ಜನರ ಮನೆ ಬಾಗಿಲಿಗೆ ಸರ್ಕಾರದ ಆಡಳಿತ: ಜನ ಸ್ಪಂದನ ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ, ೫೬ ಸೇವೆಗಳ ಸೇರ್ಪಡೆ

ಬೆಂಗಳೂರು: ಆಡಳಿತವನ್ನು ಜನರ ಮನೆಯ ಬಾಗಿಲಿಗೇ ತಲುಪಿಸುವ ಜನ ಸೇವಕ ಮತ್ತು ಜನ ಸ್ಪಂದನ ಯೋಜನೆ ರಾಜ್ಯದಲ್ಲಿ ಇಂದಿನಿಂದ ಜಾರಿಯಾಗಿದ್ದು, ರಾಜ್ಯದ ಜನತೆ ಸರ್ಕಾರದ ಸೇವೆಗಳನ್ನು ಮನೆ ಬಾಗಿಲಲ್ಲೇ ಪಡೆದುಕೊಳ್ಳಬಹುದಾಗಿದೆ.
ವಿಧಾನಸೌಧದಲ್ಲಿ ಕನ್ನಡ ರಾಜ್ಯೋತ್ಸವದ ದಿನ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನ ಸೇವಕ ಮತ್ತು ಜನ ಸ್ಪಂದನ ಯೋಜನೆಗೆ ಚಾಲನೆ ನೀದರು.
ನಾಗರಿಕರು ಸರ್ಕಾರದ ಸೇವೆ ಪಡೆಯಲು ಸಾಕಷ್ಟು ಸಮಸ್ಯೆಯಾಗುತ್ತಿದೆ. ನಾಗರಿಕರಿಗೆ ಅನುಕೂಲವಾಗುವ ಯೋಜನೆ ಜಾರಿಗೆ ತರಬೇಕು ಎಂಬುದು ಸರ್ಕಾರದ ಧೋರಣೆ. ಜನರು ದುಡ್ಡು ಕೊಟ್ಟು ಸೇವೆ ಪಡೆಯುವ ಸ್ಥಿತಿ ತಪ್ಪಿಸಲು ತಮ್ಮ ಸರ್ಕಾರ ಜನರ ಮನೆ ಬಾಗಿಲಿಗೆ ಸಕಲ ಸವಲತ್ತುಗಳನ್ನು ತಲುಪಿಸುವ ಯೋಜನೆ ರೂಪಿಸಿದೆ. ಜನರ ಮನೆ ಬಾಗಿಲಿಗೆ ಸೇವೆ ತಲುಪಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ. ಕೆಲಸದ ವಿಳಂಬವೂ ತಪ್ಪುತ್ತದೆ ಎಂದರು.
ಪ್ರಭುತ್ವದ ಶಕ್ತಿ ಕೆಲವೇ ಜನರ ಹಿಡಿತದಲ್ಲಿ ಇರಬಾರದು ಎಂಬ ಕಾರಣಕ್ಕೆ ಜನಸೇವಕ ಯೋಜನೆ ಜಾರಿಗೊಳಿಸಿದ್ದೇವೆ. ಆಡಳಿತ ಸುಧಾರಣಾ ಆಯೋಗದ ಜನಪರ ಶಿಫಾರಸ್ಸುಗಳನ್ನು ನವಂಬರ್ ೧ ರಿಂದ ಜಾರಿ ಮಾಡುವುದಾಗಿ ಹೇಳಿದ್ದೆ. ಕೊಟ್ಟ ಮಾತಿನಂತೆ ಯೋಜನೆ ಮಾಡುತ್ತಿದ್ದೇನೆ. ಬೆಂಗಳೂರಿನಿಂದ ಇಂದು ಪ್ರಾಯೋಗಿಕವಾಗಿ ಆರಂಭವಾಗಿರುವ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳು ಜನವರಿ ೨೬ರ ಹೊತ್ತಿಗೆ ರಾಜ್ಯದ ಎಲ್ಲೆಡೆ ಜಾರಿಯಾಗಲಿದೆ ಎಂದರು.
ಮನೆ ಬಾಗಿಲಿಗೆ ರೇಷನ್, ಪಿಂಚಣಿ, ಖಾತಾ ಹಂಚಿಕೆ, ವಿಧವಾ ವೇತನ, ವೃದ್ಧಾಪ್ಯ ವೇತನ, ಆದಾಯ/ಜಾತಿ ಪ್ರಮಾಣ ಪತ್ರ, ಆರೋಗ್ಯ ಕಾರ್ಡ್, ಆಧಾರ್ ಕಾರ್ಡ್, ಎಪಿಎಲ್ ಪಡಿತರ ಕಾರ್ಡ್, ಕಾರ್ಮಿಕ ಇಲಾಖೆಯ ಸವಲತ್ತುಗಳು ಹೀಗೆ ೫೬ ಸೇವೆಗಳನ್ನು ಜನಸೇವಕ ಯೋಜನೆಯಡಿ ಸೇರಿಸಲಾಗಿದೆ ಎಂದರು.
ಸರ್ಕಾರ ಈಗ ಜಾರಿ ಮಾಡಿರುವ ಜನಪರ ಯೋಜನೆಗಳು ಕ್ರಾಂತಿಕಾರಕವಾಗಿದ್ದು, ಈ ಯೋಜನೆಯನ್ನು ಜನವರಿ ೨೬ ರೊಳಗೆ ಗ್ರಾಮೀಣ ಪ್ರದೇಶದ ಜನರಿಗೂ ಕಲ್ಪಿಸಲಾಗುವುದು ಎಂದರು. ಈ ಯೋಜನೆಯಡಿ ಸಾರಿಗೆ ಇಲಾಖೆಯಲ್ಲಿ ಚಾಲನಾ ಲೈಸೆನ್ಸ್ ಪಡೆಯಲು ಸಾರಿಗೆ ಇಲಾಖೆಗೆ ಬರುವ ಅಗತ್ಯವಿಲ್ಲ. ಹಾಗೆಯೇ ವಾಹನ ನೋಂದಣಿಯನ್ನು ಕೂಡ ಡೀಲರ್ ಸಂಸ್ಥೆಯಿಂದಲೇ ಮಾಡಿಸಬಹುದು. ಪಡಿತರ ಸಹ ಜನರ ಮನೆ ಬಾಗಿಲಿಗೆ ತಲುಪಲಿದೆ ಎಂದರು.
ಯಾವುದೇ ಯೋಜನೆ, ಯಾವುದೇ ಕಾನೂನು ಮಾಡಿದ್ದರೂ ಪ್ರಾಮಾಣಿಕವಾಗಿದ್ದರೆ ಮಾತ್ರ ಅದು ಯಶಸ್ವಿಯಾಗುತ್ತದೆ. ಎಲ್ಲ ಸೇವೆಗಳ ಮೇಲುಸ್ತುವಾರಿ ನೋಡಿಕೊಳ್ಳಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿ ಇರುತ್ತದೆ. ಇಂದಿನಿಂದ ನಮ್ಮ ಸೇವೆಗಳು ನಮ್ಮ ಮಾಲೀಕರ ಬಳಿಗೆ ಹೋಗುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಾನು ಮುಖ್ಯಮಂತ್ರಿಯಾದ ವೇಳೆಯಲ್ಲಿ ಜನಪರ ಯೋಜನೆ ಜಾರಿಗೆ ತರುತ್ತೇನೆ ಎಂದು ಹೇಳಿದ್ದೆ. ಅದರಂತೆ ಮಾಜಿ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ ನೇತೃತ್ವದ ಆಡಳಿತ ಆಯೋಗದ ಶಿಫಾರಸ್ಸಿನಂತೆ ಜನಪರ ಯೋಜನೆಗಳನ್ನು ಇಂದಿನಿಂದ ಜಾರಿಗೆ ತರುತ್ತಿದ್ದೇನೆ ಎಂದರು.
ರಾಜ್ಯದ ಪ್ರತಿಯೊಬ್ಬರ ತಲಾ ಆದಾಯ ಹೆಚ್ಚಳವಾಗಬೇಕು. ದೇಶ ಒಟ್ಟು ತಲಾ ಆದಾಯದಲ್ಲಿ ರಾಜ್ಯ ೪ನೇ ಸ್ಥಾನದಲ್ಲಿದೆ. ರಾಜ್ಯದ ಶೇ. ೩೫ ರಷ್ಟು ಜನರ ತಲಾ ಆದಾಯ ಮಾತ್ರ ಹೆಚ್ಚಿದೆ. ಎಲ್ಲರ ಆದಾಯ ಹೆಚ್ಚಾಗಬೇಕು ಎಂಬುದು ನಮ್ಮ ಸರ್ಕಾರದ ಆಶಯ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಜನಸೇವಕ ಯೋಜನೆಯ ಜತೆಗೆ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ಜನಸ್ಪಂದನ-೧೮೦೨ ಸಹಾಯವಾಣಿ ಮೊಬೈಲ್ ಆಪ್ ಹಾಗೂ ವೆಬ್‌ಪೋರ್ಟಲ್‌ಗೂ ಚಾಲನೆ ನೀಡಿ ಸಾರಿಗೆ ಇಲಾಖೆಯ ೩೦ ಸಂಪರ್ಕ ರಹಿತ ಆನ್‌ಲೈನ್ ಸೇವೆಗಳನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ್, ಬಿ.ಸಿ. ನಾಗೇಶ್, ಶಾಸಕರಾದ  ಸುರೇಶ ಕುಮಾರ, ರಿಜ್ವಾನ್ ಅರ್ಷದ್, ಕಳಸಪ್ಪ ಬಂಡಿ, ಮಹಾಂತೇಶ್ ಕವಟಗಿಮಠ ಮತ್ತಿತರರು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಜನ ಸೇವಕ-ಜನಸ್ಪಂದನ ಯೋಜನೆ.. ಹಾಗೆಂದರೇನು..?
ಜನ ಸೇವಕ ಯೋಜನೆಯಡಿ ಆಧಾರ್ ಕಾರ್ಡ್, ಪಡಿತರ ಕಾರ್ಡ್, ಬಿಬಿಎಂಪಿಯ ವಿವಿಧ ಯೋಜನೆಗಳು, ಆರೋಗ್ಯ ಕಾರ್ಡ್, ಪಡಿತರ ವಿತರಣೆ ಹೀಗೆ ೫೬ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.
ಈ ಜನ ಸೇವಕ ಯೋಜನೆಯಡಿಯಲ್ಲಿ ಜನ ಸೇವಕರನ್ನು ನೇಮಿಸಲಾಗುತ್ತದೆ. ಜನರು ಈ ಸೇವೆ ಪಡೆಯಲು ದೂರವಾಣಿ ೦೮೦-೪೪೫೫೪೪೫೫ ಕರೆ ಮಾಡಬಹುದು ಅಥವಾ ಮೊಬೈಲ್ ಒನ್ ತಂತ್ರಾಂಶದಲ್ಲಿ ಕೋರಿ ಸಲ್ಲಿಸಬಹುದು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸಬಹುದು.
ಜನರು ನಿಗದಿಪಡಿಸಿದ ಸಮಯಕ್ಕೆ ಜನಸೇವಕರು ಸಂಬಂಧಿಸಿದ ಅರ್ಜಿ, ನಮೂನೆಗಳೊಂದಿಗೆ ಜನರ ಮನೆ ಬಾಗಿಲಿಗೆ ಹೋಗುತ್ತಾರೆ. ಮನೆಯಿಂದಲೇ ಅರ್ಜಿ ಪಡೆದು ಸೇವೆ ಒದಗಿಸಲಾಗುತ್ತದೆ.ಮನೆ ಬಾಗಿಲಿಗೆ ಪಡಿತರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಎಲ್ಲ ಸೌಲಭ್ಯಗಳನ್ನು ತಲುಪಿಸಲಾಗುತ್ತದೆ.
ಜನಸ್ಪಂದನ ಏಕೀಕೃತ ದೂರು ಪರಿಹಾರ ವ್ಯವಸ್ಥೆಯಾಗಿದೆ. ಜನರು ತಮ್ಮ ಕುಂದುಕೊರತೆಗಳನ್ನು ಇಲ್ಲಿ ದಾಖಲಿಸಬಹುದು.
ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ಒದಗಿಸುವ ಜನ ಸೇವಕ ಯೋಜನೆಗೆ ವಿಧಾನಸೌಧದ ಮುಂದೆ ಚಾಲನೆ ನೀಡಿದ ನಂತರ ಮುಖ್ಯಮಂತ್ರಿಗಳು ಖುದ್ದು ಜನರ ಬಳಿಗೆ ತೆರಳಿ ಜನಸೇವಕ ಯೋಜನೆಯಡಿ ಜನರ ಅರ್ಜಿಗಳನ್ನು ಸ್ವೀಕರಿಸಿದರು.
ಬೆಂಗಳೂರಿನ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ಯಾಲೇಸ್ ಗುಡ್ಡಹಳ್ಳಿಯ ೪ ಮತ್ತು ೫ನೇ ಅಡ್ಡರಸ್ತೆಯ ಕೆಲ ಮನೆಗಳಿಗೆ ಮುಖ್ಯಮಂತ್ರಿಗಳು ತೆರಳಿ ನಾಗರಿಕ ಸೇವೆಗಳನ್ನು ಕೋರುವ ಅರ್ಜಿಗಳನ್ನು ಸ್ವೀಕರಿಸಿದರು.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement