ಮುಂಬೈ: ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಬಾಲಿವುಡ್ ತಾರೆ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ಗೆ ಇಂದು (ಗುರುವಾರ) ಸಹ ಜಾಮೀನು ಸಿಗಲಿಲ್ಲ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ)ಗೆ ಹೇಳಿಕೆ ಸಲ್ಲಿಸಲು ಅವಕಾಶ ನೀಡಿದ ಮುಂಬೈನ ವಿಶೇಷ ಎನ್ಡಿಪಿಎಸ್ ಕೋರ್ಟ್, ಜಾಮೀನು ಅರ್ಜಿ ವಿಚಾರಣೆ ಮುಂದೂಡಿತ್ತು. ಇಂದು (ಗುರವಾರ) ವಿಚಾರಣೆ ನಡೆಸಿದ ನ್ಯಾಯಾಲಯ ತನ್ನ ಆದೇಶವನ್ನು ಅಕ್ಟೋಬರ್ 20ರ ವರೆಗೆ ಕಾಯ್ದಿರಿಸಿದೆ. ನ್ಯಾಯಧೀಶ ವಿ.ವಿ. ಪಾಟೀಲ್ ಆದೇಶವನ್ನು ಕಾಯ್ದಿರಿಸಿದ್ದಾರೆ. ಸದ್ಯ ಆರ್ಯನ್ ಖಾನ್ ಅ.20ರ ವರೆಗೆ ಜೈಲಿನಲ್ಲೇ ಕಾಲ ಕಳೆಯಬೇಕಿದೆ.
ಜಾಮೀನು ಅರ್ಜಿಗೆ ಹೇಳಿಕೆ ಸಲ್ಲಿಸಲು ಎನ್ಸಿಬಿ ವಕೀಲರು ಶುಕ್ರವಾರದ ವರೆಗೆ ಕಾಲಾವಕಾಶ ಕೋರಿದರು. ಆದರೆ ನ್ಯಾಯಾಲಯ ಬುಧವಾರದೊಳಗೆ ಹೇಳಿಕೆ ಸಲ್ಲಿಸಬೇಕೆಂದು ಸೂಚಿಸಿ, ವಿಚಾರಣೆ ಮುಂದೂಡಿತ್ತು. ಇದೀಗ ಪ್ರಕರಣದ ಆದೇಶವನ್ನು ಅ.20ರ ವರೆಗೆ ಕಾಯ್ದಿರಿಸಿದೆ.
ಅಕ್ಟೋಬರ್ 2 ರಂದು ಮುಂಬೈ ಕರಾವಳಿಯಲ್ಲಿ ಕಾರ್ಡೆಲಿಯಾ ಕ್ರೂಸಸ್ ಹಡಗಿನ ಮೇಲೆ ಎನ್ ಸಿಬಿ ದಾಳಿ ನಡೆಸಿದ ನಂತರ ಆರ್ಯನ್ ಖಾನ್ ನನ್ನು ಬಂಧಿಸಲಾಯಿತು. ಹಡಗಿನಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಹಡಗಿನಲ್ಲಿದ್ದರು.
ಆರ್ಯನ್ ಖಾನ್ ಜೊತೆಗೆ ಮುನ್ಮುನ್ ಧಮೇಚಾ, ಅರ್ಬಾಜ್ ಮರ್ಚೆಂಟ್, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ಗೋಮಿತ್ ಚೋಪ್ರಾ, ನೂಪುರ್ ಸತಿಜಾ, ಮತ್ತು ವಿಕ್ರಾಂತ್ ಚೋಕರ್ ಜೊತೆ ಇತರ ಏಳು ಜನರನ್ನು ಬಂಧಿಸಲಾಯಿತು. ಈ ಪ್ರಕರಣದಲ್ಲಿ ಈವರೆಗೆ ಒಟ್ಟು ಇಪ್ಪತ್ತು ಜನರನ್ನು ಬಂಧಿಸಲಾಗಿದೆ.
ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 7 ರಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ