ಲಂಚ ಕೇಳಿದರೆ ನನ್ನ ಮೊಬೈಲ್‌ ನಂಬರಿಗೆ ಆಡಿಯೋ-ವೀಡಿಯೊ ಮಾಡಿ ಕಳುಹಿಸಿ, ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಆರಂಭ-ಪಂಜಾಬ್ ಸಿಎಂ ಘೋಷಣೆ

ಅಮೃತಸರ್:‌ ಪಂಜಾಬ್‌ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇಂದು, ಗುರುವಾರ (ಮಾ. 17) ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
‘ಭ್ರಷ್ಟಾಚಾರ ನಿಗ್ರಹ ಸಹಾಯವಾಣಿ ಸಂಖ್ಯೆ ನನ್ನ ವೈಯಕ್ತಿಕ ನಂಬರ್ ಆಗಿರುತ್ತದೆ… ಯಾರಾದರೂ ಲಂಚ ಕೇಳಿದರೆ ಆ ನಂಬರ್‌ಗೆ ಆಡಿಯೋ ಮತ್ತು ವೀಡಿಯೊ ಕಳುಹಿಸಿ’ ಎಂದು ಭಗವಂತ್‌ ಮಾನ್ ಟ್ವೀಟ್ ಮಾಡಿದ್ದಾರೆ.
“ನಾನು ಯಾವುದೇ ಸರ್ಕಾರಿ ನೌಕರರಿಗೆ ಬೆದರಿಕೆ ಹಾಕುವುದಿಲ್ಲ. ಏಕೆಂದರೆ ಶೇಕಡಾ 99 ರಷ್ಟು ಸರ್ಕಾರಿ ನೌಕರರು ಪ್ರಾಮಾಣಿಕರಾಗಿದ್ದಾರೆ. ಆದರೆ ಅಂತಹ ಉದ್ಯೋಗಿಗಳಲ್ಲಿ 1 ಪ್ರತಿಶತದಷ್ಟು ನೌಕರರು ಭ್ರಷ್ಟರಾಗಿದ್ದಾರೆ, ಅದು ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಎಎಪಿಯಿಂದ ಮಾತ್ರ ಈ ಭ್ರಷ್ಟ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸಾಧ್ಯ” ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಜನರು ತಮ್ಮ ದಿನನಿತ್ಯದ ಕೆಲಸಕ್ಕಾಗಿ ಲಂಚವನ್ನು ಕೇಳುವ ಅಥವಾ ಇತರ ದುಷ್ಕೃತ್ಯಗಳಲ್ಲಿ ತೊಡಗಿರುವ ಭ್ರಷ್ಟ ಅಧಿಕಾರಿಗಳ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಈ ಸಂಖ್ಯೆಯನ್ನು ಬಳಸಬಹುದಾಗಿದೆ. ಅಂತಹ ಅಧಿಕಾರಿಗಳಿಗೆ ಮಾದರಿ ಶಿಕ್ಷೆ ವಿಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪೋಲೀಸ್ ಮತ್ತು ಆಡಳಿತ ಅಧಿಕಾರಿಗಳೊಂದಿಗಿನ ತನ್ನ ಮೊದಲ ಸಭೆಯಲ್ಲಿ, ಭಗವಂತ್‌ ಮಾನ್ ಭ್ರಷ್ಟಾಚಾರ ಮುಕ್ತ ಸರ್ಕಾರದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭೀಕರ ದುರಂತ : ಭಾರತೀಯ ವಾಯುಪಡೆಯ AN-32 ವಿಮಾನ ಪತನ ; ಐವರು ಸಿಬ್ಬಂದಿ ಸಾವು

ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಮಾನ್ ಅವರು “ಒಂದು ದಿನವನ್ನು ಕೂಡಾ ವ್ಯರ್ಥ ಮಾಡುವುದಿಲ್ಲ” ಎಂದು ಭರವಸೆ ನೀಡಿದ್ದಾರೆ.ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನವಾದ ಮಾರ್ಚ್ 23 ರಂದು ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement