ಗೋಕರ್ಣ : ಮದರಸಾ ಶಿಕ್ಷಣದಿಂದಾಗಿ ಅಲ್ಪಸಂಖ್ಯಾತ ಮಕ್ಕಳು ಇವತ್ತಿನ ಶಿಕ್ಷಣ ಪದ್ದತಿಯಿಂದ ದೂರ ಉಳಿಯಬಾರದು. ಹೀಗಾಗಿ ಮದರಸಾಗಳಲ್ಲಿಯೂ ಶಿಕ್ಷಣ ಪದ್ಧತಿಯಲ್ಲಿ ತರುವ ಪ್ರಯತ್ನ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ವಿಷ್ಣುಪೀಠ ವಿದ್ಯಾಲಯಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಎಲ್ಲ ಮಕ್ಕಳಂತೆ ಈ ಶಿಕ್ಷಣ ಪದ್ಧತಿಗೆ ಬರಬೇಕು, ಅವರು ಸಹಿತ ಮುಂದುವರಿಯಬೇಕು ಎಂಬ ಉದ್ದೇಶದಿಂದ ಮುಂದಿನ ದಿನದಲ್ಲಿ ಈ ಬಗ್ಗೆ ಚಿಂತನೆ ಮಾಡುತ್ತೇವೆ, ಈ ವಿಚಾರ ಅಲ್ಪಸಂಖ್ಯಾತ ನಾಯಕರ ಗಮನಕ್ಕೂ ಬಂದಿದೆ. ಹೀಗಾಗಿ ಮದರಸಾಕ್ಕೆ ಸೇರುವವರ ಸಂಖ್ಯೆ ಕಡಿಮೆಯಾಗಿ ಶಾಲೆಗಳಿಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಈಗಿನ ಜಗತ್ತಿನಲ್ಲಿ ಬದುಕಲು ಈ ಶಿಕ್ಷಣ ಪದ್ಧತಿ ಬೇಕು ಎಂದು ಅಭಿಪ್ರಾಯಪಟ್ಟರು.
ಹಿಜಾಬ್ ತೀರ್ಪಿನಿಂದ ಶಾಲಾ ಕಾಲೇಜಿಗೆ ಬರುವವರ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿಲ್ಲ. 99%ರಷ್ಟು ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಕೇವಲ ಒಂದು ಶೇಕಡಾದಷ್ಟು ಮಕ್ಕಳು ಮಾತ್ರ ಮಾತ್ರ ಬರುತ್ತಿಲ್ಲ. ಅವರನ್ನೂ ಶಾಲೆಗೆ ಕರೆತರುವ ಪ್ರಯತ್ನ ಮಾಡುತ್ತೇವೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಪಾಲಕರಲ್ಲಿರುವ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು 20 ಸಾವಿರ ಶಾಲೆಯಲ್ಲಿ ಮಾತ್ರ ಪ್ರಾರಂಭ ಮಾಡುತ್ತಿದ್ದೇವೆ. ಉಳಿದ ಶಾಲೆಗಳಲ್ಲಿ ಪಾಠಗಳು ಈಗ ಹೇಗೆ ನಡೆಯುತ್ತಿವೆಯೋ ಹಾಗೆಯೇ ನಡೆಯುತ್ತವೆ. ರಾಜ್ಯದಲ್ಲಿ 48 ಸಾವಿರ ಶಾಲೆಗಳಿದ್ದರೂ ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಎಲ್ಲಿ ಮಕ್ಕಳು ಹೆಚ್ಚು ಇರುತ್ತಾರೆಯೇ ಅಂಥ ಶಾಲೆಗಳಲ್ಲಿ ರಾಷ್ಟ್ರೀಯ ಶೀಕ್ಷಣ ನೀತಿ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ