸ್ಗೆ ಪರೀಕ್ಷೆ ಇರುತ್ತದೆ ಎಂದು ಹೇಳಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ ಎಂದು ನ್ಯೂಸ್18 ಕನ್ನಡ.ಕಾಮ್ ವರದಿ ಮಾಡಿದೆ.
ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಿದ ಬಳಿಕ ರಿಪೀಟರ್ಸ್ಗಳು ತಮಗೆ ಸರ್ಕಾರ ಅನ್ಯಾಯ ಮಾಡಿದೆ, ತಮಗೆ ಮಾತ್ರ ಪರೀಕ್ಷೆ ನಡೆಸಿ ತಾರತಮ್ಯ ಎಸಲಾಗುತ್ತಿದೆ ಎಂದು ಹೇಳಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಸದ್ಯ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸದಂತೆ ತಡೆ ನೀಡಿದೆ ಎಂದು ವರದಿ ಹೇಳಿದೆ.
ಗುರುವಾರದ ತನಕ ಪಿಯುಸಿ ಫಲಿತಾಂಶ ಪ್ರಕಟ ಮಾಡದಿರುವಂತೆ ಹೈಕೋರ್ಟ್ ಸೂಚಿಸಿದೆ. ಈ ವಿಚಾರ ಕುರಿತು ಸರ್ಕಾರದ ಅಡ್ವೋಕೇಟ್ ಜನರಲ್ಗೆ ಗುರುವಾರದೊಳಗೆ ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಸಿಂಗ್ರೇಗೌಡ ಎಂಬವರು ರಿಪೀಟರ್ಸ್ ಪರವಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಕೊರೊನಾ ಹೆಚ್ಚಳದಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ದ್ವಿತೀಯ ಪಿಯು ಪರೀಕ್ಷೆ ರದ್ದುಗೊಳಿಸಿತ್ತು. ಎಸ್ಎಸ್ಎಲ್ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ಗ್ರೇಡಿಂಗ್ ಮಾದರಿಯಲ್ಲಿ ಫಲಿತಾಂಶ ನೀಡುವುದಾಗಿ ಹೇಳಿತ್ತು. ಇದಾದ ಕೆಲವು ದಿನಗಳ ಬಳಿಕ ರಿಪೀಟರ್ಸ್ಗೆ ಪರೀಕ್ಷೆ ಇರುತ್ತದೆ ಎಂದು ಹೇಳಿತ್ತು. ಹೀಗಾಗಿ ರಿಪೀಟರ್ಸ್ಗಳು ಹೈಕೋರ್ಟ್ ಮೊರೆ ಹೋಗಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ