ಅಂತರ್ ಮತೀಯ ಪ್ರೇಮಿಗಳ ಬರ್ಬರವಾಗಿ ಹತ್ಯೆ ಮಾಡಿದ ಯುವತಿ ಕುಟುಂಬ

ವಿಜಯಪುರ: ಹಿಂದೂ ಹುಡುಗನನ್ನ ಪ್ರೀತಿಸಿದ ಕಾರಣಕ್ಕೆ ಮುಸ್ಲಿಂ ಹುಡುಗಿಯ ತಂದೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮರ್ಯಾದ ಹತ್ಯೆ ಕಂಡು ಗುಮ್ಮಟನಗರಿ ಬೆಚ್ಚಿಬಿದ್ದಿದೆ.
ಯುವಕನ ತಾಯಿ ಕಣ್ಣು ಮುಂದೆಯೇ ಇಡೀ ಘಟನೆ ನಡೆದಿದ್ದು, ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಬಾಲಕಿಯ ತಂದೆ ಹಾಗೂ ಆಕೆಯ ಸಹೋದರ ಸೇರಿ ಮಗಳು ಹಾಗೂ ಆಕೆಯ ಪ್ರಿಯಕರನ್ನು ಭರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಈ ಕುರಿತು ನ್ಯೂಸ್‌18 ಕನ್ನಡ ವರದಿ ಮಾಡಿದೆ.ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಗಡಿ ಗ್ರಾಮ ಸಲಾದಹಳ್ಳಿಯಲ್ಲಿ ಘಟನೆ ನಡೆದಿದೆ. ಗ್ರಾಮದ ಯುವಕ ಬಸವರಾಜ ಬಡಿಗೇರ (19)ಹಾಗೂ ಪಕ್ಕದ ಗ್ರಾಮ ಖಾನಾಪುರದ 18 ವರ್ಷದ ಯುವತಿ ಕೊಲೆಯಾದವರು ಎಂದು ಗುರುತಿಸಲಾಗಿದೆ.
ಯುವತಿ ತನ್ನ ಪ್ರಿಯಕರ ಬಸವರಾಜ ಬಡಿಗೇರ ಭೇಟಿಯಾಗಿದ್ದ ವೇಳೆ ಇಬ್ಬರನ್ನೂ ಒಟ್ಟಿಗೆ ಕಂಡ ಯುವತಿಯ ಕುಟುಂಬಸ್ಥರು ಇಬ್ಬರನ್ನೂ ಕೊಲೆ ಮಾಡಿದ್ದು, ಯುವತಿಯ ತಂದೆ ಹಾಗೂ ಆತನ ಅಳಿಯಂದಿರು ಕಲ್ಲು ಹಾಗೂ ಚಾಕು ಬಳಸಿ ಇಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ವರದಿ ಹೇಳಿದೆ.
ಎರಡು ವರ್ಷಗಳ ಹಿಂದೆ ಯುವತಿ ಖಾನಾಪುರ ಗ್ರಾಮದಿಂದ ಸಲಾದಹಳ್ಳಿಯಲ್ಲಿರುವ ತನ್ನ ಅಜ್ಜನ ಮನೆಗೆ ಬಂದು ವಾಸವಾಗಿದ್ದಳು. ಇದೇ ಗ್ರಾಮದಲ್ಲಿ ಆಟೋ ಚಾಲಕನಾಗಿದ್ದ ಬಸವರಾಜ್ ಪರಿಚಯವಾಗಿತ್ತು. ಇಬ್ಬರ ಮಧ್ಯೆ ಸ್ನೇಹ ಬೆಳೆದು ಅದು ಪ್ರೇಮಾಂಕುರಕ್ಕೆ ಕಾರಣವಾಗಿತ್ತು. ಆದರೆ ಇವರಿಬ್ಬರ ಪ್ರೇಮಕ್ಕೆ ಯುವತಿ ಮನೆಯವರ ತೀವ್ರ ವಿರೋಧವಿತ್ತು. ಇಷ್ಟಾದರೂ ಆಟೋ ಡ್ರೈವರ್ ಬಸವರಾಜ್ ಹಾಗೂ ಯುವತಿ ನಡುವೆ ಪ್ರೀತಿ ಕಡಿಮೆಯಾಗಿರಲಿಲ್ಲ. ಆರು ತಿಂಗಳ ಹಿಂದೆ ಮನೆಯವರಿಗೆ ಈ ವಿಚಾರ ತಿಳಿದ ಬಳಿಕ ಇಬ್ಬರಿಗೂ ಎಚ್ಚರಿಕೆ ನೀಡಲಾಗಿತ್ತು. ಆದರೂ
ಆಗಾಗ ಇಬ್ಬರೂ ಭೇಟಿಯಾಗುತ್ತಿದ್ದರು. ಅದೇ ರೀತಿ ಮಂಗಳವಅರವೂ ಇಬ್ಬರು ಪ್ರೇಮಿಗಳು ಸಲಾದಹಳ್ಳಿ ಗ್ರಾಮದ ಹೊರ ಭಾಗದಲ್ಲಿ ಒಟ್ಟಿಗೆ ಇದ್ದರು. ಈ ವೇಳೆ ಸ್ಥಳಕ್ಕೆ ಬಂದ ಯುವತಿಯ ಅಜ್ಜ ಇಬ್ಬರನ್ನೂ ವಿಚಾರಣೆ ನಡೆಸಿದ್ದಾನೆ. ಬಳಿಕ ಯುವಕನನ್ನು ಗ್ರಾಮದಲ್ಲಿ ಸುತ್ತಾಡಿಸಿ ತಮ್ಮ ತೋಟಕ್ಕೆ ಕರೆದುಕೊಂಡು ಹೋಗಿ ಕಟ್ಟಿಹಾಕಿ ಹಲ್ಲೆ ಮಾಡಿದ್ದಾರೆ. ಈ ವಿಷಯ ತಿಳಿದ ಯುವಕನ ಕುಟುಂಬಸ್ಥರು ಸ್ಥಳಕ್ಕೆ ತೆರಳಿ ಮಗನನ್ನು ಬಿಡಲು ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಯುವತಿಯ ಅಜ್ಜ, ಆಕೆಯ ಸಹೋದರ ಹಾಗೂ ಮಾವಂದಿರು ಯುವಕನ ತಾಯಿ ಹಾಗೂ ಸಹೋದರನ ಮುಂದೆಯೇ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ಯುವತಿಯ ತಂದೆ ಬಂದಗಿಸಾಬ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.ಘಟನೆ ಕುರಿತು ಯವತಿ ತಂದೆ ಬಂದಗಿಸಾಬ್, ಸಹೋದರ ದಾವಲ್‌ಪಟೇಲ್, ಅಳಿಯರಾದ ಲಾಳೆಸಾಬ್, ಅಲ್ಲಾಪಟೇಲ್ ರಫೀಕ್ ಸೇರಿದಂತೆ ಐದು ಜನರ ವಿರುದ್ಧ ಕಲಕೇರಿ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement