ಕೇರಳದಲ್ಲಿಎಸ್​ಡಿಪಿಐ ಮುಖಂಡನ ಹತ್ಯೆ ;ಇಬ್ಬರು ಆರೋಪಿಗಳ ಬಂಧನ

ಆಲಪ್ಪುಳ: ಕೇರಳದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಎಸ್​ಡಿಪಿಐ ಮತ್ತು ಬಿಜೆಪಿ ನಾಯಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಎಸ್​ಡಿಪಿಐ ಮುಖಂಡ ಶಾನ್​ ಅವರ ಹತ್ಯೆ ಸಂಬಂಧ ಪ್ರಸಾದ್ ಹಾಗೂ ರತೀಶ್​ ಎಂಬವರನ್ನು ಬಂಧಿಸಲಾಗಿದೆ ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥ ಎಡಿಜಿಪಿ ವಿಜಯ್​ ಸಾಖರೆ ತಿಳಿಸಿದ್ದಾರೆ.
ಬಂಧಿತರಲ್ಲಿ ಒಬ್ಬ ಹತ್ಯೆಯ ಸಂಚಿನ ರೂವಾರಿಯಾಗಿದ್ದಾನೆ. ಅಲ್ಲದೇ, ಈ ಸಂಚಿನಲ್ಲಿ 10 ಜನರು ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.
ಇಬ್ಬರು ಪ್ರಮುಖ ಆರೋಪಿಗಳ ಬಂಧನದಿಂದ ಹತ್ಯೆ ಪ್ರಕರಣಕ್ಕೆ ಬಲ ಬಂದಿದೆ. ತಲೆಮರೆಸಿಕೊಂಡಿರುವ ಇನ್ನು 8 ಜನರನ್ನು ಶೀಘ್ರವೇ ಬಂಧಿಸಲಾಗುವುದು. ಬಂಧಿತ ಪ್ರಮುಖ ಆರೋಪಿ ಎಸ್​ಡಿಪಿಐ ಮುಖಂಡನ ಕೊಲೆಗೆ ವಾಹನ ತಯಾರಿ, ಗುಂಪು ಮತ್ತು ಯೋಜನೆ ರೂಪಿಸಿದ್ದ ಬಗ್ಗೆ ತಿಳಿದು ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸ್​ ಕೊಲೆಯಲ್ಲೂ 12 ಮಂದಿ ಭಾಗಿಯಾಗಿದ್ದ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇಬ್ಬರು ರಾಜಕೀಯ ಮುಖಂಡರ ಕೊಲೆಯ ಹಿಂದೆ ಭಾರೀ ಪಿತೂರಿ ನಡೆದಿರುವ ಶಂಕೆ ಇದೆ. ಅದು ರುಜುವಾತಾದಲ್ಲಿ ಪ್ರಕರಣದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ವಿಜಯ್​ ಸಾಖರೆ ತಿಳಿಸಿದ್ದಾರೆ.
ಕಳೆದ ಡಿ.18 ತಡರಾತ್ರಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾನ್ ಹತ್ಯೆಯ ನಂತರ, ಬಿಜೆಪಿ ಮುಖಂಡ ಶ್ರೀನಿವಾಸ್​ರನ್ನು ಭಾನುವಾರ ಬೆಳಗ್ಗೆ ಕೊಲೆ ಮಾಡಲಾಗಿತ್ತು. ಈ ಘಟನೆ ಕೇರಳದಲ್ಲಿ ರಾಜಕೀಯ ಅಶಾಂತಿಗೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement