ಹುಬ್ಬಳ್ಳಿ: ಯುವಕನೊಬ್ಬ ವೀಡಿಯೊವೊಂದನ್ನು ಹಂಚಿಕೊಂಡಿರುವುದು ಈಗ ನಗರದಲ್ಲಿ ಕೋಮು ಉದ್ವಿಗ್ನಕ್ಕೆ ಕಾರಣವಾಗಿದೆ.
ಪೊಲೀಸ್ ಠಾಣೆ ಎದುರೇ ಕಲ್ಲು ತೂರಾಟ ನಡೆದಿದ್ದು, ಪೊಲೀಸ್ ಜೀಪನ್ನು ಪಲ್ಟಿ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಫೋಟೋ ಎಡಿಟ್ ಮಾಡಿ ಮಸೀದಿಯೊಂದರ ಮೇಲೆ ಭಗವಾಧ್ವಜ ಹಾರಿಸಿದಂಥ ವೀಡಿಯೊವೊಂದನ್ನು ಸ್ಟೇಟಸ್ಗೆ ಹಾಕಿಕೊಂಡಿದ್ದು ಕೋಮು ಉದ್ವಿಗ್ನಕ್ಕೆ ಕಾರಣವಾಗಿದೆ. ಈ ವಿಷಯ ತಿಳಿದ ಕೂಡಲೇ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಆ ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.
ಯುವಕನನ್ನು ವಶಕ್ಕೆ ಪಡೆದ ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಹಳೆ ಹುಬ್ಬಳ್ಳಿ ಠಾಣೆ ಬಳಿ ಜಮಾಯಿಸಿದ್ದಾರೆ.
ಈ ವೇಳೆ ಠಾಣೆ ಬಳಿ ಜಮಾಯಿಸಿದ ಒಂದು ಸಮುದಾಯದವರು ಕಲ್ಲುತೂರಾಟ ನಡೆಸಿದ್ದು, ಪೊಲೀಸ್ ಜೀಪ್ ಪಲ್ಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರನ್ನು ಚದುರಿಸಲು ಪೊಲೀಸರು ನಾಲ್ಕು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಅಶ್ರವಾಯು ಸಿಡಿಸಿದ್ದಾರೆ. ಕಲ್ಲೂ ತೂರಾಟದಿಂದ ಪೂರ್ವ ಸಂಚಾರಿ ಠಾಣೆ ಇನ್ಸಪೆಕ್ಟರ್ ನಾಗಯ್ಯ ಕಾಡದೇವರಮಠ ಹಾಗೂ ಪೇದೆ ಸ್ವಾದಿ ಎಂಬರು ಸೇರಿದಂತೆ ಮೂರ್ನಾಲ್ಕು ಪೊಲೀಸರಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ