ಬೆಂಗಳೂರು: ಮುಜರಾಯಿ ಇಲಾಖೆ ದೇವಾಲಯಗಳ ಅರ್ಚಕರು ಮತ್ತು ಸಿಬ್ಬಂದಿಗೆ ರಾಜ್ಯ ಸರ್ಕಾರ ಭರ್ಜರಿ ದಸರಾ ಗಿಫ್ಟ್ ನೀಡಿದೆ,ಅರ್ಚಕರು, ಸಿಬ್ಬಂದಿಗೆ 6ನೇ ವೇತನ ಶ್ರೇಣಿ ಜಾರಿಗೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಬೆಂಗಳೂರಿನಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಸರಾ ಹಬ್ಬದ ನಿಮಿತ್ತ ಮೂರು ನಾಲ್ಕು ಯೋಜನೆ ಜಾರಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ 1ರಿಂದ 6ನೇ ವೇತನ ಶ್ರೇಣಿ ಜಾರಿಗೆ ಬರುವಂತೆ ನಿರ್ಧಾರ ಮಾಡಲಾಗಿದೆ. ಕೆಲವು ಷರತ್ತುಗಳನ್ನು ವಿಧಿಸಿ, ದೇವಾಲಯದ ವಾರ್ಷಿಕ ಆದಾಯದಲ್ಲಿ ನೌಕರರ ವೇತನ ಶೇ35%ರಷ್ಟು ಮೀರದಂತೆ ನೌಕರರನ್ನು 6ನೇವೇತನ ಆಯೋಗದ ವ್ಯಾಪ್ತಿಗೆ ಒಳಪಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಇದರಿಂದ ಮುಜರಾಯಿ ಇಲಾಖೆಯ ಸುಮಾರು 1034 ಸಿಬ್ಬಂದಿಗೆ ಪ್ರಯೋಜನವಾಗಲಿದೆ. ಇದಕ್ಕೆ 20 ಕೋಟಿ ರೂ. ವೆಚ್ಚವಾಗಲಿದ್ದು, ಆಯಾ ದೇವಸ್ಥಾನಗಳ ಆದಾಯದಿಂದ ಒದಗಿಸಲಾಗುವುದು. ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಸಚಿವರು ಹೇಳಿದರು.
ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಒಳಿತಿಗಾಗಿ ವಿಜಯ ದಶಮಿ ದಿನ ಅಂದರೆ ಅಕ್ಟೋಬರ್ 15ರಂದು ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಮಕ್ಕಳ ಆರೋಗ್ಯ ರಕ್ಷಣೆಗಾಗಿ ವಿಶೇಷ ಪೂಜೆ ಸಲ್ಲಿಸಬೇಕು. ರಾಜ್ಯದ A ಗ್ರೇಡ್ನ 205 ದೇಗುಲಗಳಲ್ಲಿ ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್ಮೆಂಟ್ ಸಿಸ್ಟಂ ಜಾರಿಗೆ ತರಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ದೇಗುಲಕ್ಕೆ ಸಂಬಂಧಿಸಿದ ಪೂರ್ಣ ಮಾಹಿತಿ, ಸೇವಾ ವಿವರ, ದೇವಸ್ಥಾನಗಳ ಚರಾಸ್ತಿ, ಸ್ಥಿರಾಸ್ತಿಯ ಮಾಹಿತಿ ತಂತ್ರಾಂಶದಲ್ಲಿ ಲಭ್ಯವಾಗಲಿದೆ. ಪಾರದರ್ಶಕತೆ ಕಾಪಾಡಲು ಹೊಸ ಸಾಫ್ಟ್ವೇರ್ ಅಳವಡಿಕೆ ಮಾಡಲಾಗುತ್ತದೆ. ಧಾರ್ಮಿಕ ದತ್ತಿ ಇಲಾಖೆಯ ಅರ್ಚಕರು, ನೌಕರರಿಗೆ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಜಾರಿಗೊಳಿಸಲಾಗುತ್ತೆ. ನಾನು ಇಲಾಖೆಯ ಜವಾಬ್ದಾಾರಿ ತೆಗೆದುಕೊಂಡ ಮೇಲೆ ಅವರದ ರಕ್ಷಣೆಗೆ ವಿನೂತನ ವಿಮೆ ಯೋಜನೆ ಜಾರಿಗೊಳಿಸಿದ್ದು, ಅರ್ಚಕರು ಹಾಗೂ ಇಲಾಖೆ ನೌಕರರಿಗೆ ವಿಮೆ ಜಾರಿಗೆ ತರಲು ತೀರ್ಮಾನಿಸಿದ್ದೇನೆ. ಇದರಿಂದ ಮುಜರಾಯಿ ಇಲಾಖೆಯ ಸುಮಾರು 37,000 ಸಿಬ್ಬಂದಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.
ವಾರ್ಷಿಕವಾಗಿ 1.22 ಕೋಟಿ ರೂ. ವೆಚ್ಚದಲ್ಲಿ ಅರ್ಚಕರಿಗೆ ವಿಮೆ ಸೌಲಭ್ಯ, ಆರೋಗ್ಯ ವಿಮೆ ಹಾಗೂ ಅಪಘಾತ ವಿಮೆ ಜಾರಿಗೆ ಚಿಂತನೆ ನಡೆಯುತ್ತಿದೆ. ವಿಜಯದ ಸಂಕೇತವಾಗಿ ಆಚರಣೆ ಮಾಡುವ ದಿನ ವಿಜಯ ದಶಮಿ ಹೀಗಾಗಿ ಈ ದಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂದು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಈ ವೇಳೆ ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಇದ್ದರು.
ನಿಮ್ಮ ಕಾಮೆಂಟ್ ಬರೆಯಿರಿ