ಶಿಲ್ಲಾಂಗ್: ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಖಾಸಗಿ ನಿವಾಸಕ್ಕೆ ಭಾನುವಾರ ರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.
ವಾಹನಗಳಲ್ಲಿ ಬಂದಿರುವ ದಾಳಿಕೋರರು ಪೆಟ್ರೋಲ್ ತುಂಬಿದ್ದ ಎರಡು ಬಾಟಲಿಗಳನ್ನು ಸಂಗ್ಮಾ ಅವರ ಖಾಸಗಿ ಆವರಣಕ್ಕೆ ಎಸೆದು ಪರಾರಿಯಾಗಿದ್ದಾರೆ. ಒಂದನ್ನು ಮನೆಯ ಮುಂಭಾಗಕ್ಕೂ, ಮತ್ತೊಂದು ಬಾಟಲಿಯನ್ನು ಮನೆಯ ಹಿಂಭಾಗಕ್ಕೆ ಎಸೆಯಲಾಗಿದೆ. ಸ್ಥಳದಲ್ಲಿದ್ದ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಿದ್ದಾರೆ. ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ, 2018ರಲ್ಲಿ ಶರಣಾಗಿದ್ದ ಬಂಡುಕೋರನ ಹತ್ಯೆ ಹಿನ್ನೆಲೆಯಲ್ಲಿ ಶಿಲ್ಲಾಂಗ್ನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಗೃಹ ಸಚಿವ ಲಹ್ಕ್ಮೆನ್ ರಿಂಬುಯಿ ರಾಜೀನಾಮೆ ನೀಡಿದ್ದಾರೆ.
ನಿಷೇಧಿತ ಹಿನ್ನೀವ್ಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ನ ಸ್ವಯಂ-ಘೋಷಿತ ಪ್ರಧಾನ ಕಾರ್ಯದರ್ಶಿ ಚೆರಿಸ್ಟರ್ಫೀಲ್ಡ್ ತಂಗ್ಕೀವ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ ನ್ಯಾಯಾಂಗ ತನಿಖೆಯನ್ನು ಸ್ಥಾಪಿಸುವಂತೆ ರೈಂಬುಯಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
2018 ರಲ್ಲಿ ಶರಣಾಗಿದ್ದ ತಂಗ್ಕೀವ್, ಆಗಸ್ಟ್ 13 ರಂದು ರಾಜ್ಯದಲ್ಲಿ ನಡೆದ ಸರಣಿ ಐಇಡಿ ಸ್ಫೋಟಗಳಿಗೆ ಸಂಬಂಧಿಸಿದಂತೆ ಆತನ ಮನೆಯ ಮೇಲೆ ದಾಳಿ ನಡೆಸಿದಾಗ ಪೊಲೀಸ್ ತಂಡದ ಮೇಲೆ ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದಾಗ ಗುಂಡು ಹಾರಿಸಿದ ವೇಳೆ ಮೃತಪಟ್ಟಿದ್ದಾನೆ.
ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯ ರಾಜಧಾನಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಘರ್ಷಣೆ, ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶಿಲ್ಲಾಂಗ್ನಲ್ಲಿ ಕರ್ಫ್ಯೂ ವಿಧಿಸಿದೆ. ಕನಿಷ್ಠ ನಾಲ್ಕು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ನಿರ್ಬಂಧಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ