ಸರ್ಕಾರಿ ಶಾಲೆಗಳಿಗೆ ಇಲ್ಲದ ಕಟ್ಟಡ ಸುರಕ್ಷತೆ ನಿಯಮ ಖಾಸಗಿ ಶಾಲೆಗಳಿಗೇಕೆ?: ಜಿ.ಆರ್‌.ಭಟ್‌ ಪ್ರಶ್ನೆ

ಹುಬ್ಬಳ್ಳಿ: ೩೧ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಶಾಲಾ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ಪ್ರಮಾಣಪತ್ರ ಪಡೆಯುವ ನಿಯಮ ಕೇವಲ ಖಾಸಗಿ ಶಾಲೆಗಳಿಗೆ ಅಳವಡಿಸಿ ಸರಕಾರಿ ಶಾಲೆಗಳಿಗೆ ವಿನಾಯಿತಿ ನೀಡಿದ್ದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಘಟಕದ ಪ್ರದಾನ ಕಾರ್ಯದರ್ಶಿ ಜಿ.ಆರ್.ಭಟ್ ಸರಕಾರದ ಕ್ರಮ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳೀಕೆ ನೀಡಿರುವ ಅವರು, ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಶಾಲಾ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ಪ್ರಮಾಣ ಪತ್ರ ಪಡೆಯುವ ನಿಮಮಗಳನ್ನು ಸರಳಗೊಳಿಸಿ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಶಿಕ್ಷಣ ಸಂಸ್ಥೆಗಳಿಂದ ಇಂಡಿಮಿನಿಟಿ ಬಾಂಡ್ (ನಷ್ಟ ಪರಿಹಾರ) ಪಡೆದು ಶಾಲೆಗಳಿಗೆ ಮಾನ್ಯತೆ ನೀಡಿ ಎಂದು ಡಿಸೆಂಬರ್ ೨೧ ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಆದಾಗ್ಯೂ ಇಲ್ಲಿಯವರೆಗೆ ಶಿಕ್ಷಣ ಇಲಾಖೆಯಿಂದ ಮಾರ್ಪಾಡು ಮಾಡಿದ ಆದೇಶ ಹೊರಬೀಳದೇ ಇರುವುದು ವಿಷಾದದ ಸಂಗತಿ ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ೨೮ ರಂದು ಹುಬ್ಬಳ್ಳಿಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅವುಗಳೆಂದರೆ ೧)ಕಟ್ಟಡ ಸುರಕ್ಷತಾ ನಿಯಮಕ್ಕೆ ಸಂಬಂಧಿಸಿದ ಯಾವುದೇ ಶುಲ್ಕವನ್ನು ಕಟ್ಟದಿರಲು ನಿರ್ಧಾರ, ೨)ಶಿಕ್ಷಣ ಇಲಾಖೆಯ ದ್ವಂದ್ವ ನಿಯಮ ಖಂಡಿಸಿ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಂದ ಪತ್ರ ಚಳುವಳಿ, ೩)ಜನೇವರಿ ಅಂತ್ಯದಲ್ಲಿ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಎದುರು ಒಂದು ದಿನ ಸಾಂಕೇತಿಕ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಜೊತೆಗೆ ಇತ್ತೀಚೆಗೆ ಶಿಕ್ಷಣ ಇಲಾಖೆಯಿಂದ ಸಾಕಷ್ಟು ಅವೈಜ್ಞಾನಿಕ ಆದೇಶಗಳಿಂದ ಖಾಸಗಿ ಹಾಗೂ ಸರಕಾರಿ ಶಾಲೆಗಳಲ್ಲಿ ಸಾಕಷ್ಟು ತಾರತಮ್ಯ ಏರ್ಪಟ್ಟು ಗುಣಮಟ್ಟದ ಶಿಕ್ಷಣಕ್ಕೆ ತೊಂದರೆಯಾಗಿದೆ. ಸರಕಾರ ಈ ಎಲ್ಲ ಸಮಸ್ಯೆಗಳಿಗೆ ಗಮನ ಹರಿಸಿ ಪರಿಹಾರ ಕಂಡುಕೊಳ್ಳದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ತೀವ್ರತರಹದ ಹೋರಾಟ ಮಾಡಲಾಗುವುದು ಎಂದು ಜಿ.ಆರ್.ಭಟ್, ಡಾ.ಬಸವರಾಜ ಧಾರವಾಡ, ಶ್ಯಾಮ ಮಲ್ಲನಗೌಡ್ರ, ಎಚ್.ಪಿ. ಬಣಕಾರ, ಎಸ್.ಎಂ.ಅಗಡಿ, ವ್ಹಿ.ಎಸ್.ಹುದ್ದಾರ, ನಾರಾಯಣ ದೈಮನೆ, ಪ್ರಭಾಕರ ಬಂಟ್, ಚಂದ್ರಶೇಖರ ಸಾವಳಗಿ, ಎಂ.ಡಿ.ನಂದೆಣ್ಣವರ, ಎಸ್.ಎಸ್.ಅಂಗಡಿ, ಎನ್.ಎನ್. ಸವಣೂರ ಮೊದಲಾದವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement