ಶಿರಸಿ: ಸುಮಾರು ಐದು ಕೋಟಿ ರೂ. ಮೌಲ್ಯದ ನಿಷೇಧಿತ ಅಂಬರ್ ಗ್ರೀಸ್ (ತಿಮಿಂಗಿಲದ ವಾಂತಿ) ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಬೆಳಗಾವಿ ಮೂಲದ ಸಂತೋಷ್ ಕಾಮತ್, ಶಿರಸಿಯ ಮರಾಠಿಕೊಪ್ಪದ ರಾಜೇಶ ಬಂಧಿತ ಆರೋಪಿಗಳಾಗಿದ್ದು, ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ರವಿ ಡಿ ನಾಯ್ಕ್ ನೇತೃತ್ವದಲ್ಲಿ ಸಿಪಿಐ ರಾಮಚಂದ್ರ ನಾಯಕ್, ಪಿಎಸ್ಐ ಭೀಮಾಶಂಕರ್, ಪಿಎಸ್ಐ ಈರಯ್ಯ ನೇತೃತ್ವದಲ್ಲಿ ದಾಳಿ ನಡೆದಿದ್ದು ಐದು ಕೋಟಿ ಮೌಲ್ಯದ ಐದು ಕೆಜಿ ಅಂಬರ್ ಗ್ರೀಸ್ ಅನ್ನು ವಶಕ್ಕೆ ಪಡೆಯಲಾಗಿದೆ.ಹಾವೇರಿಯ ಅನ್ನಪೂರ್ಣ ಎಂಬ ಮಹಿಳೆ ಬಳಿ ಅಂಬರಗೀಸ್ ಪಡೆದ ಮಾಹಿತಿ ದೊರೆತ ಪೊಲೀಸರು ದಾಳಿ ನಡೆಸಿದ್ದರು. ಆರೋಪಿ ಅನ್ನಪೂರ್ಣ ಅವರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದೇವೆ ಎಂದು ಸಿ.ಪಿ.ಐ ರಾಮಚಂದ್ರ ನಾಯಕ ತಿಳಿಸಿದ್ದಾರೆ.
ತಿಮಿಂಗಿಲದ ವಾಂತಿಗೆ ಇಷ್ಟೊಂದು ಮೌಲ್ಯ ಯಾಕೆ..?
ಸಮುದ್ರದಲ್ಲಿ ತಿಮಿಂಗಿಲವು ತಿಂದ ಆಹಾರವು ಜೀರ್ಣಿಸಿಕೊಳ್ಳಲಾಗದೇ ಮರಳಿ ಅದನ್ನು ಹೊರ ಕಕ್ಕುತ್ತವೆ. ಈ ಹೊರ ಕಕ್ಕಿದ ಆಹಾರವು ದ್ರವರೂಪದಲ್ಲಿ ಗಟ್ಟಿಯಾಗಿರುತ್ತದೆ. ಇದಕ್ಕೆ ಅಂಬರ್ ಗ್ರೀಸ್ ಎಂದು ಕರೆಯಲಾಗುತ್ತದೆ. ಈ ದ್ರವರೂಪದ ಗಟ್ಟಿಯಾದ ವಸ್ತುವು ಮೊದಲು ಸಮುದ್ರ ಆಳದಲ್ಲಿ ಇದ್ದು ನಂತರ ಕೆಲವು ರಾಸಾಯನಿಕ ಕ್ರಿಯೆಯ ಮೂಲಕ ಸಮುದ್ರದಲ್ಲಿ ತೇಲುತ್ತವೆ. ಇವುಗಳನ್ನು ಹೊರದೇಶಗಳಲ್ಲಿ ಸುಗಂದ ದ್ರವ್ಯ ತಯಾರಿಸಲು ಬಳಸಲಾಗುತ್ತದೆ. ಹೀಗೆ ತೇಲಿದ ಅಂಬರ್ ಗ್ರೀಸ್ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಬಾಳುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೇಜಿ ತಿಮಿಂಗಿಲದ ವಾಂತಿಗೆ ಒಂದು ಕೋಟಿ ರೂ.ಗಳಷ್ಟು ಮೌಲ್ಯವಿದೆ. ಅರಣ್ಯ ಕಾಯ್ದೆಯಡಿ ಈ ತಿಮಿಂಗಿಲದ ವಾಂತಿಯನ್ನು ಮಾರಾಟಮಾಡುವುದು ಭಾರತದಲ್ಲಿ ಸಂಪೂರ್ಣ ನಿರ್ಬಂಧಿಸಲಾಗಿದೆ. ಹೀಗಾಗಿ ಇಲ್ಲಿಂದ ಬೇರೆದೇಶಗಳಿಗೆ ಕಳ್ಳ ಸಾಗಣೆ ಮಾಡಲಾಗುತ್ತದೆ.
ಜಿಲ್ಲೆಯಲ್ಲಿ ಈ ಹಿಂದೆ ಮುರುಡೇಶ್ವರದಲ್ಲಿ ಒಂದು ಕೆಜಿಗೂ ಹೆಚ್ಚು ಮೌಲ್ಯದ ಅಂಬರ್ ಗ್ರೀಸ್ ಇತ್ತೀಚೆಗೆ ದೊರಕಿತ್ತು. ಇದನ್ನು ಅರಣ್ಯ ಇಲಾಖೆಗೆ ನೀಡಲಾಗಿತ್ತು. ಈಗ ಐದು ಕೆಜಿಯಷ್ಟು ತೂಕದ ತಿಮಿಂಗಿಲದ ವಾಂತಿ ದೊರೆತಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಕೋಟ್ಯಂತರ ರೂ.ಗಳಷ್ಟು ಬೆಲೆ ಬಾಳುವ ಅಂಬರ್ ಗ್ರೀಸ್ ದೊರಕಿತ್ತು. ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ