ನವದೆಹಲಿ: ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ತಮ್ಮ ‘ಸನ್ರೈಸ್ ಓವರ್ ಅಯೋಧ್ಯಾ ( ‘Sunrise over Ayodhya) ಪುಸ್ತಕವನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಹಿಂದುತ್ವವನ್ನು ಐಸಿಸ್ ಹಾಗೂ ಬೊಕೊ ಹರಾಮ್ ನಂಥಹ ಉಗ್ರ ಸಂಘಟನೆಗಳಿಗೆ ಹೋಲಿಸಿದ್ದಾರೆ ಎಂಬುದು ಈಗ ವಿವಾದಕ್ಕೆ ಕಾರಣವಾಗಿದೆ.
ಈ ನಡುವೆ ಸಲ್ಮಾನ್ ಖುರ್ಷಿದ್ ವಿರುದ್ಧ ದೆಹಲಿಯಲ್ಲಿ ಕ್ರಿಮಿನಲ್ ದೂರು ದಾಖಲಾಗಿದೆ. ದೆಹಲಿ ಮೂಲದ ವಕೀಲ ವಿವೇಕ್ ಗಾರ್ಗ್ ಅವರು ದೂರು ದಾಖಲಿಸಿದ್ದಾರೆ. ‘ಹಿಂದೂ ಧರ್ಮವನ್ನು ಭಯೋತ್ಪಾದನೆಗೆ ಹೋಲಿಸಿದ ಮತ್ತು ಮಾನಹಾನಿ ಮಾಡಿದ’ ಕಾಂಗ್ರೆಸ್ ನಾಯಕ ಹಿಂದುತ್ವವನ್ನು ಉಗ್ರವಾದಕ್ಕೆ ಹೋಲಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಹಿಂದುತ್ವವನ್ನು ತುಂಬ ಕೀಳಾಗಿ ನೋಡಿದ್ದಾರೆ ಎಂದು ಆರೋಪಿಸಿರುವ ವಿವೇಕ್ ನೇರವಾಗಿ ದೆಹಲಿ ಪೊಲೀಸ್ ಆಯುಕ್ತರಿಗೇ ದೂರು ನೀಡಿ, ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಖುರ್ಷಿದ್ ಅವರು ‘ಸನ್ರೈಸ್ ಓವರ್ ಅಯೋಧ್ಯೆ: ನೇಷನ್ಹುಡ್ ಇನ್ ಅವರ್ ಟೈಮ್ಸ್’ ಪುಸ್ತಕದ ‘ದಿ ಸ್ಯಾಫ್ರಾನ್ ಸ್ಕೈ’ ಎಂಬ ಅಧ್ಯಾಯದಲ್ಲಿ ಹಿಂದುತ್ವವನ್ನು ಐಸಿಸ್ ಮತ್ತು ಬೊಕೊ ಹರಾಮ್ಗೆ ಹೋಲಿಸಿದ್ದಾರೆ. “ಸನಾತನ ಧರ್ಮ ಮತ್ತು ಋಷಿಗಳು ಮತ್ತು ಸಂತರಿಗೆ ತಿಳಿದಿರುವ ಶಾಸ್ತ್ರೀಯ ಹಿಂದೂ ಧರ್ಮವನ್ನು ಹಿಂದುತ್ವದ ದೃಢವಾದ ಆವೃತ್ತಿಯಿಂದ ಪಕ್ಕಕ್ಕೆ ತಳ್ಳಲಾಯಿತು, ಎಲ್ಲಾ ಮಾನದಂಡಗಳ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಹಿಂದುತ್ವವು ಸಹ ಐಸಿಸ್ (ISIS) ಮತ್ತು ಬೊಕೊ ಹರಾಮ್ನಂತಹ ಗುಂಪುಗಳ ಜಿಹಾದಿಸ್ಟ್ ಇಸ್ಲಾಂ ಅನ್ನು ಹೋಲುವ ರಾಜಕೀಯ ಆವೃತ್ತಿಯಾಗಿದೆ. ಎಂದು ಅವರು ತಮ್ಮ ಹೊಸ ಪುಸ್ತಕದ ಪುಟ ಸಂಖ್ಯೆ 113 ರಲ್ಲಿ ಹೇಳಿದ್ದಾರೆ. ಈಗ ಅವರ ವಿರುದ್ಧ ದೆಹಲಿ ಮೂಲದ ವಕೀಲ ವಿವೇಕ್ ಗಾರ್ಗ್ ಅವರು ದೂರು ದಾಖಲಿಸಿದ್ದಾರೆ.
ಬಿಜೆಪಿಯಿಂದ ಖಂಡನೆ
ಪುಸ್ತಕ ಬಿಡುಗಡೆಯಾಗುತ್ತಿದ್ದಂತೆ ಪುಸ್ತಕದ ದಿ ಸ್ಯಾಫ್ರಾನ್ ಸ್ಕೈ’ ಎಂಬ ಅಧ್ಯಾಯದ ಈ ಸಾಲುಗಳು ವಿವಾದ ಸೃಷ್ಟಿಸಿವೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ನೈಜ ಮನಸ್ಥಿತಿಗೆ ಈ ಸಾಲುಗಳು ಸಾಕ್ಷಿ. ಐಸಿಸ್ ಸಿದ್ಧಾಂತವನ್ನು ಹಿಂದುತ್ವದೊಂದಿಗೆ ಹೋಲಿಸುವ ಮೂಲಕ ಅದನ್ನೂ ಕಾನೂನು ಬದ್ಧಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಮತ್ತು ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಪುಸ್ತಕದ 113ನೇ ಪುಟವನ್ನು ಟ್ವೀಟ್ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ