ಕೀವ್: ಉಕ್ರೇನ್ ಮೇಲೆ ರಷ್ಯನ್ನರ ದಾಳಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಷ್ಯಾ ಮತ್ತು ಉಕ್ರೇನ್ ನಡುವೆ ಎರಡನೇ ಸುತ್ತಿನ ಮಾತುಕತೆ ಮಾರ್ಚ್ 2ರಂದು ನಡೆಯಲಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ತಿಳಿಸಿದೆ.
ಉಭಯ ರಾಷ್ಟ್ರಗಳ ನಡುವೆ ಸೋಮವಾರ ನಡೆದ ಮೊದಲ ಸುತ್ತಿನ ಮಾತುಕತೆಗಳು ಯಾವುದೇ ಸ್ಪಷ್ಟವಾದ ಫಲಿತಾಂಶಗಳನ್ನು ನೀಡದ ಕಾರಣ ರಷ್ಯಾ ಮತ್ತು ಉಕ್ರೇನ್ ಮತ್ತೊಮ್ಮೆ ಭೇಟಿಯಾಗಿ ಮಾತುಕತೆ ನಡೆಸಲು ನಿರ್ಧರಿಸಿವೆ. ಸೋಮವಾರ ಬೆಲಾರಸ್ನ ಗಡಿ ಪಟ್ಟಣವಾದ ಗೋಮೆಲ್ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆ ಸುಮಾರು ಐದು ಗಂಟೆಗಳ ಕಾಲ ನಡೆಯಿತು. ಆದರೆ, ಆ ಮಾತುಕತೆ ಫಲಪ್ರದವಾಗಲಿಲ್ಲ. ಹೀಗಾಗಿ, ಬುಧವಾರ ಎರಡನೇ ಹಂತದ ಮಾತುಕತೆ ನಡೆಯಲಿದೆ.
ರಷ್ಯಾ ಮತ್ತು ಉಕ್ರೇನ್ ಪ್ರತಿನಿಧಿಗಳು “ಕೆಲವು ವಿಷಯಗಳ ಬಗ್ಗೆ ಒಪ್ಪಿಕೊಂಡಿದ್ದಾರೆ” ಎನ್ನಲಾಗುತ್ತಿದೆ. ಈಗ ಎರಡೂ ದೇಶಗಳ ಪ್ರತಿನಿಧಿಗಳು ಮತ್ತೊಂದು ಸುತ್ತಿನ ಚರ್ಚೆಗಾಗಿ ಕುಳಿತುಕೊಳ್ಳುವ ಮೊದಲು ತಮ್ಮ ಸರ್ಕಾರದ ಮುಖ್ಯಸ್ಥರನ್ನು ಸಂಪರ್ಕಿಸುತ್ತಾರೆ ಎಂದು ರಷ್ಯಾ ಟುಡೆ (ಆರ್ಟಿ) ವರದಿ ಮಾಡಿದೆ.
ಈ ಮಧ್ಯೆ ರಷ್ಯಾ ಉಕ್ರೇನ್ನಲ್ಲಿ ವಸತಿ ಪ್ರದೇಶಗಳನ್ನು ಗುರಿಯಾಗಿಸುವುದನ್ನು ಮುಂದುವರೆಸಿದೆ. ಅಂತೆಯೇ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ವಿಮಾನಗಳು ಮತ್ತು ಹಡಗುಗಳ ಮೇಲೆ ಜಾಗತಿಕ ನಿಷೇಧಕ್ಕೆ ಕರೆ ನೀಡಿದ್ದಾರೆ.
ಉಕ್ರೇನ್ ಪ್ರಕಾರ, ರಷ್ಯಾದ ಆಕ್ರಮಣದಲ್ಲಿ 14 ಮಕ್ಕಳು ಸೇರಿದಂತೆ 350ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ. ಈಗಾಗಲೇ ಅರ್ಧ ಮಿಲಿಯನ್ ಜನರು ದೇಶವನ್ನು ತೊರೆದಿದ್ದಾರೆ. ರೈಲುಗಳು ಅಥವಾ ಲಭ್ಯವಿರುವ ಯಾವುದೇ ವಿಧಾನಗಳ ಮೂಲಕ ಉಕ್ರೇನ್ ರಾಜಧಾನಿ ಕೀವ್ ಅನ್ನು ತುರ್ತಾಗಿ ತೊರೆಯುವಂತೆ ಭಾರತವು ಈಗಾಗಲೇ ತನ್ನ ಪ್ರಜೆಗಳಿಗೆ ಸೂಚಿಸಿದೆ. ಇಂದು, ಮಂಗಳವಾರ ಬೆಳಿಗ್ಗೆ ಉಕ್ರೇನ್ನಲ್ಲಿ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಮೂಲದ ವಿದ್ಯಾರ್ಥಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ