ಬಾಗಲಕೋಟೆ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2020-21 ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದ್ದು, ಬಾಗಲಕೋಟೆ ತಾಲೂಕಿನ ಗಂಗಮ್ಮ ಹುಡೇದ ಎಲ್ಲ ಕೊರತೆಗಳನ್ನು ಮೆಟ್ಟಿ ನಿಂತು 625ಕ್ಕೆ 625 ಅಂಕ ಪಡೆದು ಎಲ್ಲರಿಗೂ ಪ್ರೇರಣೆದಾಯಕ ಸಾಧನೆ ಮಾಡಿದ್ದಾಳೆ ಎಂದು ವರದಿಯಾಗಿದೆ.
ಅವಳ ಸಾಧನೆ ಯಾಕೆ ಮಹತ್ವದ್ದು ಹಾಗೂ ಪ್ರೇರಣಾದಾಯಕ ಎಂಬುದನ್ನು ಗಮನಿಸಿದರೆ ಅದು ಅಸಾಮಾನ್ಯ ಸಾಧನೆ ಎನಿಸಿಕೊಳ್ಳುತ್ತದೆ. ಗಂಗಮ್ಮ ಹುಡೇದ ಉತ್ತಮ ಆರೋಗ್ಯ ಪಡೆದುಕೊಂಡು ಬಂದಿಲ್ಲ. ಗಂಗಮ್ಮ ಹೃದ್ರೋಗದಿಂದ ಬಳಲುತ್ತಿದ್ದಾಳೆ ಮತ್ತು ಅದರಿಂದ ಬಾಲ್ಯದಿಂದಲೇ ತೊಂದರೆ ಅನುಭವಿಸುತ್ತಿದ್ದಾಳೆ. ಈ ಹೃದಯದ ತೊಂದರೆ ಅವಳನ್ನು ಪರೀಕ್ಷೆಯ ಸಂದರ್ಭದಲ್ಲೂ ಕಾಡಿದೆ. ಆದರೂ ಆಕೆ ಧೃತಿಗೆಡಲಿಲ್ಲ.
ಎಂದು ಟಿವಿ9 ಕನ್ನಡ.ಕಾಮ್ ವರದಿ ಮಾಡಿದೆ.
ಈ ಪ್ರತಿಭಾವಂತ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿಯ ಕೊನೆ ಪರೀಕ್ಷೆ ಬರೆಯುವಾಗ ಹೃದಯ ನೋವು ಶುರುವಾಗಿ ಉಸಿರಾಟದ ಸಮಸ್ಯೆ ಆರಂಭವಾಗಿದೆ. ಆಗ ಅವಳು ಧೃತಿಗೆಡಲಿಲ್ಲ. ಆಸ್ಪತ್ರೆಗೂ ಹೋಗಲಿಲ್ಲ. ಈ ದಿಟ್ಟ ಹುಡುಗಿ ತನಗೆ ಆಕ್ಸಿಜನ್ ವ್ಯವಸ್ಥೆ ಮಾಡುವಂತೆ ಪರೀಕ್ಷಾ ಹಾಲ್ನಲ್ಲಿದ್ದವರಿಗೆ ವಿನಂತಿ ಮಾಡಿ ಪರೀಕ್ಷೆ ಬರೆಯುವುದನ್ನು ಮುಂದುವರೆಸಿದ್ದಾಳೆ.
ಪರೀಕ್ಷಾಕೇಂದ್ರದಲ್ಲಿದ್ದವರು ತಡಮಾಡದೆ ಅವಳಿಗೆ ಆಮ್ಲಜನಕದ ವ್ಯವಸ್ಥೆ ಮಾಡಿದ್ದಾರೆ ಎಂದು ವರದಿ ಹೇಳಿದೆ.
ಪರೀಕ್ಷೆಯ ಕೊನೆ ಅರ್ಧಗಂಟೆಯ ಗಂಗಮ್ಮ ಆಮ್ಲಜನಕದ ಬೆಂಬಲದಲ್ಲಿಯೇ ಪರೀಕ್ಷೆ ಬರೆದಿದ್ದಾಳೆ..! ಇದು ಸಾಮಾನ್ಯ ಸಂಗತಿಯಲ್ಲ. ಆದರೆ ಗಂಗಮ್ಮಳ ಸಾಧನೆ ನೋಡಿ ಈಕೆಗೆ ದೇವರು ಮೆಚ್ಚಿದ್ದಾನೆ. , ಆಕೆ ಎಲ್ಲ 625ಕ್ಕೆ 625 ಅಂಕಗಳನ್ನುಪಡೆದಿದ್ದಾಳೆ.
ಗಂಗಮ್ಮ ಬಾಗಲಕೋಟೆ ತಾಲ್ಲೂಕಿನಲ್ಲಿರುವ ಮುಚಖಂಡಿ ತಾಂಡಾದ ದುರ್ಗಾದೇವಿ ಪ್ರೌಢಶಾಲೆ ವಿದ್ಯಾರ್ಥಿನಿ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಅಗಿರುವ ತಂದೆ ಬಸವರಾಜ ಹುಡೇದ ಮತ್ತು ಆಶಾ ಕಾರ್ಯಕರ್ತೆ ಗೀತಾ ಅವರ ಮುದ್ದಿನ ಮಗಳಾಗಿರುವ ಗಂಗಮ್ಮ. ಗಂಗಮ್ಮ ಟ್ಯೂಷನ್ ಬಗ್ಗೆ ಯೋಚನೆ ಸಹ ಮಾಡದೆ, ಬೇರೆಯವರಿಂದ ನೆರವು ಪಡೆಯುವ ಗೋಜಿಗೂ ಹೋಗದೆ ಈ ಸಾಧನೆ ಮಾಡಿದ್ದಾಳೆ.
ಕಾರಜೋಳರಿಂದ ಚಿಕಿತ್ಸೆ ಕೊಡಿಸುವ ಭರವಸೆ..:
2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ತಾಂಡಾದ ಶ್ರೀ ದುರ್ಗಾದೇವಿ ಹೈಸ್ಕೂಲಿನ ವಿದ್ಯಾರ್ಥಿನಿ ಗಂಗಮ್ಮ ಬಸಪ್ಪ ಹುಡೇದ 625ಕ್ಕೆ 625 ಅಂಕ ಪಡೆದುಕೊಂಡಿದ್ದಕ್ಕೆ ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ. ಕಾರಜೋಳ ಅಭಿನಂದಿಸಿದ್ದಾರೆ.
ಬಾಲಕಿಗೆ ಹೃದಯ ಸಂಬಂಧಿ ಕಾಯಿಲೆಇರುವುದು ಮಾಧ್ಯಮಗಳಿಂದ ತಿಳಿದಾಗ ಕೂಡಲೇ ಬಾಲಕಿ ಹಾಗೂ ಅವರ ಪೋಷಕರೊಂದಿಗೆ ಮಾತನಾಡಿದ್ದಾರೆ. ಬಾಲಕಿಗೆ ಹೃದಯ ಸಂಬಂಧಿ ರೋಗ, ಉಸಿರಾಟದ ತೊಂದರೆ ಇರುವುದನ್ನು ಧೃಡಪಡಿಸಿಕೊಂಡು, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕರೆಮಾಡಿ, ಬಾಲಕಿಗೆ ತಪಾಸಣೆಗೊಳಪಡಿಸಿ ಚಿಕಿತ್ಸೆ ನೀಡಿ, ಹೆಚ್ವಿನ ಚಿಕಿತ್ಸೆಯ ಅಗತ್ಯವಿದ್ದರೆ ಜಯದೇವ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಳ್ಳಬೇಕು ಸೂಚಿಸಿದ್ದಾರೆ. ಅಲ್ಲದೆ, ಜಯದೇವ ಆಸ್ಪತ್ರೆಯ ನಿರ್ದೇಶಕರಿಗೂ ಉತ್ತಮ ಚಿಕಿತ್ಸೆ ನೀಡುವಂತೆ ಕೋರುವುದಾಗಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ