ಸ್ಪೀಕರ್‌ ಬಳಿ ಸಮಯ ಕೇಳಿದ ಆನಂದ ಸಿಂಗ್‌: ರಾಜೀನಾಮೆ ಸುದ್ದಿಗೆ ಮತ್ತಷ್ಟು ಪುಷ್ಟಿ, ಈಗ ಬಿಎಸ್‌ ವೈ ಎಂಟ್ರಿ..ಮುಂದೇನು..?

ಬೆಂಗಳೂರು: ತಮ್ಮ ನಿರೀಕ್ಷೆಯಂತೆ ಖಾತೆ ನೀಡದಿರುವುದಕ್ಕೆ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂಭವವಿದೆ. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಸಮಯಾವಕಾಶವನ್ನು ಅವರು ಕೇಳಿದ್ದು ಅವರ ರಾಜೀನಾಮೆ ವದಂತಿಗೆ ಇನ್ನಷ್ಟು ರೆಕ್ಕೆಪುಕ್ಕಗಳು ಬರುವಂತೆ ಮಾಡಿದೆ.ಆದರೆ ಈಗ ಈಗ ಬೊಮ್ಮಾಯಿ ಅವರ ವಿನಂತಿ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆನಂದ ಸಿಂಗ್‌ ಜೊತೆಗೆ ಮಾತುಕತೆಗೆ ಮುಂದಾಗಿದ್ದಾರೆ ತಿಳಿದುಬಂದಿದೆ. ಇದು ಯಶಸ್ವಿಯಾಗುವುದೇ ಕಾದು ನೋಡಬೇಕಿದೆ.
ಆನಂದ ಸಿಂಗ್‌ ಅವರು ನಾಳೆ ಬೆಳಗ್ಗೆ ಸ್ಪೀಕರ್‌ ಕಾಗೇರಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದ್ದು, ಆ ಸಮಯದಲ್ಲಿ ಅವರು ಶಾಸಕ ಸ್ಥಾನಕ್ಕೆ ತಮ್ಮ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಂದು ಕಡೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರು ದೆಹಲಿಯಲ್ಲಿ ಲಾಬಿ ನಡೆಸಿದ್ದರೆ ಮತ್ತೊಂದು ಕಡೆ ನಿರೀಕ್ಷಿತ ಖಾತೆ ಸಿಗದಿರುವುದಕ್ಕೆ ಕೆಲವು ಸಚಿವರು ಕ್ಯಾತೆ ತೆಗೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಆಡಳಿತಾರೂಢ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರವಾಗಿದೆ. ಇನ್ನೊಂದು ಕಡೆ ಆನಂದ್ ಸಿಂಗ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾದ್ಯಕ್ಷ ನಳೀನಕುಮಾರ ಕಟೀಲು ಸೇರಿದಂತೆ ಅನೇಕರು ಮನವೊಲಿಸುವ ಪ್ರಯತ್ನವನ್ನು ನಡೆಸಿದ್ದಾರೆ. ಆದರೆ ಈವರೆಗೆ ಪ್ರಯತ್ನಗಳು ಫಲ ನೀಡಿಲ್ಲ.
ವಿಜಯನಗರದಿಂದ ಬೆಂಗಳೂರಿಗೆ ಇಂದು (ಬುಧವಾರ) ಆಗಮಿಸಲಿರುವ ಆನಂದ್ ಸಿಂಗ್ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಒಂದು ವೇಳೆ ಅವರ ಸಂಧಾನ ಯಶಸ್ವಿಯಾದರೆ ರಾಜೀನಾಮೆ ನಿರ್ಧಾರ ಕೈಬಿಡಬಹುದು. ಯಡಿಯೂರಪ್ಪ ಅವರಿಂದಲೂ ಭರವಸೆ ಸಿಗದಿದ್ದರೆ ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂಭವವಿದೆ ಎಂದು ರಾಜಕೀಯ ವಲಯದಲ್ಲಿ ವದಂತಿ ಹಬ್ಬಿದೆ.
ತಮ್ಮ ಆಪ್ತರ ಬಳಿ ಆನಂದ್ ಸಿಂಗ್ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಮಾತನಾಡಿದ್ದಾರೆ ಮುಂದೆ ಉಪಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಒಂದು ಮೂಲದ ಪ್ರಕಾರ ಆನಂದ್ ಸಿಂಗ್ ಕಳೆದ ಭಾನುವಾರವೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ, ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಹಾಗೂ ಇದೊಂದು ಕೇವಲ ಊಹಾಪೋಹ ಎಂದು ಹೇಳಿದ್ದಾರೆ.
ಇನ್ನು ಹೊಸಪೇಟೆಯಲ್ಲಿ ಬೆಳಗ್ಗೆ ಮಾಧ್ಯಮಗಳಿಗೆ ಸಚಿವ ಆನಂದ್ ಸಿಂಗ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಯವರ ತೀರ್ಮಾನವೇ ಅಂತಿಮ, ಎಲ್ಲವನ್ನೂ ಅವರಿಗೆ ಬಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಆನಂದ್ ಸಿಂಗ್ ರಾಜೀನಾಮೆ ನೀಡುತ್ತಾರೆ ಎನ್ನುವುದಕ್ಕೆ ಪುಷ್ಟಿ ನೀಡುವಂತೆ ಹಲವು ವಿದ್ಯಾಮಾನಗಳು ನಡೆದಿವೆ. ನಿನ್ನೆ ಹೊಸಪೇಟೆಯಲ್ಲಿ ತಮ್ಮ ಶಾಸಕರ ಕಚೇರಿ ತೆರವುಗೊಳಿಸಿದ್ದಾರೆ. ಖಾಸಗಿ ವಾಹನದಲ್ಲಿಯೇ ಓಡಾಡುತ್ತಿದ್ದಾರೆ. ಆನಂದ್ ಸಿಂಗ್ ಅವರು ಆರಂಭದಲ್ಲಿ ಇಂಧನ ಅಥವಾ ಲೋಕೋಪಯೋಗಿ ಇಲಾಖೆ ಕೇಳಿದ್ದರು, ಆದರೆ ಅವರಿಗೆ ಪ್ರವಾಸೋದ್ಯಮ, ಪರಿಸರ ಮತ್ತು ಅರಣ್ಯ ಖಾತೆ ನೀಡಲಾಗಿದೆ. ತಮಗೆ ನೀಡಿದ ಖಾತೆ ಬಗ್ಗೆ ಬಹಿರಂಗವಾಗಿಯೇ ವಾರದ ಹಿಂದೆ ಆನಂದ್ ಸಿಂಗ್ ಅಸಮಾಧಾನ ತೋಡಿಕೊಂಡಿದ್ದರು, ಅಲ್ಲದೆ ಇನ್ನು ಕೆಲವು ದಿನಗಳಲ್ಲಿಯೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದಿದ್ದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌: ವೀಡಿಯೊ ನೀಡಿದ್ದು ನಾನೇ ಎಂದಿದ್ದ ಮಾಜಿ ಕಾರು ಚಾಲಕ ಕಾರ್ತಿಕ್ ನಾಪತ್ತೆ...!?

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement