ಶಿರಸಿ: ರಾಜ್ಯದಲ್ಲಿ ಸದ್ಯ ಎದ್ದಿರುವ ರಾಜಕೀಯ ಡೊಂಬರಾಟ, ಮುಖ್ಯಮಂತ್ರಿ ಬದಲಾವಣೆ ವಿಚಾರ ಅತಿ ಶೀಘ್ರದಲ್ಲಿಯೇ ಸುಖಾಂತ್ಯ ಕಾಣಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಭವಿಷ್ಯ ಹೇಳಿರುವ ಸ್ವಾಮೀಜಿ ರಾಜ್ಯದಲ್ಲಿ ಎದ್ದಿರುವ ರಾಜಕೀಯ ವಿಪ್ಲವ ಸುಖಾಂತ್ಯ ಕಾಣಲಿದೆ ಎಂದು ಪುನರುಚ್ಚರಿಸಿದ್ದಾರೆ.
ಬೇಟೆಗಾರನೊಬ್ಬನಿಂದ ತಪ್ಪಿಸಿಕೊಂಡ ಜಿಂಕೆ ಸನ್ಯಾಸಿಯೊಬ್ಬನ ಎದುರು ಹಾದು ಓಡಿಹೋಗಿತ್ತು. ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಬೇಟೆಗಾರ ಕೇಳಿದಾಗ ದ್ವಂದ್ವ ಉಂಟಾಯಿತು. ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾವಿಗೆ ಕಾರಣ ಆಗುತ್ತದೆ. ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂಬ ಸಂಕಟ ಉಂಟಾಯಿತು. ಇದೇ ವಿಚಾರ ರಾಜಕೀಯದ ಬಗ್ಗೆ ಹೇಳಲು ತೊಡಕಾಗುತ್ತದೆ. ಆದರೆ ಸದ್ಯವೇ ಈ ಸ್ಥಿತಿ ಸುಖಾಂತ್ಯ ಕಾಣಲಿದೆ ಎಂದು ಶ್ರೀಗಳು ಹೇಳಿದ್ದಾರೆ.
ಬಹುದೊಡ್ಡ ಅವಘಡ:
ಬರುವ ಸಂಕ್ರಾಂತಿಯ ಒಳಗೆ ಜಗತ್ತನ್ನು ತಲ್ಲಣಿಸುವ ಬಹುದೊಡ್ಡ ಅವಘಡ ಸಂಭವಿಸಲಿದೆ. ನವೆಂಬರ್ನಿಂದ ಸಂಕ್ರಾಂತಿ ನಡುವೆ ದೇಶ ಮಟ್ಟದಲ್ಲಿ ದೊಡ್ಡ ರಾಜಕೀಯ ಅವಘಡ ಸಂಭವಿಸಲಿದೆ. ಅದು ಜಾಗತಿಕವಾಗಿ ತಲ್ಲಣ ಸೃಷ್ಟಿಸುತ್ತದೆ ಎಂದೂ ಕೋಡಿ ಶ್ರೀಗಳು ಹೇಳಿದ್ದಾರೆ.
ಆಗಸ್ಟ್ ೩ನೇ ವಾರದಿಂದ ರೋಗ ರುಜಿನಗಳು ಹೆಚ್ಚಾಗಲಿವೆ. ಜನವರಿ ತಿಂಗಳ ವರೆಗೂ ರೋಗ ರುಜಿನಗಳು ಹೀಗೆಯೇ ಇರಲಿವೆ. ಜನ ಭೀತಿಯಿಂದ ಸಾಯುತ್ತಿದ್ದಾರೆಯೇ ವಿನಃ ಕಾಯಿಲೆಯಿಂದಲ್ಲ ಎಂದು ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ