ಮೈಸೂರು: ಸದ್ಯ ದೇಶದಲ್ಲಿ ಮೂರನೇ ಅಲೆಯ ಆತಂಕ ಸೃಷ್ಟಿಸಿರುವ ಡೆಲ್ಟಾ ಪ್ಲಸ್ ರೂಪಾಂತರಿ ಕರ್ನಾಟಕಕ್ಕೂ ಕಾಲಿಟ್ಟಿದ್ದು ರೋಗಲಕ್ಷಣವಿಲ್ಲದ ಕೊರೊನಾ ರೋಗಿಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಪತ್ತೆಯಾಗಿದೆ.
ಕೋವಿಡ್ -19 ಜೀನೋಮಿಕ್ ಕಣ್ಗಾವಲು ಸಮಿತಿಯ ಅಧ್ಯಕ್ಷ ಡಾ.ವಿ.ರವಿ ಅವರು ಮೈಸೂರಿನಲ್ಲಿ ಮೊದಲ ಡೆಲ್ಟಾ ಪ್ಲಸ್ ಪತ್ತೆಯಾಗಿರುವುದನ್ನು ದೃಢಪಡಿಸಿದ್ದಾರೆ. ಕನ್ನಡಪ್ರಭ.ಕಾಮ್ ವರದಿ ಮಾಡಿದೆ.
ಈ ರೂಪಾಂತರವು ಹೆಚ್ಚು ಹರಡುವುದಿಲ್ಲ. ಆದರೆ ಕೇವಲ ಸಾಮಾಜಿಕ ಮಾಧ್ಯಮಗಳ ವದಂತಿಯಾಗಿದೆ. ನಮಗೆ ತಿಳಿದಿರುವ ಸಂಗತಿಯೆಂದರೆ, ಈ ರೂಪಾಂತರದಿಂದ ಸೋಂಕಿತ ರೋಗಿಗಳ ಮೇಲೆ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯು ಕಾರ್ಯನಿರ್ವಹಿಸುವುದಿಲ್ಲ. ಆದರೆ ಇದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಜೂನ್ 22ರ ವರೆಗೆ ಕರ್ನಾಟಕದಲ್ಲಿ ಡೆಲ್ಟಾ ಪ್ಲಸ್ ರೂಪಾಂತರದ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದರು. ಎನ್ಸಿಬಿಎಸ್ನಲ್ಲಿ ಪರೀಕ್ಷಿಸಿದ ಮಾದರಿಗಳಲ್ಲಿ ಒಂದು ವಾಸ್ತವವಾಗಿ ತಮಿಳುನಾಡಿನಿಂದ ಬಂದಿದೆ. ಹೀಗಾಗಿ ಕರ್ನಾಟಕದಲ್ಲಿ ಇದು ಮೊದಲ ಪ್ರಕರಣವಾಗಿದೆ.
ಈ ರೂಪಾಂತರವು ಅಸ್ತಿತ್ವದಲ್ಲಿರುವ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ತೀವ್ರ ಅಥವಾ ಹರಡುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಈ ರೂಪಾಂತರದ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಲಾಗುತ್ತಿದೆ ಎಂದು ಡಾ. ಸುಧಾಕರ್ ಹೇಳಿದರು.
ವೈರಸ್ ರೂಪಾಂತರಗೊಳ್ಳುವುದಾಗಿ ನಮಗೆ ತಿಳಿದಿದೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು ಭಾರತದಲ್ಲಿ ಇದುವರೆಗೆ 8572 ರೂಪಾಂತರಗಳನ್ನು ಪತ್ತೆಹಚ್ಚಿದೆ. ಡೆಲ್ಟಾ ಪ್ಲಸ್ ರೂಪಾಂತರ(ಎವೈ 1) ಮೂರನೇ ಅಲೆಗೆ ಕಾರಣವಾಗುತ್ತದೆ ಎಂದು ತಿಳಿದಿಲ್ಲ. ಆದರೆ ನಾವು ಜಾಗರೂಕರಾಗಿರಬೇಕು. ಮೂರನೇ ಅಲೆಗೆ ಯಾವ ರೂಪಾಂತರ ಕಾರಣವಾಗಲಿದೆ ಎಂದು ತಿಳಿದಿಲ್ಲ ಎಂದು ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ