ಕೃಷಿ ಸಚಿವರ ತವರು ಜಿಲ್ಲೆಯಲ್ಲೇ 3 ದಿನದಲ್ಲಿ ನಾಲ್ಕು ರೈತರು ಆತ್ಮಹತ್ಯೆ ..!

posted in: ರಾಜ್ಯ | 0

ಹಾವೇರಿ: ಅನ್ನದಾತ ರೈತರ ಆತ್ಮಹತ್ಯೆ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ. ಆದರೆ, ಕೃಷಿ ಸಚವರು ತವರು ಜಿಲ್ಲೆಯಾಗಿರುವ ಹಾವೇರಿ ಜಿಲ್ಲೆಯಲ್ಲಿ ಮೂರು ದಿನಗಳ ಅಂತರದಲ್ಲಿ ನಾಲ್ಕು ಜನ ರೈತರು ಸಾಲದ ಬಾಧೆ ತಾಳದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ತವರು ಜಿಲ್ಲೆಯಲ್ಲೇ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, ಶುಕ್ರವಾರ ಮುಂಜಾನೆಯೇ ಮತ್ತೊಬ್ಬ ರೈತ ಸಾಲದ ಭಾಧೆಗೆ ಭಯಗೊಂಡು ತನ್ನ ಮನೆಯಲ್ಲಿದ್ದ ಹಿಟ್ಟಿನ ಗಿರಣಿಯಲ್ಲೇ ನೇಣಿಗೆ ಶರಣಾಗಿದ್ದಾರೆ. ಇದರಿಂದಾಗಿ ಜೆಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ.

ವೀರಪ್ಪ, ಭರಮಪ್ಪ, ಬಸಪ್ಪ, ಹನುಮಂತಪ್ಪ ಮೃತ ರೈತರು.

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಬಸಪ್ಪ ಉಗ್ಗಿ(೪೫) ಕೆನರಾ ಬ್ಯಾಂಕಿನಲ್ಲಿ ೭೦ ಸಾವಿರ ರೂಪಾಯಿ ಸಾಲ, ಕೈಗಡ ೧೦ ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು. ಹೈನುಗಾರಿಕೆಗೆಂದು ತಂದಿದ್ದ ಎತ್ತು, ಎಮ್ಮೆಗಳ ಮೇಲೂ ಲೋನ್ ಪಡೆದಿದ್ದರು. ಬಿತ್ತನೆ ಮಾಡಿದ್ದ ಈರುಳ್ಳಿ ಬೆಳೆಯೂ ಹಾಳಾಗಿ ಸಾಲಕ್ಕೆ ಹೆದರಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ರಟ್ಟಿಹಳ್ಳಿ ತಾಲೂಕಿನ ನಾಗವಂದ ಹಾಗೂ ಮಾವಿನತೋಪು ಗ್ರಾಮಗಳಲ್ಲಿ ಗುರುವಾರ ಒಂದೇ ದಿನ ಪ್ರತ್ಯೇಕ ಘಟನೆಯಲ್ಲಿ ರೈತರಾದ ವೀರಪ್ಪ ಆನ್ವೇರಿ (೫೨) ಮತ್ತು ಭರಮಪ್ಪ ಕುರುಬರ (೫೨) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೀರಪ್ಪ ಆನ್ವೇರಿ ಅವರು ಕೆವಿಜಿ ಬ್ಯಾಂಕಿನಲ್ಲಿ ೧.೧೦ ಲಕ್ಷ ರೂ. ಹಾಗೂ ಕೈಗಡವಾಗಿ ೨ ಲಕ್ಷ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಪೋಕ್ಸೊ ಪ್ರಕರಣ | ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು: ಆಘಾತ ವ್ಯಕ್ತಪಡಿಸಿದ ಹೈಕೋರ್ಟ್‌

ಭರಮಪ್ಪ ಅವರು ಕೆಜಿಬಿ ಬ್ಯಾಂಕಿನಲ್ಲಿ ೩ ಲಕ್ಷ ರೂ., ದೇವರಾಜ ಅರಸು ನಿಗಮದಲ್ಲಿ ೧ ಲಕ್ಷ ರೂ. ಹಾಗೂ  ಕೈಗಡವಾಗಿ ೩ ಲಕ್ಷ ರೂ. ಸಾಲ ಪಡೆದಿದ್ದರು. ಇವರು ಬಿತ್ತನೆ ಮಾಡಿದ್ದ ಬೆಳೆ ಹಾನಿಯಾಗಿ ತೀವ್ರ ನಷ್ಟ ಅನುಭವಿಸಿದ್ದರು. ಸಾಲ ತೀರಿಸುವುದು ಹೇಗೆ ಎಂದು ಭಯಗೊಂಡ ಇವರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಣೇಬೆನ್ನೂರು ತಾಲೂಕಿನ ರೈತ ಹನುಮಂತಪ್ಪ ಸಾಲದ ಶೂಲಕ್ಕೆ ಸಿಲುಕಿ ಬುಧವಾರ ಸಾವಿನ ಮನೆಯ ಕದ ತಟ್ಟಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement