ಭಾರತದ ನೌಕಾಪಡೆಗೆ ಕ್ಷಿಪಣಿ ವಿಧ್ವಂಸಕ ಯುದ್ಧನೌಕೆ ಐಎನ್​ಎಸ್​ ವಿಶಾಖಪಟ್ಟಂ ಸೇರ್ಪಡೆ

ಮುಂಬೈ: ದೇಶದ ಮೊದಲ ಮೊದಲ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ನೌಕೆ ಐಎನ್​ಎಸ್​ ವಿಶಾಖಪಟ್ಟಣಂ ಅನ್ನು ಇಂದು (ಭಾನುವಾರ) ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು.
ಈ ನೌಕೆಯನ್ನು ಇಂದು ರಾಷ್ಟ್ರಕ್ಕೆ ಸಮರ್ಪಣೆ ಕಾರ್ಯಕ್ರಮದಲ್ಲಿ
ಮುಂಬೈನ ನೌಕಾನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನೌಕಾಪಡೆಗೆ ಐಎನ್ಎಸ್ ವಿಶಾಖಪಟ್ಟಣಂ ಅನ್ನು ಅಧಿಕೃತವಾಗಿ ನಿಯೋಜಿಸುವ ಮೂಲಕ, ನೌಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಐಎನ್​ಎಸ್​ ವಿಶಾಖಪಟ್ಟಣಂ ಹಡಗು ಪ್ರಾಜೆಕ್ಟ್​ 15ಬಿಯ ಕ್ಷಿಪಣಿ ವಿಧ್ವಂಸಕ ಶಿಪ್​ ಆಗಿದೆ. ನೌಕಾಪಡೆ ಮುಖ್ಯಸ್ಥ ಅಡ್ಮಿರಲ್​ ಕರಂಬೀರ್​ ಸಿಂಗ್​ ಉಪಸ್ಥಿತರಿದ್ದರು.
ದೇಶೀಯ ಡಿಎಂಆರ್​ 249ಎ ಉಕ್ಕು ಬಳಸಿ ಈ ಐಎನ್​ಎಸ್​ ವಿಶಾಖಪಟ್ಟಣಂ ಹಡಗನ್ನು ನಿರ್ಮಿಸಲಾಗಿದ್ದು, ಇದು ಭಾರತದಲ್ಲಿ ತಯಾರಿಸಲಾದ ಅತಿದೊಡ್ಡ ವಿಧ್ವಂಸಕ ನೌಕೆಗಳಲ್ಲಿ ಒಂದಾಗಿದೆ. ಇದರ ಒಟ್ಟಾರೆ ಉದ್ದ 163 ಮೀಟರ್​​ಗಳಿದ್ದು, 704 ಟನ್​​ಗಳಷ್ಟು ಭಾರವನ್ನು ಸ್ಥಳಾಂತರ ಮಾಡಬಹುದಾಗಿದೆ. ಈ ನೌಕೆಯಲ್ಲಿ ಶಸ್ತ್ರಾಸ್ತ್ರಗಳ ಅಳವಡಿಕೆಗೆ ಮುಂದುವರಿದ ವಿಧಾನದಲ್ಲಿ ಇದ್ದು, ಬಹುವಿಧದ ಕಾರ್ಯ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ. ಈ ಕ್ಷಿಪಣಿ ಧ್ವಂಸಕ ಹಡಗು ಶಕ್ತಿಯುತ ಅನಿಲ ಸಂಚಲನೆಯಿಂದ ಚಾಲಿತವಾಗುತ್ತದೆ. ಅಲ್ಲದೆ, ಎರಡು ಹೆಲಿಕಾಪ್ಟರ್​​ಗಳನ್ನು ಹೊರುವಷ್ಟು ಬಲಿಷ್ಠವಾಗಿದೆ. ಅಷ್ಟೇ ಅಲ್ಲ, ಅತ್ಯಾಧುನಿಕ ಡಿಜಿಟಲ್​ ನೆಟ್​ವರ್ಕ್​ಗಳು, ಕಾಂಬ್ಯಾಟ್​ ಮ್ಯಾನೇಜ್​ಮೆಂಟ್​ ವ್ಯವಸ್ಥೆ, ಇಂಟಿಗ್ರೇಟೆಡ್​ ಪ್ಲಾಟ್​ಫಾರ್ಮ್​​ ನಿರ್ವಹಣಾ ವ್ಯವಸ್ಥೆಯೊಂದಿಗೆ ಹೆಚ್ಚಿನ ಮಟ್ಟದಲ್ಲಿ ಯಾಂತ್ರೀಕೃತಗೊಂಡಿದೆ.
ಭಾರತವು ತನ್ನ ಅಗತ್ಯಕ್ಕಾಗಿ ಮಾತ್ರವಲ್ಲದೆ ಪ್ರಪಂಚದ ಅಗತ್ಯಕ್ಕಾಗಿ ಹಡಗುಗಳನ್ನು ನಿರ್ಮಿಸಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಐಎನ್ಎಸ್ ವಿಶಾಖಪಟ್ಟಣಂ ಅನ್ನು ಮುಂಬೈನ ನೌಕಾನೆಲೆಯಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿ, ಭಾರತೀಯ ನೌಕಾಪಡೆಗೆ ನಿಯೋಜಿಸಿದ ನಂತರ ಅವರು ಮಾತನಾಡಿದ ಅವರು, ಐಎನ್‌ಎಸ್‌ ವಿಶಾಖಪಟ್ಟಣಂನ ವೈಶಿಷ್ಟ್ಯಗಳು ಇಂದಿನ ಅಗತ್ಯಗಳನ್ನು ಮಾತ್ರವಲ್ಲದೆ ಭವಿಷ್ಯದ ಅಗತ್ಯಗಳನ್ನೂ ಪೂರೈಸಲಿವೆ ಎಂದರು.
ಇಂಡೋ- ಪೆಸಿಫಿಕ್ ಪ್ರದೇಶವನ್ನು ಸಾರ್ವತ್ರಿಕ ನಿಯಮಗಳಿಂದ ರೂಪಿಸಲಾಗಿದ್ದು, ಇದರಿಂದ ಎಲ್ಲಾ ಸದಸ್ಯ ರಾಷ್ಟ್ರಗಳೂ ಸುರಕ್ಷಿತವಾಗಿರಲಿವೆ. ಈ ಪ್ರದೇಶದ ಭದ್ರತೆಯಲ್ಲಿ ಭಾರತವು ಪ್ರಮುಖ ರಾಷ್ಟ್ರವಾಗಿರುವುದರಿಂದ, ಭಾರತೀಯ ನೌಕಾಪಡೆಯ ಪಾತ್ರವು ಹೆಚ್ಚು ಪ್ರಾಮುಖ್ಯ ಪಡೆದುಕೊಳ್ಳುತ್ತದೆ ಎಂದ ಅವರು 2023 ರ ವೇಳೆಗೆ, ಜಗತ್ತಿನಾದ್ಯಂತ ಭದ್ರತೆಯ ವೆಚ್ಚವು 2.1 ಟ್ರಿಲಿಯನ್ ಡಾಲರ್ ತಲುಪಲಿದೆ ಎಂಬ ವರದಿಗಳನ್ನು ರಕ್ಷಣಾ ಸಚಿವ ಸಿಂಗ್ ಉಲ್ಲೇಖಿಸಿದ್ದಾರೆ. ಇದರಿಂದ ಭಾರತವು ತನ್ನ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ಸ್ವದೇಶಿ ಹಡಗು ನಿರ್ಮಾಣದತ್ತ ಸಾಗಲು ಸಂಪೂರ್ಣ ಅವಕಾಶ ಹೊಂದಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಚುನಾವಣಾ ಬಾಂಡ್, ಉತ್ತರ ಭಾರತ-ದಕ್ಷಿಣ ಭಾರತ ಚರ್ಚೆ, ಸಿಬಿಐ - ಇ.ಡಿ. ದುರ್ಬಳಕೆ ಆರೋಪ, ಬಿಜೆಪಿ ಮಾಡೆಲ್-ಕಾಂಗ್ರೆಸ್‌ ಮಾಡೆಲ್‌ ಬಗ್ಗೆ ಮೋದಿ ಹೇಳಿದ್ದೇನು..?

75% ಪ್ರತಿಶತ ಸ್ವದೇಶಿ ಯುದ್ಧ ನೌಕೆ
ಮುಂಬೈನ ಮಡಗಾಂವ್ ಡಾಕ್ ಯಾರ್ಡ್‌ನಲ್ಲಿ ಐಎನ್‌ಎಸ್‌ ವಿಶಾಖಪಟ್ಟಣಂ ನಿರ್ಮಿಸಲಾಗಿದ್ದು, ಈ ಯುದ್ಧನೌಕೆಯ ಪ್ರಮುಖ ವಿಷಯವೆಂದರೆ ಇದರ 75 ಪ್ರತಿಶತ ಭಾಗವು ಸಂಪೂರ್ಣವಾಗಿ ಸ್ವದೇಶಿ. ಮುಂಬರುವ ವರ್ಷಗಳಲ್ಲಿ ಈ ವರ್ಗದ ಇನ್ನೂ ಮೂರು ಯುದ್ಧನೌಕೆಗಳನ್ನು 35,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಈ ಯುದ್ಧ ಹಡಗು 163 ಮೀಟರ್ ಉದ್ದ ಮತ್ತು 17 ಮೀಟರ್ ಅಗಲವಿದೆ. ಇದರ ತೂಕ 7,400 ಟನ್ ಆಗಿದೆ ಹಾಗೂ ಅತ್ಯಂತ ಆಧುನಿಕವಾಗಿದೆ. ಇದು ಭಾರತದಲ್ಲಿ ನಿರ್ಮಿಸಲಾದ ಅತಿ ಉದ್ದದ ವಿಧ್ವಂಸಕ ಯುದ್ಧನೌಕೆಯಾಗಿದ್ದು, ಇದರಲ್ಲಿ 50 ಅಧಿಕಾರಿಗಳು ಸೇರಿದಂತೆ ಸುಮಾರು 300 ಸೈನಿಕರನ್ನು ನಿಯೋಜಿಸಬಹುದಾಗಿದೆ.
ಐಎನ್‌ಎಸ್ ವಿಶಾಖಪಟ್ಟಣಂ ಸೂಪರ್‌ಸಾನಿಕ್ ಮೇಲ್ಮೈಯಿಂದ ಮೇಲ್ಮೈ ಮತ್ತು ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿಗಳು, ಮಧ್ಯಮ ಮತ್ತು ಅಲ್ಪ-ಶ್ರೇಣಿಯ ಗನ್‌ಗಳು, ಜಲಾಂತರ್ಗಾಮಿ ವಿರೋಧಿ ರಾಕೆಟ್‌ಗಳು ಮತ್ತು ಸುಧಾರಿತ ಎಲೆಕ್ಟ್ರಾನಿಕ್ ಯುದ್ಧ ಮತ್ತು ಸಂವಹನ ಸೇರಿದಂತೆ ಮಾರಕ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧನೌಕೆಯಲ್ಲಿ ಸ್ವದೇಶಿ ಬ್ರಹ್ಮೋಸ್ ಕ್ಷಿಪಣಿಯನ್ನು ನಿಯೋಜಿಸಲಾಗಿದೆ. ಅದರ ಮೇಲೆ ನಿಯೋಜಿಸಲಾದ ಕ್ಷಿಪಣಿಯು 70 ಕಿಮೀ ದೂರದಲ್ಲಿ ಹಾರುವ ಶತ್ರು ಯುದ್ಧ ವಿಮಾನವನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದು ಪ್ರಾಥಮಿಕವಾಗಿ ಮಾರ್ಗದರ್ಶಿ-ಕ್ಷಿಪಣಿ ವಿಧ್ವಂಸಕವಾಗಿದ್ದರೂ ಸಹ, ಐಎನ್‌ಎಸ್‌ ವಿಶಾಖಪಟ್ಟಣಂ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಾಕೆಟ್ ಲಾಂಚರ್‌ಗಳು, ಟಾರ್ಪಿಡೊ ಲಾಂಚರ್‌ಗಳು ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧ ಹೆಲಿಕಾಪ್ಟರ್‌ಗಳನ್ನು ಒಳಗೊಂಡ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಪರಮಾಣು, ಜೈವಿಕ ಮತ್ತು ರಾಸಾಯನಿಕ (ಎನ್‌ಬಿಸಿ) ಯುದ್ಧದ ಪರಿಸ್ಥಿತಿಗಳಲ್ಲಿ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಐಎನ್ ಎಸ್ ವಿಶಾಖಪಟ್ಟಣಂ ಸಮುದ್ರದಲ್ಲಿ ಒಂದು ಕಿಲೋಮೀಟರ್ ಆಳದಲ್ಲಿ ಜಲಾಂತರ್ಗಾಮಿ ನೌಕೆಗಳಲ್ಲಿ ಅಡಗಿರುವ ಶತ್ರುಗಳನ್ನು ಜಲಸಮಾಧಿ ಮಾಡಬಲ್ಲದು.

ಪ್ರಮುಖ ಸುದ್ದಿ :-   ಪ್ರಮುಖ ಮಾವೋವಾದಿ ನಾಯಕ ಸೇರಿ 29 ಮಂದಿ ಮಾವೋವಾದಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement