ಬೆಂಗಳೂರು: ಹಿಜಾಬ್ ಧರಿಸಿದ ಕಾರಣಕ್ಕಾಗಿ ಶಿಕ್ಷಕರನ್ನು ತರಗತಿ ಒಳಗಡೆ ಬಿಡದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕುರಿತು ಪರಿಶೀಲನೆ ನಡೆಸಿ ಆದೇಶ ಹೊರಡಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಸುದ್ದಿ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಒಂದು ಆದೇಶ ಮಾಡುತ್ತೇವೆ ಎಂದು ತಿಳಿಸಿದರು.
ಹಿಜಾಬ್ ವಿವಾದದ ಬಗ್ಗೆ ಸದನದಲ್ಲಿ ಉತ್ತರ ಕೊಡಲಾಗುವುದು. ನಮಗೂ ಸಮವಸ್ತ್ರ ಪಾಲನೆ ವಿಚಾರದಲ್ಲಿ ಒಂದು ಸ್ಪಷ್ಟತೆ ತರುವ ಉದ್ದೇಶವಿದೆ. ಇವತ್ತು ಸದನದಲ್ಲಿ ಈ ವಿಚಾರ ಪ್ರಸ್ತಾಪ ಆಗಿದ್ದು, ಅಗತ್ಯದಷ್ಟು ಉತ್ತರ ನೀಡಲಾಗಿದೆ. ಹೆಚ್ಚಿನ ಉತ್ತರ ನಾವು ಕೊಡಲು ಶಕ್ತವಾಗಿದ್ದೇವೆ ಎಂದರು.
ನ್ಯಾಯಾಲಯದ ಆದೇಶ ಪಾಲನೆ ಮಾಡುವುದು ಸರ್ಕಾರದ ಕರ್ತವ್ಯ ಮತ್ತು ಬದ್ಧತೆ. ಸಮವಸ್ತ್ರ ಕಡ್ಡಾಯದ ವಿಚಾರದಲ್ಲಿ ಶಿಕ್ಷಕರಿಗೆ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ಅದನ್ನು ನಾವು ಪರಿಶೀಲನೆ ಮಾಡುತ್ತಿದ್ದೇವೆ ಹಾಗೂ ಅದಕ್ಕೊಂದು ಸ್ಪಷ್ಟೆ ಕೊಡುತ್ತೇವೆ ಎಂದು ಗೃಹ ಸಚಿವರು ಭರವಸೆ ನೀಡಿದರು.
ಹೈಕೋರ್ಟ್ ಆದೇಶ ಪರಿಶೀಲಿಸಿ ಪೊಲೀಸ್ ತಿದ್ದುಪಡಿ ಕಾಯ್ದೆ ಜಾರಿಗೆ:
ಪೊಲೀಸ್ ತಿದ್ದುಪಡಿ ಕಾಯ್ದೆಯನ್ನು ಉತ್ತಮ ಉದ್ದೇಶದಿಂದ ತರಲಾಗಿತ್ತು. ಹೈಕೋರ್ಟ್ ಆದೇಶವನ್ನು ಪರಿಶೀಲಿಸಿ ಮತ್ತೊಮ್ಮೆ ಕಾಯ್ದೆ ತರುತ್ತೇವೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಆನ್ ಲೈನ್ ಗೇಮಿಂಗ್, ಗ್ಯಾಮ್ಲಿಂಗ್ ನಿರ್ಬಂಧಿಸುವ ಪೊಲೀಸ್ ತಿದ್ದುಪಡಿ ಕಾಯ್ದೆ ರದ್ದು ಪಡಿಸಿರುವ ವಿಚಾರವಾಗಿ ಈಗ ಕೋರ್ಟ್ ನಿರ್ದೇಶನ ನೀಡಿದೆ. ಕೋರ್ಟ್ ಆದೇಶ ಪ್ರತಿ ತರಿಸಿ ಪರಿಶೀಲನೆ ಮಾಡುತ್ತೇವೆ. ಯಾವುದರ ಬಗ್ಗೆ ಹೇಳಿದೆ, ಯಾವ ಕಲಂ ತೆಗೆಯಬಹುದು ಎಂದು ನೋಡಿ ತಿದ್ದುಪಡಿ ಮಾಡಿ ಅದನ್ನು ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
ನ್ಯಾಯಾಲಯದ ಆದೇಶವನ್ನು ನಾವು ಒಪ್ಪುತ್ತೇವೆ. ಕೋರ್ಟ್ ಹಣ ಇಟ್ಟು ಆಡುವುದಕ್ಕೆ ಅವಕಾಶ ಕೊಟ್ಟಿಲ್ಲ. ಅನೇಕ ಕುಟುಂಬಗಳು ಆನ್ ಲೈನ್ ಗ್ಯಾಬ್ಲಿಂಗ್ ನಿಂದ ಬೀದಿಗೆ ಬಿದ್ದಿವೆ. ಜನಸಾಮಾನ್ಯರ ರಕ್ಷಣೆಗೆ ಆನ್ ಲೈನ್ ಗೇಮ್ ನಿಷೇಧ ಮಾಡಲಾಗಿತ್ತು. ಹಣ ಇಟ್ಟು ಆಡುವ ಗೇಮ್ ನಿಷೇಧ ಮಾಡಲಾಗಿತ್ತು ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ