ಪಣಜಿ: ಗಡಿಯಲ್ಲಿ ಯಾವುದೇ ರೀತಿಯ ಉಪಟಳ, ದಾಳಿಗಳನ್ನೂ ನಾವು ಸಹಿಸುವುದಿಲ್ಲ. ಪದೇಪದೇ ನಿಯಮ ಉಲ್ಲಂಘನೆ ಮಾಡಿದರೆ, ನಾವು ಇನ್ನಷ್ಟು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ’ ಎಂದು ಗೃಹಸಚಿವ ಅಮಿತ್ ಶಾ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗೋವಾದ ಧರ್ಬಂದೋರಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತಿಕ್ರಮಣ, ಕಾಶ್ಮೀರದಲ್ಲಿ ನಾಗರಿಕರ ಹತ್ಯೆಯಂಥ ಕೃತ್ಯಗಳು ಮುಂದುವರಿದರೆ ಇನ್ನೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಿಶ್ಚಿತ ಎಂದು ಎಚ್ಚರಿಸಿದ್ದಾರೆ.
ಮನೋಹರ್ ಪರಿಕ್ಕರ್ ರಕ್ಷಣಾ ಮಂತ್ರಿಯಾಗಿದ್ದಾಗ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಒಂದು ಮಹತ್ವದ ಹೆಜ್ಜೆ. ಭಾರತದ ಗಡಿ ಪ್ರದೇಶಕ್ಕೆ ತೊಂದರೆ ನೀಡುವ ಯಾರನ್ನೂ ನಾವು ಬಿಡುವುದಿಲ್ಲ ಎಂದು ಆಗ ಸರ್ಜಿಕಲ್ ಸ್ಟ್ರೈಕ್ ಮೂಲಕ ಸಂದೇಶ ನೀಡಿದ್ದೇವೆ. ಹಿಂದೆ ಮಾತುಕತೆಗೆ ಸಮಯವಿತ್ತು. ಆದರೆ ಈಗ ಮಾತುಕತೆಗೆ ಅರ್ಥ ಉಳಿದಿಲ್ಲ. ಹೀಗಾಗಿ ಏನಿದ್ದರೂ ತೆಗೆದುಕೊಂಡಿದ್ದಕ್ಕೆ ತಿರುಗಿ ಕೊಡುವುದನ್ನು ಮಾತ್ರ ಮಾಡುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಭಾರತ ಪಾಕಿಸ್ತಾನದ ಉಗ್ರನೆಲೆಗಳ ಮೇಲೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಇಂದಿಗೂ ಮೈನವಿರೇಳಿಸುವ ಒಂದು ಸಂದರ್ಭ. ಉರಿಯಲ್ಲಿ ಯೋಧರ ಮೇಲೆ ನಡೆದ ಉಗ್ರದಾಳಿಗೆ ಪ್ರತೀಕಾರವಾಗಿ 2016ರ ಸೆಪ್ಟೆಂಬರ್ 29ರಂದು ಭಾರತ ಪಾಕಿಸ್ತಾನದ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿತ್ತು. ಉರಿಯಲ್ಲಿ ದಾಳಿ ನಡೆಸಿದ್ದು ಜೈಷ್ ಎ ಮೊಹಮ್ಮದ್ ಸಂಘಟನೆ ಎಂಬುದು ಸಾಬೀತಾಗಿತ್ತು. ಇವರ ದಾಳಿಗೆ ಸುಮಾರು 19 ಯೋಧರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಸೇನೆ ನಡೆಸಿದ ದಾಳಿಯಲ್ಲಿ 20ಕ್ಕೂ ಹೆಚ್ಚಿನ ಉಗ್ರರು ಮೃತರಾಗಿದ್ದರು. ಅದಾದ ನಂತರ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ, ಸುಮಾರು 40 ಸೈನಿಕರನ್ನು ಹತ್ಯೆ ಮಾಡಿದ್ದ ಉಗ್ರರಿಗೆ ಭಾರತ ಬಾಲಾಕೋಟ್ ಏರ್ಸ್ಟ್ರೈಕ್ ಮೂಲಕ ಪಾಠ ಕಲಿಸಿತ್ತು. ಇದೀಗ ಪಾಕ್ ಅಂಥ ಕೃತ್ಯ ಮುಂದುವರಿಸಿದರೆ ಸರ್ಜಿಕಲ್ ಸ್ಟ್ರೈಕ್ ಮುಂದುವರಿಯುತ್ತದೆ ಎಂದು ಅಮಿತ್ ಶಾ ಎಚ್ಚರಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ