ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮತದಾನದಿಂದ ಭಾರತ ದೂರ: ಉಕ್ರೇನ್‌ನಲ್ಲಿ ಭಾರತೀಯರಿಗೆ ಕಿರುಕುಳದ ಆರೋಪ

ನವದೆಹಲಿ: ರಷ್ಯಾ ದಾಳಿಯಿಂದ ಕಂಗೆಟ್ಟಿರುವ ಉಕ್ರೇನ್‌ನ ಭಾರತೀಯ ಸಮುದಾಯ ಈಗ ಹೊಸ ಸಮಸ್ಯೆಗೆ ಸಿಲುಕಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಉಕ್ರೇನ್ ವಿರುದ್ಧದ ರಷ್ಯಾ ದಾಳಿಯನ್ನು ಖಂಡಿಸುವ ನಿರ್ಣಯ ಮೇಲಿನ ಮತದಾನದಿಂದ ಭಾರತ ದೂರ ಉಳಿದ ನಂತರ ಆಕ್ರೋಶಿತ ಉಕ್ರೇನ್ ಗಡಿ ರಕ್ಷಣಾ ಸಿಬ್ಬಂದಿ ಭಾರತೀಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅರೋಪಿಸಲಾಗಿದೆ.
ಯುದ್ಧಪೀಡಿತ ಉಕ್ರೇನ್- ಪೋಲಂಡ್ ಗಡಿ ಸಮೀಪ ಚೆಕ್‌ಪೋಸ್ಟ್‌ಗಳಲ್ಲಿ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಮೈಕೊರೆಯುವ ಚಳಿಯಲ್ಲಿ ಅನ್ನ- ನೀರು, ವಸತಿ ಅಥವಾ ಸುರಕ್ಷಿತವಾಗಿ ತೆರಳುವ ಮಾರ್ಗವನ್ನೂ ಕಲ್ಪಿಸದೆ ಒತ್ತೆಯಾಳುಗಳ ರೀತಿ ನಮ್ಮನ್ನು ನಡೆಸಿಕೊಳ್ಳಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಉಕ್ರೇನ್ ಸೈನಿಕರು ಎಚ್ಚರಿಕೆಯ ಸಂಕೇತವಾಗಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಬೆದರಿಸುತ್ತಿರುವುದು ಮತ್ತು ಭಾರತೀಯ ವಿದ್ಯಾರ್ಥಿಗಳ ಗುಂಪನ್ನು ಚದುರಿಸಲು ಬಲ ಪ್ರಯೋಗ ಮಾಡುತ್ತಿರುವ ವಿಡಿಯೊವನ್ನು ವಿದ್ಯಾರ್ಥಿಗಳು ಶೇರ್ ಮಾಡಿದ್ದಾರೆ. ಭಾರತೀಯ ವಿದ್ಯಾರ್ಥಿನಿಯೊಬ್ಬರನ್ನು ಸೈನಿಕರು ತಳ್ಳುತ್ತಿರುವ ಚಿತ್ರಣ ಮತ್ತೊಂದು ವಿಡಿಯೊದಲ್ಲಿದೆ.
ಈ ವಿದ್ಯಾರ್ಥಿನಿ ಸೈನಿಕರ ಕಾಲಿಗೆ ಬಿದ್ದು ಗಡಿ ದಾಟಲು ಅವಕಾಶ ನೀಡುವಂತೆ ಬೇಡುತ್ತಿರುವ ದೃಶ್ಯ ಮನ ಕಲುಕುವಂತಿದೆ. ಉಕ್ರೇನ್ ನಾಗರಿಕರು ಕೂಡಾ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ದ್ವೇಷಭಾವನೆ ಹೊಂದಿದ್ದಾರೆ ಎಂದು ಹಲವು ವಿದ್ಯಾರ್ಥಿಗಳು ಆಪಾದಿಸಿದ್ದಾರೆ. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಹಲವು ವಿಶ್ವವಿದ್ಯಾನಿಲಯಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಪೋಲಂಡ್ ಗಡಿಯಲ್ಲಿ ಅತಂತ್ರರಾಗಿದ್ದಾರೆ. ರೈಲು, ಕಾರು ಅಥವಾ ಬಸ್‌ನಲ್ಲಿ ಯುದ್ಧಪೀಡಿತ ಪ್ರದೇಶಗಳಿಂದ ತಪ್ಪಿಸಿಕೊಂಡಿರುವ ಹಲವು ವಿದ್ಯಾರ್ಥಿಗಳು ದೇಶದ ಗಡಿಬೇಲಿ ದಾಟಲು ಹಲವು ಮೈಲುಗಳನ್ನು ನಡೆದಿದ್ದಾರೆ.
ಭಾನುವಾರ ಮಧ್ಯಾಹ್ನದ ವೇಳೆಗೆ ೨೫೦ ಭಾರತೀಯ ವಿದ್ಯಾರ್ಥಿಗಳು ಚೆಕ್ ಪಾಯಿಂಟ್ ಮೂಲಕ ಪೋಲಂಡ್‌ಗೆ ಬಂದಿದ್ದಾರೆ ಎಂದು ಇಂಡೋ- ಪೋಲಿಷ್ ಚೇಂಬರ್ ಆಫ್ ಕಾಮರ್ಸ್‌ನ ಉಪಾಧ್ಯಕ್ಷ ಅಮಿತ್ ಲತ್ ಹೇಳಿದ್ದಾರೆ. ಈ ವಿದ್ಯಾರ್ಥಿಗಳನ್ನು ಪೋಲೆಂಡ್‌ನ ಹೋಟೆಲ್‌ನಲ್ಲಿ ಇರಿಸಲಾಗಿದೆ.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement