ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಒಟ್ಟು 2,65,721 ಕೋಟಿ ರೂ. ಮೊತ್ತದ ಕೊರತೆ ಬಜೆಟ್ ಮಂಡಿಸಿದ್ದು, ಆದಾಯಕ್ಕಿಂತಲೂ 5 ಸಾವಿರ ಕೋಟಿ ರೂ. ಹೆಚ್ಚಿನ ಬಜೆಟ್ ಮಂಡನೆಯಾಗಿದ್ದು, ರಾಜ್ಯದ ಮೇಲೆ ಒಟ್ಟು 72 ಸಾವಿರ ಕೋಟಿ ರೂ. ಸಾಲ ಇದೆ ಎಂದು ಬೊಮ್ಮಾಯಿ ತಮ್ಮ ಆಯವ್ಯಯದಲ್ಲಿ ತಿಳಿಸಿದ್ದಾರೆ.
ಯಾವುದೇ ತೆರಿಗೆಗಳಲ್ಲಿ ಹೆಚ್ಚಳ ಮಾಡಿಲ್ಲ, ಈ ವರ್ಷ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ದರ ಹೆಚ್ಚಿಸುವುದಿಲ್ಲ. 22-23 ನೇ ಸಾಲಿಗೆ ವಾಣಿಜ್ಯ ತೆರಿಗೆಗಳ ಇಲಾಖೆಗೆ 77,010 ಕೋಟಿ ರೂ ತೆರಿಗೆ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ.ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ 43,188 ಕೋಟಿ ರೂ. ನಿಗದಿಪಡಿಸಿದ್ದರೆ, ಮಕ್ಕಳ ಅಭ್ಯುದಯಕ್ಕೆ 40,944 ಕೋಟಿ ರೂ. ಮೀಸಲಿಡಲಾಗಿದೆ.
ರಾಜ್ಯದ ಅಭಿವೃದ್ಧಿಗೆ ಬೊಮ್ಮಾಯಿ ಕೃಷಿ ಮತ್ತು ಪೂರಕ ವಲಯಗಳಿಗೆ 33,700 ಕೋಟಿ ರೂ. ಮೀಸಲಿಡಲಾಗಿದ್ದು, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 68,479 ಕೋಟಿ ರೂ.ಗಳು ಹಾಗೂ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಾಗಿದ್ದು, 55,657 ಕೋಟಿ ರೂ. ಮೀಸಲಿಡಲಾಗಿದೆ.
ಬೆಂಗಳೂರು ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ. ಮೀಸಲಿಡಲಾಗಿದೆ. ಅದಾದ ಬಳಿಕ ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ 3,102 ಕೋಟಿ ರೂ. ನಿಗದಿಪಡಿಸಲಾಗಿದೆ. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗೆ 56,710 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ಒಟ್ಟು ಆಯವ್ಯಯದ ಗಾತ್ರ : 2,65,720 ಕೋಟಿ ರೂ.ಗಳು
ಒಟ್ಟು ಸ್ವೀಕೃತಿ – 2,61,977 ಕೋಟಿ ರೂ.ಗಳು
ರಾಜಸ್ವ ಸ್ವೀಕೃತಿ – 1,89,888 ಕೋಟಿ ರೂ.ಗಳು
ಸಾರ್ವಜನಿಕ ಸಾಲ – 72,000 ಕೋಟಿ ರೂ.ಗಳು
ಬಂಡವಾಳ ಸ್ವೀಕೃತಿ – 72,089 ಕೋಟಿ ರೂ.ಗಳು
ಒಟ್ಟು ವೆಚ್ಚ – 2,65,720 ಕೋಟಿ ರೂ.
ರಾಜಸ್ವ ವೆಚ್ಚ – 2,04,587 ಕೋಟಿ ರೂ.
ಬಂಡವಾಳ ವೆಚ್ಚ – 46,955 ಕೋಟಿ ರೂ.
ಸಾಲ ಮರುಪಾವತಿ – 14,179 ಕೋಟಿ ರೂ.
ಸ್ವಸಹಾಯ ಸಂಘಗಳನ್ನು ಸಣ್ಣ ಉದ್ಯಮಗಳನ್ನಾಗಿ ಸ್ವಸಹಾಯ ಸಂಘಗಳನ್ನು ಉತ್ತೇಜಿಸಲು ಆಯ್ದ ಸ್ವ-ಸಹಾಯ ಸಂಘಗಳಿಗೆ ತಮ್ಮ ಉದ್ಯಮಶೀಲತೆನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ತಲಾ 1.50 ಲಕ್ಷ ರೂ.ಗಳ ನೆರವು ನೀಡಲಾಗುತ್ತದೆ. ಇದಕ್ಕಾಗಿ ಪ್ರಸಕ್ತ ವರ್ಷ 500 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಗುಂಪುಗಳಿಗೆ ವಿಶೇಷ ಆದ್ಯತೆ ನೀಡಲು 50 ಕೋಟಿ ರೂ.ಗಳ ಮೊತ್ತದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, 3.9 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ.
ರಾಜ್ಯ ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕುಗಳ ಸಹಯೋಗದೊಂದಿಗೆ ಏಕ ಗವಾಕ್ಷಿ ಸಾಲ ಸೌಲಭ್ಯವನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯದ ಮೂಲಕ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ ಹಾಗೂ ಇದಕ್ಕೆ ಸಾರ್ವಜನಿಕ ವಲಯದ ಒಂದು ಬ್ಯಾಂಕನ್ನು Anchor Bank ಎಂದು ಗುರುತಿಸಲಾಗುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಮನೆ ಬಾಗಿಲಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸುವ ಸಲುವಾಗಿ ಬೀದರ್, ಚಾಮರಾಜನಗರ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ `ಮುಖ್ಯಮಂತ್ರಿ ಆರೋಗ್ಯ ವಾಹಿನಿ’ ಎಂಬ ಹೊಸ ಯೋಜನೆಯಡಿ ಸಂಚಾರಿ ಕ್ಲಿನಿಕ್ ಗಳನ್ನು 11 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತದೆ.
ಆರ್ಥಿಕವಾಗಿ ಹಿಂದುಳಿದ ಕುರಿಗಾರರಿಗೆ ವಸತಿ ಸೌಕರ್ಯದ ಜೊತೆಗೆ ಕುರಿ ದೊಡ್ಡಿ ನಿರ್ಮಿಸಲು 5 ಲಕ್ಷ ರೂ ಸಹಾಯಧನ ನೀಡಲಾಗುತ್ತದೆ. ಕುರಿ,ಮೇಕೆ ಸಾಕಾಣೆದಾರರು, ವಲಸೆ ಕುರಿಗಾರರು ಆಕಸ್ಮಿಕ ಮರಣ ಹೊಂದಿದಲ್ಲಿ ಅವಲಂಬಿತ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಲು 5 ಲಕ್ಷ ರೂ. ವಿಮಾ ಸೌಲಭ್ಯ ಒದಗಿಸಲಾಗುತ್ತದೆ. ಅನುಗ್ರಹ ಕೊಡುಗೆ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ 3-6 ತಿಂಗಳ ವಯಸ್ಸಿನ ಕುರಿ/ಮೇಕೆಗಳಿಗೆ ನೀಡುವ ಪರಿಹಾರ ಧನವನ್ನು 2,500 ರೂ.ಗಳಿಂದ 3,500 ರೂ.ಗೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆಯು ಪ್ರಮುಖ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪಶು ಚಿಕಿತ್ಸಾಲಯಗಳನ್ನು ಬಲಪಡಿಸುವುದರೊಂದಿಗೆ ನೂತನ 100 ಪಶುಚಿಕಿತ್ಸಾಲಯಗಳನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುತ್ತದೆ. ಖಾಲಿ ಇರುವ 400 ಪಶು ವೈದ್ಯಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
30 ಸರ್ಕಾರಿ ಐಟಿಐ ಸರ್ಕಾರಿ ಕಾಲೇಜು ಮೇಲ್ದರ್ಜೆಗೆ ಏರಿಸಲಾಗುತ್ತದೆ, ಗ್ರಾಮೀಣ ಜನರೆಗೆ ತಾಲೂಕು ಮಟ್ಟದಲ್ಲಿ ಹೃದಯ ಚಿಕಿತ್ಸೆ ಸೌಲಭ್ಯ, ರಾಜ್ಯದಲ್ಲಿ 7 ತಾಲೂಕಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಸ್ಥಾಪನೆ, ರಾಜ್ಯದಲ್ಲಿ ವಿನೂತನ ಮಾದರಿಯ 7 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುವುದು, ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಹಾಗೂ ಬಾಗಲಕೋಟೆಯಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ