ಮುಂಬೈನಲ್ಲಿ ಕೋವಿಡ್‌ ಲಸಿಕೆಯ ಒಂದೂ ಡೋಸ್‌ ಹಾಕಿಸಿಕೊಳ್ಳದ ಶೇ. 96ರಷ್ಟು ಕೊರೊನಾ ಸೋಂಕಿತರು ಐಸಿಯುಗೆ ದಾಖಲು…!

ನವದೆಹಲಿ:  ದೇಶದಲ್ಲಿ ಇನ್ನೂ ಅನೇಕರು ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಮುಂಬೈನಲ್ಲಿ  ಲಸಿಕೆ ಪಡೆಯದೆ ಈಗ ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಬಹುತೇಕರು ಐಸಿಯುಗೆ ದಾಖಲಾಗಿದ್ದಾರೆ.
ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಐಸಿಯುಗೆ ದಾಖಲಾಗಿರುವವರ ಪೈಕಿ ಶೇ.96ರಷ್ಟು ಕೊರೊನಾ ರೋಗಿಗಳು ಒಂದು ಡೋಸ್ ಕೊರೊನಾ ಲಸಿಕೆಯನ್ನೂ ಪಡೆಯದವರು ಎಂದು ವರದಿಯಾಗಿದೆ.  ಇದು ಕೊರೊನಾ ಲಸಿಕೆ ಪಡೆಯದೇ ಇರುವವರಿಗೆ ಎಚ್ಚರಿಕೆ ಗಂಟೆಯಾಗಿದೆ.
ಮುಂಬೈನಲ್ಲಿ ಪ್ರಸ್ತುತ ಆಮ್ಲಜನಕ ಹಾಸಿಗೆಗಳಲ್ಲಿರುವ 1,900 ರೋಗಿಗಳಲ್ಲಿ ಶೇ. 96ರಷ್ಟು ಮಂದಿ ಕೊವಿಡ್ ಲಸಿಕೆಯ ಒಂದೂ ಡೋಸ್ ಸಹ ತೆಗೆದುಕೊಂಡಿಲ್ಲ ಎಂದು ಬಿಎಂಸಿ ಕಮಿಷನರ್ ಇಕ್ಬಾಲ್ ಚಹಾಲ್ ಹೇಳಿದ್ದಾರೆ. ಮುಂಬೈನ 186 ಆಸ್ಪತ್ರೆಗಳಲ್ಲಿ ಆಮ್ಲಜನಕದ ಬೆಡ್‌ಗಳ ಮೇಲೆ ದಾಖಲಾಗುವ ಶೇ. 96ರಷ್ಟು ರೋಗಿಗಳು ಲಸಿಕೆ ಪಡೆದಿಲ್ಲ. ಕೊರೊನಾ ಲಸಿಕೆ ಪಡೆದವರು ಐಸಿಯುಗಳಿಗೆ ದಾಖಲಾಗುವ ಪರಿಸ್ಥಿತಿಗೆ ತಲುಪುತ್ತಿಲ್ಲ ಎಂಬುದನ್ನು ಈವರೆಗೆ ನಾವು ಕಂಡುಕೊಂಡಿದ್ದೇವೆ  ಎಂದು ಮುಂಬೈ ಪಾಲಿಕೆ ಕಮೀಷನರ್ ಇಕ್ಬಾಲ್ ಚಹಲ್ ಹೇಳಿದ್ದಾರೆ.
ಮುಂಬೈ ಈ ಬೆಳವಣಿಗೆಯು ಇನ್ನೂ ಕೊರೊನಾ ಲಸಿಕೆ ಪಡೆಯದೇ ಇರುವವರಿಗೆ ಒಂದು ಸಂದೇಶವಾಗಿದೆ. ತಕ್ಷಣವೇ ಕೊರೊನಾ ಲಸಿಕೆ ಪಡೆಯಿರಿ, ಐಸಿಯುಗೆ ದಾಖಲಾಗುವುದನ್ನು ತಪ್ಪಿಸಿಕೊಳ್ಳಿ ಎಂದು ಈಗ ಮುಂಬೈ ಪಾಲಿಕೆಯು ಈಗ ಜನರಿಗೆ  ಮತ್ತೊಮ್ಮೆ ಎಚ್ಚರಿಸುತ್ತಿದೆ.
ಇದರಿಂದಾಗಿ ಕೊರೊನಾ ಲಸಿಕೆ ಪಡೆದರೆ, ಕೊರೊನಾ ಬಂದರೂ  ಆಸ್ಪತ್ರೆಗೆ ದಾಖಲಾಗುವುದು ಅದರಲ್ಲಿಯೂ ಐಸಿಯುಗೆ ದಾಖಲಾಗುವುದು ತಪ್ಪುತ್ತದೆ ಎಂಬುದು ಸಾಬೀತಾಗಿದೆ.   ಕೊರೊನಾ ಲಸಿಕೆ ಪಡೆಯುವ ಮೂಲಕ ತಮ್ಮನ್ನು ತಾವು ಆಸ್ಪತ್ರೆ, ಐಸಿಯುಗೆ ದಾಖಲಾಗುವುದನ್ನು ತಪ್ಪಿಸಿಕೊಳ್ಳಬಹುದು. ಕೊರೊನಾ ಲಸಿಕೆ ಪಡೆಯುವುದರಿಂದ ಕೊರೊನಾದಿಂದ ಸಾವು ಸಂಭವಿಸುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿದೆ ಎಂಬುದು ಈಗ ಅಧ್ಯಯನಗಳಿಂದ ಸಾಬೀತಾಗಿದೆ.
ನಮ್ಮ ಬಳಿ 21 ಲಕ್ಷಡೋಸ್ ಲಸಿಕೆ ದಾಸ್ತಾನು ಇದೆ. ವಯಸ್ಕ ಜನಸಂಖ್ಯೆಯು ಲಸಿಕೆಯನ್ನು ಪಡೆಯಲು ಪ್ರಸ್ತುತ 2 ಡೋಸ್‌ಗಳ ನಡುವೆ 84 ದಿನಗಳ ಅಂತರ ಇರಬೇಕು. ಇಂದು ಕೂಡ, ನಮ್ಮ ವ್ಯಾಕ್ಸಿನೇಷನ್ ಶೇಕಡಾವಾರು ಭಾರತದಲ್ಲಿ ಅತ್ಯುತ್ತಮವಾಗಿದೆ” ಎಂದು ಇಕ್ಬಾಲ್ ಚಾಹಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇಲ್ಲಿಯವರೆಗೆ, ಬಿಎಂಸಿ ಎರಡೂ ಲಸಿಕೆ ಡೋಸ್‌ಗಳನ್ನು ಮುಂಬೈನ ಒಂದು ಕೋಟಿಗೂ ಹೆಚ್ಚು ಜನರಿಗೆ ನೀಡಿದ್ದು, ಸುಮಾರು 90 ಲಕ್ಷ ಜನರು ಒಂದು ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ. ಆಸ್ಪತ್ರೆಗಳು ಮತ್ತು ಆಮ್ಲಜನಕದ ಪೂರೈಕೆಗೆ ಹೆಚ್ಚಿನ ಹೊರೆಯಾದರೆ ಮಾತ್ರ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಇಕ್ಬಾಲ್ ಚಹಲ್‌ ಹೇಳಿದ್ದಾರೆ.
ಮುಂಬೈನಲ್ಲಿ ಇಂದಿನವರೆಗೆ 1 ಲಕ್ಷ ಕೊರೊನಾ ಸಕ್ರಿಯ ಪ್ರಕರಣಗಳಿದ್ದರೂ, ಕೇವಲ 10 ಟನ್ ಆಮ್ಲಜನಕವನ್ನು ಮಾತ್ರ ಬಳಸಲಾಗುತ್ತಿದೆ. ಎರಡನೇ ಅಲೆಯ ಸಮಯದಲ್ಲಿ, ಬಿಎಂಸಿಯಿಂದ ಆಮ್ಲಜನಕ ಉತ್ಪಾದನೆಯು ಶೂನ್ಯವಾಗಿತ್ತು. ಆದರೆ, ಈ ಬಾರಿ ನಾವು 400 ಟನ್ ಆಮ್ಲಜನಕ ಸಂಗ್ರಹವನ್ನು ಹೊಂದಿದ್ದೇವೆ. ನಮ್ಮದೇ ಆದ 200 ಟನ್ ಉತ್ಪಾದನೆಯನ್ನು ಹೊಂದಿದ್ದೇವೆ. ಈಗ ಎರಡನೇ ಅಲೆಗಿಂತ ಹೆಚ್ಚಿನ ಸೋಂಕು ಮುಂಬೈನಲ್ಲಿ ವರದಿಯಾಗುತ್ತಿದ್ದರೂ  10 ಟನ್ ಆಮ್ಲಜನಕ ಮಾತ್ರ ಬಳಸಲಾಗುತ್ತಿದೆ. ಆಸ್ಪತ್ರೆಗಳ ಮೇಲೆ ಒತ್ತಡವಿದ್ದರೆ ಮಾತ್ರ ನಿರ್ಬಂಧಗಳನ್ನು ಪರಿಗಣಿಸಲಾಗುತ್ತದೆ. ಆದರೆ, ಇಂದು ಶೇ. 84ರಷ್ಟು ಆಸ್ಪತ್ರೆಯ ಹಾಸಿಗೆಗಳು ಖಾಲಿ ಇವೆ. ಮುಂಬೈನಲ್ಲಿ ಜನವರಿ 6ರಂದು ವರದಿಯಾದ 20,000 ಪ್ರಕರಣಗಳಲ್ಲಿ 102 ಜನರನ್ನು ಮಾತ್ರ ಮುನ್ನೆಚ್ಚರಿಕೆಯಾಗಿ ಆಮ್ಲಜನಕದ ಹಾಸಿಗೆಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 16 ದಿನಗಳಲ್ಲಿ 19 ಸಾವುಗಳು ಸಂಭವಿಸುವುದರೊಂದಿಗೆ ಸಾವುಗಳು ನಿಯಂತ್ರಣದಲ್ಲಿವೆ ”ಎಂದು ಇಕ್ಬಾಲ್ ಚಹಾಲ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಒಟ್ಟಾರೆ ಕೋವಿಡ್ ಸಂಖ್ಯೆಯು 68 ಲಕ್ಷ ದಾಟಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸತತ 11ನೇ ದಿನ ರಾಜ್ಯವು ಕೋವಿಡ್-19 ಸೋಂಕುಗಳಲ್ಲಿ ಭಾರೀ ಏರಿಕೆ ವರದಿಯಾಗಿದೆ ಮತ್ತು ಜೀನೋಮ್ ಸಿಕ್ವೇನ್ಸಿಂಗ್​ಗಾಗಿ ಸ್ಯಾಂಪಲ್​ಗಳನ್ನು ಕಳುಹಿಸಲಾಗಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್-19 ಕೇಸ್​ಗಳು ಗುರುವಾರ 36,265ರಿಂದ ಶುಕ್ರವಾರ 40,925ಕ್ಕೆ ಏರಿವೆ. ಆದರೆ ಮರಣ ಪ್ರಮಾಣವು  ಹಿಂದಿನ ದಿನದ 13ರಿಂದ 20ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣವು ಶೇ. 2.07ರಷ್ಟಿದೆ. ಗುರುವಾರ 79 ಓಮಿಕ್ರಾನ್ ಸೋಂಕುಗಳನ್ನು ದಾಖಲಿಸಿದ ನಂತರ, ರಾಜ್ಯವು ಶುಕ್ರವಾರ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಿಲ್ಲ, ಅದರ ಸಂಖ್ಯೆ 876 ರಷ್ಟಿದೆ, ಮುಂಬೈ ದೇಶದಲ್ಲಿ ಅಗ್ರಸ್ಥಾನದಲ್ಲಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement