ಹೈದರಾಬಾದ್: ತಿರುಪತಿಯ ತಿರುಮಲ ದೇಗುಲದಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಂತಹ ಪರಿಸ್ಥಿತಿಯಲ್ಲಿ ಕನಿಷ್ಠ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸರ್ವದರ್ಶನ ಟಿಕೆಟ್ ಪಡೆಯಲು ದೇಗುಲದ ಟಿಕೆಟ್ ಕೌಂಟರ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು.ತಿರುಪತಿಯ ತಿರುಮಲದಲ್ಲಿನ ಟಿಕೆಟ್ ಕೌಂಟರ್ಗಳಲ್ಲಿ ಸರ್ವದರ್ಶನ ಟಿಕೆಟ್ ಪಡೆಯಲು 10,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು ಎಂದು ಪ್ರಾಥಮಿಕ ವರದಿ ತಿಳಿಸಿದೆ.
ಏಪ್ರಿಲ್ 12ರ ದರ್ಶನಕ್ಕಾಗಿ ಸರ್ವದರ್ಶನ ಟಿಕೆಟ್ಗಳನ್ನು ಕೊನೆಯದಾಗಿ ಏಪ್ರಿಲ್ 9 ರಂದು ಭಕ್ತರಿಗೆ ನೀಡಲಾಯಿತು. ಬಳಿಕ ಕಳೆದೆರಡು ದಿನಗಳಿಂದ ಭಕ್ತರು ಜಮಾಯಿಸಿದ್ದರಿಂದ ಸರ್ವದರ್ಶನ ಟಿಕೆಟ್ ನೀಡುವುದನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದು, ಮಂಗಳವಾರ ಏಪ್ರಿಲ್ 12ರಂದು ಕೌಂಟರ್ಗಳನ್ನು ತೆರೆದಾಗ ಟಿಕೆಟ್ ತೆಗೆದುಕೊಳ್ಳಲು ಜನರು ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಯಿತು. ಇದೇ ವೇಳೆ ಸರತಿ ಸಾಲಿನಲ್ಲಿ ನಿಂತಿದ್ದ ಶಿಶುಗಳು ಹಾಗೂ ವೃದ್ಧರು ತೀವ್ರ ತೊಂದರೆ ಅನುಭವಿಸಿದರು ಎಂದು ಎಬಿಪಿ ದೇಶಂ ವರದಿ ಮಾಡಿದೆ.
ಸಾಂಕ್ರಾಮಿಕ ರೋಗವು ದೇಶವನ್ನು ಬಾಧಿಸಿದಾಗಿನಿಂದ ಆಫ್ಲೈನ್ ಮೋಡ್ನಲ್ಲಿ ಸರ್ವದರ್ಶನ ಟೋಕನ್ಗಳನ್ನು ನೀಡುವ ಪ್ರಕ್ರಿಯೆಯನ್ನು ಟಿಟಿಡಿ ಸ್ಥಗಿತಗೊಳಿಸಿದೆ. ಆದಾಗ್ಯೂ, ಕೋವಿಡ್ -19 ಕಡಿಮೆಯಾದ ನಂತರ, ಟಿಟಿಡಿ ಆಫ್ಲೈನ್ನಲ್ಲಿಯೂ ಟಿಕೆಟ್ಗಳನ್ನು ನೀಡಲು ಪ್ರಾರಂಭಿಸಿದೆ. ಅಲ್ಲದೆ, ಎರಡು ವರ್ಷಗಳ ನಂತರ ವೈಕುಂಠ ಕ್ಯೂ ಕಾಂಪ್ಲೆಕ್ಸ್ನ ಕಂಪಾರ್ಟ್ಮೆಂಟ್ಗಳಿಗೆ ಭಕ್ತರನ್ನು ಅನುಮತಿಸಲಾಗುತ್ತದೆ.
ವಿಐಪಿ ದರ್ಶನ 5 ದಿನಗಳ ಕಾಲ ಸ್ಥಗಿತ
ಭಾರೀ ಜನಸ್ತೋಮದಿಂದಾಗಿ ತಿರುಮಲ ತಿರುಪತಿ ದೇವಸ್ಥಾನವು ಬುಧವಾರದಿಂದ (ಏಪ್ರಿಲ್ 13) ಭಾನುವಾರದ ವರೆಗೆ (ಏಪ್ರಿಲ್ 17) ಐದು ದಿನಗಳ ಕಾಲ ತಿರುಮಲ ದೇವಸ್ಥಾನದಲ್ಲಿ ವಿಐಪಿ ದರ್ಶನವನ್ನು ರದ್ದುಗೊಳಿಸಿದೆ.
ಐದು ದಿನಗಳ ವಿಐಪಿ ಬ್ರೇಕ್ ದರ್ಶನವನ್ನು ರದ್ದುಗೊಳಿಸಿರುವುದನ್ನು ಭಕ್ತರು ಗಮನಿಸಬೇಕು ಎಂದು ಟಿಟಿಡಿ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದು, ಭಕ್ತರು ದೇವಾಸ್ಥಾನ ಸಂಸ್ಥೆಯೊಂದಿಗೆ ಸಹಕರಿಸುವಂತೆ ವಿನಂತಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ