ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಗ್ರಾಮ ಬಜಾರ್ ಬೈಲ್ನಲ್ಲಿ ಒಂದೇ ಕುಟುಂಬದ ಐವರನ್ನು ಕೊಲೆ ಮಾಡಿದ್ದ ಬಗ್ಗೆ ವರದಿಯಾಗಿದೆ.
ನಾಲ್ವರು ಮಕ್ಕಳು, ಹಾಗೂ ಓರ್ವ ಮಹಿಳೆಯನ್ನು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಮೃತರನ್ನು ಲಕ್ಷ್ಮೀ(26), ರಾಜ್(12), ಕೋಮಲ್(7), ಕುನಾಲ್(4), ಗೋವಿಂದ(8) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಕೆಆರ್ಎಸ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಶನಿವಾರ ಮಧ್ಯರಾತ್ರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ಈ ವಿಚಾರ ಬೆಳಕಿಗೆ ಬಂದಿದೆ.
ಮೃತ ಲಕ್ಷ್ಮೀ ಅವರ ಪತಿ ಗಂಗಾರಾಮ್ 10 ದಿನದ ಹಿಂದೆ ವ್ಯಾಪಾರಕ್ಕೆ ಹೋಗಿದ್ದರು. ಗಂಗಾರಾಮ್ ಪ್ಲಾಸ್ಟಿಕ್ ಹೂವು ಸೇರಿ ಹಲವು ವಸ್ತುಗಳ ಮಾರಾಟ ಮಾಡುತ್ತಿದ್ದರು. ಒಮ್ಮೆ ವ್ಯಾಪಾರಕ್ಕೆ ಹೋದರೆ 15 ದಿನ, 1 ತಿಂಗಳು ಬಿಟ್ಟು ಬರುತ್ತಿದ್ದರು. ಗಂಗಾರಾಮ್ ಅಣ್ಣ ಗಣೇಶ, ಪತ್ನಿ ಸಹ ವ್ಯಾಪಾರಕ್ಕೆ ತೆರಳಿದ್ದರು. ಇವರೆಲ್ಲ ಒಟ್ಟಿಗೆ ವಾಸವಾಗಿದ್ದರು.
ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿಎನ್ ಯತೀಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಸಂದೇಶ್ ಕುಮಾರ್ ಸೇರಿ ಹಲವು ಹಿರಿಯ ಅಧಿಕಾರಿಗಳು ಇದ್ದರು. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಇನ್ನಷ್ಟು ವಿವರಗಳು ತಿಳಿದುಬರಬೇಕಿದೆ.
ನಿಮ್ಮ ಕಾಮೆಂಟ್ ಬರೆಯಿರಿ