ಮನೆ ಗೋಡೆ ಕುಸಿದು ದಂಪತಿ ಸಾವು, ಮತ್ತೊಬ್ಬರಿಗೆ ಗಾಯ

ಚಿತ್ರದುರ್ಗ : ಕಳೆದ ಮೂರು ದಿನಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಕ್ಕದ ಮನೆಯ ಗೋಡೆ ಕುಸಿದು ಮಲಗಿದ್ದ ದಂಪತಿ ಜೀವಂತ ಸಮಾಧಿಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಾರೋಬನಹಟ್ಟಿಯಲ್ಲಿ ನಡೆದಿದೆ. ಕಾರೋಬನಹಟ್ಟಿಯ ನಿವಾಸಿ ಚನ್ನಕೇಶವ (26) ಮತ್ತು ಸೌಮ್ಯ (21)ಮೃತ ದಂಪತಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಚೆನ್ನಕೇಶವ ಅವರ ತಂದೆ ಕ್ಯಾತಣ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಕ್ಯಾತಣ್ಣ ಅವರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.
ಗಾಯಗೊಂಡಿರುವ ಕ್ಯಾತಣ್ಣ ಅವರ ಇಬ್ಬರು ಮಕ್ಕಳ ಪೈಕಿ ಚಿಕ್ಕ ಮಗ ಚೆನ್ನಕೇಶವ ಮನೆಯ ಪಕ್ಕದಲ್ಲಿಯೇ ಗುಡಿಸಲು ಕಟ್ಟಿಕೊಂಡು ಪತ್ನಿ ಸೌಮ್ಯ ಜೊತೆಯಲ್ಲಿ ವಾಸವಾಗಿದ್ದ. ಆದರೆ ಭಾನುವಾರ ಬೆಳಗಿನ ಜಾವದಲ್ಲಿ ಮನೆಯ ಗೋಡೆ ಒಮ್ಮಿಂದೊಮ್ಮೆಲೆ ಕುಸಿದು ಈ ದುರಂತ ಸಂಭವಿಸಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಐಮಂಗಲ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement