ಘಟಪ್ರಭಾ ಕಾಲುವೆಗೆ ಉರುಳಿಬಿದ್ದ ಕಾರು : ಸ್ಥಳದಲ್ಲೇ ನಾಲ್ವರು ಸಾವು, ಇಬ್ಬರಿಗೆ ಗಂಭೀರ ಗಾಯ

ಬಾಗಲಕೋಟೆ : ಘಟಪ್ರಭಾ ಕಾಲುವೆಗೆ ಕಾರು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಕಿ ಗ್ರಾಮದ ಬಳಿ ನಡೆದಿದೆ .
ಹಲಕಿ ಗ್ರಾಮದ ಬಳಿ ಕಲ್ಲಿಗೆ ಡಿಕ್ಕಿಯಾದ ಕಾರು ಘಟಪ್ರಭಾ ಕಾಲುವೆಗೆ ಪಲ್ಟಿಯಾಗಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ತಡರಾತ್ರಿ ಈ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಆರು ಜನ ಮುಧೋಳದಿಂದ ರಾಮದುರ್ಗದ ಕಡೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕಲ್ಲಿಗೆ ಕಾರು ಡಿಕ್ಕಿ ಹೊಡೆದು ಕಾಲುವೆಗೆ ಉರುಳಿ ಬಿದ್ದಿದೆ. ಕಾರಿನೊಳಗಿದ್ದ ಮಹದೇವಗೌಡ (27), ಎರಿತಾತಾ (26), ವಿಜಯ್ (26) , ಸುನೀಲ್ (24) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ರಾಮದುರ್ಗ ತಾಲೂಕಿನವರು ಎನ್ನಲಾಗಿದೆ.ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಶವವನ್ನು ಕ್ರೇನ್‌ ಮೂಲಕ ಮೇಲಕ್ಕೆತ್ತಲಾಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement