ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್‌

ಬೆಂಗಳೂರು: ಇಸ್ಲಾಮಿಕ್ ನಂಬಿಕೆಯ ಅಡಿಯಲ್ಲಿ ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟ್ ತ್ರಿಸದಸ್ಯ ಪೀಠವು ಮಂಗಳವಾರ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ (ಶೀರ್ಷವಸ್ತ್ರ) ಧರಿಸುವುದನ್ನು ಪರಿಣಾಮಕಾರಿಯಾಗಿ ನಿಷೇಧಿಸುವ ಸರ್ಕಾರಿ ಆದೇಶವನ್ನು (GO) ಎತ್ತಿಹಿಡಿದಿದೆ.

ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದನ್ನು ನಿಷೇಧವನ್ನು ಪ್ರಶ್ನಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳನ್ನು ಮಂಗಳವಾರ ವಜಾ ಮಾಡಿದೆ.

ಹಿಜಾಬ್‌ ನಿಷೇಧ ಪ್ರಶ್ನಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮನವಿಗಳ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ಪೂರ್ಣ ಪೀಠವು ಫೆಬ್ರವರಿ ೨೫ರಂದು ತೀರ್ಪು ಕಾಯ್ದಿರಿಸಿತ್ತು. ಇಂದು, ಮಂಗಳವಾರ ಅದನ್ನು ಪ್ರಕಟಿಸಿತು.

ಇಡೀ ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಕೆಲವು ಪ್ರಶ್ನೆಗಳನ್ನು ರೂಪಿಸಿದ್ದು ಅವುಗಳಿಗೆ ಉತ್ತರಿಸಿದ್ದೇವೆ. ಇಸ್ಲಾಂ ಧರ್ಮದಲ್ಲಿ ಹಿಜಾಬ್‌ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯೇ? ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗಿ ಹಕ್ಕಿನ ಭಾಗವೇ? ರಾಜ್ಯ ಸರ್ಕಾರದ ಆದೇಶವು ವಿವೇಚನಾರಹಿತವಾಗಿದೆಯೇ ಎಂಬ ಪ್ರಶ್ನೆಗಳಿಗೆ ಮುಸ್ಲಿಮ್‌ ಮಹಿಳೆಯರು ಹಿಬಾಜ್‌ ಧರಿಸುವುದು ಇಸ್ಲಾಮ್‌ನಲ್ಲಿ ಅಗತ್ಯ ಧಾರ್ಮಿಕ ಆಚರಣೆಯಲ್ಲ. ಶಾಲೆಯಲ್ಲಿ ಸಮವಸ್ತ್ರ ಸೂಚಿಸಿರುವುದು ಒಂದು ಸಮಂಜಸವಾದ ನಿರ್ಬಂಧವಾಗಿದ್ದು, ವಿದ್ಯಾರ್ಥಿಗಳು ಅದನ್ನು ಆಕ್ಷೇಪಿಸುವಂತಿಲ್ಲ. ಆದೇಶ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ ಎಂಬ ಉತ್ತರ ಕಂಡುಕೊಂಡಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ತೀರ್ಪು ಓದಿ ಹೇಳಿದರು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರ ತ್ರಿಸದಸ್ಯ ಪೀಠವು ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆಗಳ ಭಾಗವಲ್ಲ ಎಂದು ಹೇಳಿದೆ. ಸಮವಸ್ತ್ರದ ಅವಶ್ಯಕತೆಯು ಆರ್ಟಿಕಲ್ 19(1)(ಎ) ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮೇಲೆ ಸಮಂಜಸವಾದ ನಿರ್ಬಂಧವಾಗಿದೆ; ಸರ್ಕಾರಿ ಆದೇಶ ಹೊರಡಿಸಲು ಸರ್ಕಾರಕ್ಕೆ ಅಧಿಕಾರವಿದೆ. ಆದೇಶ ಕಾನೂನುಬದ್ದವಾಗಿದೆ  ಎಂದು ನ್ಯಾಯಪೀಠ ಹೇಳಿದೆ.
ಫೆಬ್ರುವರಿ 25 ರಂದು ತೀರ್ಪು ಕಾಯ್ದಿರಿಸುವ ಮೊದಲು ಪೀಠದ ಮುಂದೆ ವಿಚಾರಣೆ 11 ದಿನಗಳ ಕಾಲ ನಡೆಯಿತು.

ಅರ್ಜಿದಾರ ವಿದ್ಯಾರ್ಥಿನಿಯೊಬ್ಬರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದೇವದತ್‌ ಕಾಮತ್‌ ಅವರು ರಾಜ್ಯ ಸರ್ಕಾರದ ಆದೇಶವು ದೋಷಪೂರಿತವಾಗಿದೆ ಎಂದು ವಾದಿಸಿದ್ದರು. “ಮೂರು ಪ್ರತ್ಯೇಕ ಹೈಕೋರ್ಟ್‌ಗಳು ತಮ್ಮ ತೀರ್ಪಿನಲ್ಲಿ ಹಿಜಾಬ್‌ ಧರಿಸುವುದು 25ನೇ ವಿಧಿಯ ಭಾಗವಲ್ಲ ಎಂದು ಹೇಳಿವೆ ಎಂಬುದನ್ನು ಉಲ್ಲೇಖಿಸಿ ರಾಜ್ಯ ಸರ್ಕಾರವು ಆದೇಶ ಮಾಡಿದೆ. ಸರ್ಕಾರದ ಆದೇಶವು ಮೇಲ್ನೋಟಕ್ಕೆ ಸರಿಯಾಗಿಲ್ಲ. ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವ ಮೂರೂ ತೀರ್ಪುಗಳು ಸರ್ಕಾರದ ವಿರುದ್ಧವೇ ಇವೆ. ರಾಜ್ಯ ಸರ್ಕಾರ ಈ ತೀರ್ಪುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದೆ. ಸರ್ಕಾರದ ಆದೇಶವನ್ನು ಪರಿಗಣಿಸಿ ಕಾಲೇಜುಗಳು ಶಿರವಸ್ತ್ರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳುತ್ತಿವೆ. ಸರ್ಕಾರದ ಆದೇಶದ ಅಡಿಪಾಯವೇ ಕುಸಿದಾಗ ಉಳಿದದ್ದು ನಿಲ್ಲುವುದಿಲ್ಲ ಎಂದು ವಾದಿಸಿದ್ದರು.

ಪ್ರಮುಖ ಸುದ್ದಿ :-   ಮಾರ್ಚ್‌ 30ರಂದು ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ

“ಮೊದಲನೆಯದಾಗಿ ಫಾತಿಮಾ ವರ್ಸಸ್‌ ಕೇರಳ ರಾಜ್ಯ ಪ್ರಕರಣವನ್ನು ಸರ್ಕಾರದ ಆದೇಶ ಆಧರಿಸಿದೆ. ಇಲ್ಲಿ ಶಿಕ್ಷಣ ಸಂಸ್ಥೆಯು ಖಾಸಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಂಸ್ಥೆಯಾಗಿದೆ. ಇದು ಸರ್ಕಾರಿ ಸಂಸ್ಥೆಗೆ ಸಂಬಂಧಿಸಿದ್ದಲ್ಲ. ಪ್ರತ್ಯೇಕ ಮೂಲಭೂತ ಹಕ್ಕು ಹೊಂದಿರುವ ಖಾಸಗಿ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಿಗೆ ಆ ತೀರ್ಪು ಸಂಬಂಧಿಸಿದ್ದಾಗಿದೆ. ಎರಡನೆಯದು, ಬಾಂಬೆ ಹೈಕೋರ್ಟ್‌ ತೀರ್ಪನ್ನು ಸರ್ಕಾರದ ಆದೇಶದಲ್ಲಿ ಆಧರಿಸಲಾಗಿದೆ. ಇದು ಬಾಲಕಿಯರ ಶಾಲೆಗೆ ಸಂಬಂಧಿಸಿದ್ದು, ಬಾಲಕ-ಬಾಲಕಿಯರ ಶಾಲೆಗೆ ಸಂಬಂಧ ಹೊಂದಿಲ್ಲದಿರುವುದರಿಂದ ಅದು ಇಲ್ಲಿ ಅನ್ವಯಿಸುವುದಿಲ್ಲ. ಮೂರನೆಯದಾಗಿ, ಮದ್ರಾಸ್‌ ಹೈಕೋರ್ಟ್‌ ಹೊರಡಿಸಿರುವ ಮತ್ತೊಂದು ತೀರ್ಪು ಸಂವಿಧಾನದ 25ನೇ ವಿಧಿಗೆ ಸಂಬಂಧಿಸಿದ್ದಲ್ಲ. ಇದು ಶಿಕ್ಷಕರ ಸಮವಸ್ತ್ರಕ್ಕೆ ಸಂಬಂಧಿಸಿದ್ದಾಗಿದೆ. ಶಿಕ್ಷಕರು ಸಮವಸ್ತ್ರ ಧರಿಸಬೇಕು ಎಂದು ಹೇಳುವುದಾಗಿತ್ತು. ಇದರಲ್ಲಿ ಸಂವಿಧಾನದ 25ನೇ ವಿಧಿ, ಶಿರವಸ್ತ್ರಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಉಲ್ಲೇಖ ಮಾಡಲಾಗಿಲ್ಲ” ಎಂದು ಹೇಳಿದ್ದರು.
ವಿದ್ಯಾರ್ಥಿನಿ ರೇಶಮ್‌ ಎಂಬವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಕರ್ನಾಟಕ ಪದವಿ ಪೂರ್ವ ಸಮಿತಿಯಡಿ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸೂಚಿಸುವ ಸಮವಸ್ತ್ರವನ್ನು ಪಾಲಿಸಬೇಕು ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. ಕಾಲೇಜು ಅಭಿವೃದ್ಧಿ ಸಮಿತಿಯು (ಸಿಡಿಸಿ) ವಸ್ತ್ರ ಸಂಹಿತೆ ವಿಧಿಸುವುದು ಕಾನೂನುಬಾಹಿರವಾಗಿದ್ದು, ಕಾಯಿದೆ ಮತ್ತು ಅದರ ನಿಯಮಗಳಿಗೆ ವಿರುದ್ಧವಾಗಿದೆ. ಕರ್ನಾಟಕ ಶಿಕ್ಷಣ ಕಾಯಿದೆಯ ಸೆಕ್ಷನ್‌ 2(7)ರ ಪ್ರಕಾರ ಕಾಲೇಜು ಅಭಿವೃದ್ಧಿ ಸಮಿತಿಯು ಸಕ್ಷಮ ಪ್ರಾಧಿಕಾರವಲ್ಲ. ಸಮವಸ್ತ್ರ ಸೂಚಿಸಲು ಸಿಡಿಸಿಗೆ ಯಾವುದೇ ಅಧಿಕಾರ ನೀಡಲಾಗಿಲ್ಲ ಎಂದು ವಾದಿಸಿದ್ದರು.
“ಇತರೆ ಧರ್ಮಗಳ ಧಾರ್ಮಿಕ ಸಂಕೇತಗಳಿಗೆ ನಿರ್ಬಂಧ ವಿಧಿಸದಿರುವಾಗ ಮುಸ್ಲಿಮ್‌ ಹೆಣ್ಣು ಮಕ್ಕಳನ್ನು ಮಾತ್ರ ಗುರಿಯಾಗಿಸಲಾಗಿದೆ. ನೂರಾರು ಧಾರ್ಮಿಕ ಸಂಕೇತಗಳಿರುವಾಗ ಸರ್ಕಾರವು ಹಿಜಾಬ್‌ ಅನ್ನೇ ಏಕೆ ಆಯ್ಕೆ ಮಾಡಿಕೊಂಡಿದೆ. ಬಳೆಗಳನ್ನೂ ಧರಿಸಲಾಗುತ್ತದೆ. ಬಡ ಮುಸ್ಲಿಮ್‌ ವಿದ್ಯಾರ್ಥಿಯರನ್ನೇ ಏಕೆ ಆಯ್ಕೆ ಮಾಡಿಕೊಳ್ಳಲಾಗಿದೆ? ಗೂಂಗಟ್‌ ಧರಿಸಲು ಅನುಮತಿ ಇದೆ, ಬಳೆ ಧರಿಸಲು ಅನುಮತಿ ಇದೆ. ಕ್ರಿಶ್ಚಿಯನ್ನರ ಶಿಲುಬೆಗೇಕೆ ನಿಷೇಧವಿಲ್ಲ? ಸಿಖ್ಖರ ಪಗಡಿಗೇಕೆ ನಿಷೇಧವಿಲ್ಲ?” ಎಂದು ಪ್ರಶ್ನಿಸಿದ್ದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಶಬರಿಮಲೆ ಮತ್ತು ತ್ರಿವಳಿ ತಲಾಕ್‌ ಪ್ರಕರಣಗಳ ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್‌ ರೂಪಿಸಿರುವ ಸಾಂವಿಧಾನಿಕ ನೈತಿಕತೆ ಪರೀಕ್ಷೆಯಲ್ಲಿ ಹಿಜಾಬ್‌ ಧಾರಣೆ ಸಹ ಉತ್ತೀರ್ಣವಾಗಬೇಕು. ಹಿಜಾಬ್‌ ಧಾರಣೆಯು ಕಡ್ಡಾಯವಾಗಿ ಸಾಂವಿಧಾನಿಕ ನೈತಿಕತೆ ಮತ್ತು ವೈಯಕ್ತಿಕ ಘನತೆಯ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕಿದೆ” ಎಂದು ವಾದಿಸಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

ವಿಚಾರಣೆಯ ಮೊದಲ ದಿನವೇ, ನಿಗದಿತ ಸಮವಸ್ತ್ರವನ್ನು ಹೊಂದಿರುವ ಕಾಲೇಜುಗಳಲ್ಲಿ ತರಗತಿಗಳಿಗೆ ಹಾಜರಾಗುವಾಗ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು (ಭಗವಾ) ಧರಿಸಬಾರದು ಅಥವಾ ಯಾವುದನ್ನೂ ಬಳಸಬಾರದು ಎಂದು ಕೋರ್ಟ್ ಮಧ್ಯಂತರ ಆದೇಶವನ್ನು ನೀಡಿತ್ತು.

ಉಡುಪಿಯಿಂದ ಶುರುವಾಗಿದ್ದ ಹಿಜಾಬ್ ಗಲಾಟೆ ರಾಜ್ಯಾದ್ಯಂತ ಹರಡಿತ್ತು. ಮುಸ್ಲಿಂ ಸಮುದಾಯದ ಕೆಲ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಹಕ್ಕು, ನಾವು ಧರಿಸಿಯೇ ಶಾಲೆ- ಕಾಲೇಜಿಗೆ ಬರುತ್ತೇವೆ ಎಂದು ಪ್ರತಿಭಟನೆ ನಡೆಸಿದ್ದರು. ಹಲವರು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಿ ಪ್ರತಿಭಟಿಸಿದ್ದರು.
ಹಿಜಾಬ್ ಧರಿಸಿದ ಕಾರಣಕ್ಕೆ ತರಗತಿಗಳಿಗೆ ಹಾಜರಾಗಲು ಅನುಮತಿ ನಿರಾಕರಿಸಿದ ನಂತರ ಅರ್ಜಿದಾರರು – ಕರ್ನಾಟಕದ ವಿವಿಧ ಕಾಲೇಜುಗಳ ಮುಸ್ಲಿಂ ವಿದ್ಯಾರ್ಥಿನಿಯರು – ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಅರ್ಜಿಯಲ್ಲಿ ಉಲ್ಲೇಖಿಸಲಾದ ಆಧಾರಗಳ ಪೈಕಿ ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧರ್ಮದ ಹಕ್ಕು ಎರಡನ್ನೂ ಸಂವಿಧಾನವು ಖಾತರಿಪಡಿಸುತ್ತದೆ, ಅದರ ಹೊರತಾಗಿಯೂ ವಿದ್ಯಾರ್ಥಿಗಳನ್ನು ಇಸ್ಲಾಮಿಕ್ ನಂಬಿಕೆಗೆ ಸೇರಿದವರೆಂದು ನಿರಂಕುಶವಾಗಿ ಪ್ರತ್ಯೇಕಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement