ಮುಂಬೈ: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರ ಮೇಲೆ ಆರೋಪಗಳು ಮೇಲೆ ಆರೋಪಗಳ ಮಳೆಯನ್ನೇ ಸುರಿಸುತ್ತಿದ್ದಾರೆ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್. ಆರೋಪಗಳ ನಂತರ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೇಡೆಗೆ ಈ ಪ್ರಕರಣದಿಂದ ಹೊರಗುಳಿಯುವಂತೆ ಆದೇಶಿಸಲಾಗಿದೆ. ಈಗ ಸಚಿವ ನವಾಬ್ ಮಲಿಕ್ ಮತ್ತೊಂದು ಆರೋಪ ಮಾಡಿದ್ದಾರೆ. ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಕಿಡ್ನಾಪ್ ಮಾಡಿ, ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ಮುಖಂಡ ಮೋಹಿತ್ ಕಂಬೋಜ್ ಅಲಿಯಾಸ್ ಮೋಹಿತ್ ಭಾರತೀಯ ಅವರು ಶನಿವಾರ (ನ.6) ಸುದ್ದಿಗೋಷ್ಠಿ ನಡೆಸಿ ಎನ್ಸಿಪಿ ನಾಯಕರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಅದರ ಬೆನ್ನಲ್ಲೇ ನವಾಬ್ ಮಲಿಕ್ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ. ‘ಆರ್ಯನ್ ಖಾನ್ ಬಂಧನದ ಹಿಂದೆ ಮಾಸ್ಟರ್ ಮೈಂಡ್ ಆಗಿ ಮೋಹಿತ್ ಕೆಲಸ ಮಾಡಿದ್ದಾರೆ. ಹಣಕ್ಕಾಗಿ ಶಾರುಖ್ಗೆ ಬೇಡಿಕೆ ಇಡುವಲ್ಲಿ ಸಮೀರ್ ವಾಂಖೇಡೆ ಮತ್ತು ಮೋಹಿತ್ ಪಾರ್ಟ್ನರ್ ಆಗಿದ್ದಾರೆ’ ಎಂದು ನವಾಬ್ ಮಲಿಕ್ ಆರೋಪಿಸಿದ್ದಾರೆ.
ಡ್ರಗ್ಸ್ ಪಾರ್ಟಿ ನಡೆದಿತ್ತು ಎನ್ನಲಾದ ಐಷಾರಾಮಿ ಹಡಗಿನಲ್ಲಿ ಆರ್ಯನ್ ಖಾನ್ ಅಂದು ಟಿಕೆಟ್ ಪಡೆದಿರಲಿಲ್ಲ. ಪ್ರತೀಕ್ ಗಾಬಾ ಮತ್ತು ಆಮಿರ್ ಫರ್ನೀಚರ್ವಾಲ್ ಅವರು ಆರ್ಯನ್ನನ್ನು ಹಡಗಿಗೆ ಕರೆದುಕೊಂಡು ಹೋಗಿದ್ದರು. ಇದು ಕಿಡ್ನಾಪ್ ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣ ಆಗಿದೆ. ಇದರ ಹಿಂದಿರುವ ಮಾಸ್ಟರ್ ಮೈಂಡ್ ಮೋಹಿತ್’ ಎಂದು ನವಾಬ್ ಮಲಿಕ್ ಆರೋಪಿಸಿದ್ದಾರೆ.
ಆರ್ಯನ್ ಬಂಧನದ ಆದ ಬಳಿಕ ನಡೆದ ಘಟನೆಗಳಿಂದ ಸಮೀರ್ ವಾಂಖೇಡೆ ಭಯಗೊಂಡರು. ಹಾಗಾಗಿ ಅ.7ರಂದು ಓಶಿವಾರಾ ಸ್ಮಶಾನದ ಬಳಿ ಮೋಹಿತ್ ಮತ್ತು ಸಮೀರ್ ಭೇಟಿ ಆಗಿದ್ದರು. ಅವರ ಅದೃಷ್ಟಕ್ಕೆ ಅಲ್ಲಿನ ಸಿಸಿಟಿವಿ ಹಾಳಾಗಿತ್ತು. ಹಾಗಾಗಿ ಅದಕ್ಕೆ ಸೂಕ್ತ ಸಾಕ್ಷಿ ಸಿಗಲಿಲ್ಲ’ ಎಂದು ನವಾಬ್ ಮಲಿಕ್ ಹೇಳಿದ್ದಾರೆ.
ಹೀಗೆ ಸರಣಿ ಆರೋಪಗಳನ್ನು ಹೊರಿಸುತ್ತಿರುವ ನವಾಬ್ ಮಲಿಕ್ ವಿರುದ್ಧ ಸಮೀರ್ ವಾಂಖೇಡೆ ತಂದೆ ಧ್ಯಾನದೇವ್ ವಾಂಖೇಡೆ ಅವರು 1.25 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ‘ನವಾಬ್ ಮಲ್ಲಿಕ್ ಅವರು, ಸಮೀರ್ ವಾಂಖೇಡೆ ಕುಟುಂಬವನ್ನು ವಂಚಕ ಕುಟುಂಬ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ, ಅವರ ಧಾರ್ಮಿಕ ನಂಬಿಕೆಯನ್ನೇ ಪ್ರಶ್ನಿಸಿದ್ದಾರೆ. ವಾಂಖೇಡೆ ಕುಟುಂಬದವನ್ನು ಹಿಂದೂಗಳಲ್ಲ ಎಂದು ಹೇಳಿದ್ದಾರೆ. ಅವರ ಇಡೀ ಕುಟುಂಬದ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ. ಹಾಗಾಗಿ ಸಮೀರ್ ವಾಂಖೇಡೆಯ ಕುಟುಂಬದ ಗೌರವ, ಸಾಮಾಜಿಕ ಗೌರವ ಮತ್ತು ಅವರೆಲ್ಲರ ಹೆಸರಿಗೆ ಹಾನಿ ಉಂಟಾಗಿದೆ. ಇದು ಸರಿಪಡಿಸಲಾಗದ ನಷ್ಟವಾಗಿದೆ’ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ