ಬೆಂಗಳೂರು: ‘ದುಬೈ ಎಕ್ಸ್ ಪೋ 2020’ ಭೇಟಿ ಯಶಸ್ವಿಯಾಗಿದ್ದು, ರಾಜ್ಯದಲ್ಲಿ ಬಂಡವಾಳ ಹೂಡಲು ಅನೇಕ ಪ್ರತಿಷ್ಠಿತ ಉದ್ಯಮಿಗಳು ಮುಂದೆ ಬಂದಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ನಾಲ್ಕು ದಿನಗಳ ದುಬೈ ಪ್ರವಾಸದ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳಲ್ಲಿ ಕಾಲ ನಡೆದ ದುಬೈ ಎಕ್ಸ್ ಪೋದಲ್ಲಿ ಐಟಿಬಿಟಿ ಸಚಿವ ಡಾ. ಅಶ್ವಥ್ ನಾರಾಯಣ, ದುಬೈ-ಭಾರತೀಯ ಕೌನ್ಸಿಲರ್ ಡಾ. ಅಮನ್ ಪುರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಐಟಿಬಿಟಿ ನಿರ್ದೇಶಕ ಮೀನಾ ನಾಗರಾಜ್, ಕೆ ಐಎಡಿಬಿ ಸಿಇಒ ಡಾ.ಎನ್.ಶಿವಶಂಕರ ಅಧಿಕಾರಿಗಳ ನೇತೃತ್ವದ ನಿಯೋಗವು ಉದ್ಯಮಿಗಳನ್ನು ಭೇಟಿಯಾಗಿ ರಾಜ್ಯದಲ್ಲಿ ಬಂಡವಾಳ ಹೂಡಲು ಮನವರಿಕೆ ಮಾಡಿದೆವು. ಬಹುತೇಕ ಉದ್ಯಮಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ ಎಂದರು.
ಲುಲು ಗ್ರೂಪ್, ಮುಬದಾಲ , ಕೆಇಎಪ್ ಹೋಲ್ಡಿಂಗ್ಸ್ ದುಕಬ್, ಎಲೆಕ್ಟ್ರಿಕ್ ವೇ ಡಿಪಿ ವಲ್ಡ್ ,ಅಸ್ಟರ್ ಹೆಲ್ತ್ ಕೇರ್, ಎ.1 ಶಂಶಿ ಟ್ರಾವೆಲರ್ಸ್ , ಬಿಎಲ್ಎಸ್ ಇಂಟರ್ನ್ಯಾಷನಲ್, ಯುನೈಟೆಡ್ ಪಾರ್ಕ್ ಅಂಡ್ ಸರ್ವೀಸ್, ಎಕ್ಸ್ ಪೋರ್ಟ್ ಬಹ್ರೇನ್ , ಎಐಎಂಎಲ, ತಗ್ಲೀಪ್ ಇಂಡಸ್ಟ್ರೀಸ್ ಸೇರಿದಂತೆ ಅನೇಕ ಕಂಪನಿಗಳು ಬಂಡವಾಳ ಹೂಡಿಕೆಗೆ ಸಮ್ಮತಿಸಿದೆ. ಯುನೆಟೆಡ್ ಅರಬ್ ಎಮಿರೈಟ್ ಮೂಲದ ಪ್ರತಿಷ್ಠಿತ ಗಲ್ಫ್ ಇಸ್ಲಾಮಿಕ್ ಇನ್ವೆಸ್ಟಮೆಂಟ್ ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ತೆರೆಯಲು ಸಮ್ಮತಿಸಿದೆ. ಮುಂದಿನ ದಿನಗಳಲ್ಲಿ ಸುಮಾರು ₹3500 ಕೋಟಿ ಮುಂದಿನ ವರ್ಷಗಳಲ್ಲಿ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಮಾಹಿತಿ ನೀಡಿದರು
ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಉದ್ಯೋಗ ಸೃಷ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನೀರು, ವಿದ್ಯುತ್, ಭೂಮಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದ್ದೇವೆ. 2022ರ ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ‘ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಿದ್ದು, ಈ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಉದ್ಯಮಿಗಳು ರಾಜ್ಯಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆಗೆ ವಿಪುಲ ಅವಕಾಶ..
ಅಕ್ಟೋಬರ್ 15-21ರ ವರೆ ನಡೆದ ಒಂದು ವಾರದ “ಬಾಹ್ಯಾಕಾಶ ಸಪ್ತಾಹ”ಕ್ಕೆ ಕರ್ನಾಟಕ ಸಾಕ್ಷಿಯಾಯಿತು. ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಕರ್ನಾಟಕದ ಪ್ರಾಮುಖ್ಯತೆ ಮತ್ತು ಸಾಮರ್ಥ್ಯವನ್ನು ಪ್ರತಿಪಾದಿಸುವುದರ ಜತೆಗೆ, ರಾಜ್ಯದಲ್ಲಿ ಹೂಡಿಕೆಗೆ ಇರುವ ವಿಸ್ತೃತ ಅವಕಾಶಗಳ ಮೇಲೆ ಬೆಳಕು ಚೆಲ್ಲಿತು. ಕರ್ನಾಟಕದಲ್ಲಿ ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿರುವ ವಿಪುಲ ಅವಕಾಶಗಳ ಬಗ್ಗೆ ಇಂಡಿಯಾ ಪೆವಿಲಿಯನ್ನಲ್ಲಿ ನಡೆದ ಸಮಾವೇಶದಲ್ಲಿ ಇಸ್ರೋ ಸೇರಿದಂತೆ ಬಾಹ್ಯಾಕಾಶ ವಲಯದ ಸ್ಟಾರ್ಟ್ಅಪ್ಗಳು ಭಾಗವಹಿಸಿದ್ದವು ಎಂದು ಹೇಳಿದರು.
ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ರಾಜ್ಯವು ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ಕರ್ನಾಟಕವು ಭಾರತದ ಅತಿದೊಡ್ಡ ಅಂತರಿಕ್ಷ ಕ್ಲಸ್ಟರ್ ಆಗಿರುವುದಲ್ಲದೆ, ಭಾರತದಲ್ಲಿ ಬೃಹತ್ ಎಲೆಕ್ಟ್ರಿಕಲ್ ಯಂತ್ರಗಳ 2ನೇ ಅತಿದೊಡ್ಡ ಉತ್ಪಾದನಾ ರಾಜ್ಯವಾಗಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ವಿದೇಶಿ ನೇರ ಹೂಡಿಕೆ ಮಾಡುವಂತೆ ಸಚಿವ ಮುರುಗೇಶ್ ನಿರಾಣಿ ಮನವಿ ಮಾಡಿದರು.
‘ಕರ್ನಾಟಕ- ನೌ & ಬಿಯಾಂಡ್’:
ಕರ್ನಾಟಕ- ನೌ & ಬಿಯಾಂಡ್’ ವಿಶಿಷ್ಟ ಕಾರ್ಯಕ್ರಮದ ಮೂಲಕ ಗಲ್ಫ್ ಸೇರಿದಂತೆ ವಿಶ್ವದ 200ಕ್ಕೂ ಹೆಚ್ಚು ಪ್ರಮುಖ ಕೈಗಾರಿಕೋದ್ಯಮಿಗಳಿಗೆ, ಹೂಡಿಕೆಗೆ ಕರ್ನಾಟಕ ಪ್ರಶಸ್ತ ಸ್ಥಳ ಎಂದು ಮನದಟ್ಟು ಮಾಡಿದ್ದೇವೆ. ಎಕ್ಸ್ಪೋದಲ್ಲಿ ಏರೋಸ್ಪೇಸ್, ಡಿಫೆನ್ಸ್, ಸ್ಟಾರ್ಟ್ಅಪ್ ಸಮಾವೇಶಗಳನ್ನು ಆಯೋಜಿಸುವ ಮೂಲಕ ಈ ವಲಯಗಳಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಮಾಹಿತಿಯನ್ನು ಅಲ್ಲಿ ಸೇರಿದ್ದ ಉದ್ಯಮಿಗಳ ಮುಂದಿಡಲಾಗಿದೆ. ಸ್ಟಾರ್ಟ್ಅಪ್ಗಳ ಜತೆಗೆ ಪ್ರತ್ಯೇಕ ಸಭೆ ನಡೆಸುವ ಜತೆಗೆ ಉದ್ಯಮ ಲೋಕದ ದಿಗ್ಗಜರನ್ನು ಭೇಟಿ ಮಾಡಿ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಲಾಯಿತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ