ಕಾಸರಗೋಡು(ಕೇರಳ) : ಕೇರಳದ ಕಾಸರಗೋಡಿನ ಉಪಾಹಾರ ಗೃಹದಲ್ಲಿ ಶವರ್ಮ ತಿಂದ 16 ವರ್ಷದ ಬಾಲಕಿಯೊಬ್ಬಳು ಭಾನುವಾರ ಮೃತಪಟ್ಟಿದ್ದು, 18 ಮಂದಿ ಫುಡ್ ಪಾಯ್ಸನಿಂಗ್ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಸರಗೋಡು ಸಮೀಪದ ಕರಿವಲ್ಲೋರ್ ನಿವಾಸಿ ದೇವಾನಂದಾ ಎಂಬ ವಿದ್ಯಾರ್ಥಿನಿ ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ್ಯೂಸ್ ಅಂಗಡಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯ ನಂತರ ಸೀಲ್ ಮಾಡಲಾಗಿದೆ. ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್ ಮಾತನಾಡಿ, 18 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಯಾರ ಸ್ಥಿತಿಯೂ ಗಂಭೀರವಾಗಿಲ್ಲ ಎಂದು ತಿಳಿಸಿದ್ದಾರೆ.
ಏಪ್ರಿಲ್ 29 ಮತ್ತು 30 ರಂದು ಇಲ್ಲಿಂದ ಶವರ್ಮ ಸೇವಿಸಿದ್ದ 46 ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಧಿಕೃತವಾಗಿ ದೃಢಪಟ್ಟಿಲ್ಲ. ಬಹುತೇಕ ವಿದ್ಯಾರ್ಥಿಗಳು. ಶವರ್ಮ ತಿಂದ ಕೆಲ ಗಂಟೆಗಳಲ್ಲಿ ವಾಂತಿ , ಜ್ವರ , ತಲೆ ನೋವು ಹಾಗೂ ಇನ್ನಿತರ ಅಸ್ವಸ್ಥತೆ ಕಂಡು ಬಂದಿದ್ದು , ಜಿಲ್ಲಾಸ್ಪತ್ರೆ ಸೇರಿದಂತೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ .
ದೇವಾನಂದಳಿಗೆ ಭಾನುವಾರ ಬೆಳಿಗ್ಗೆ ಅಸ್ವಸ್ಥತೆ ಕಂಡುಬಂದಿದ್ದು , ಬಳಿಕ ಚೆರ್ವತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಜ್ಯೂಸ್ ಅಂಗಡಿಯು ಟ್ಯೂಷನ್ ಸೆಂಟರ್ ಬಳಿ ಇದೆ ಎಂದು ಹೇಳಲಾಗಿದೆ.
ನಾವು ಹೆಚ್ಚಿನ ಪ್ರಕರಣಗಳನ್ನು ನಿರೀಕ್ಷಿಸುತ್ತಿದ್ದೇವೆ ಮತ್ತು ಹತ್ತಿರದ ಇತರ ವೈದ್ಯಕೀಯ ಸಂಸ್ಥೆಗಳ ವೈದ್ಯರು ಮತ್ತು ಸಿಬ್ಬಂದಿಗಳನ್ನು ಚೆರುವತ್ತೂರು ಪಿಎಚ್ಸಿ ಮತ್ತು ನೀಲೇಶ್ವರಂ ತಾಲೂಕು ಆಸ್ಪತ್ರೆಗಳಲ್ಲಿ ಹಾಜರುಪಡಿಸುವಂತೆ ಕೇಳಿದ್ದೇವೆ. ನಾವು ಸೌಮ್ಯ ಸಮಸ್ಯೆಗಳಿರುವ ಜನರಿಗೆ ಚಿಕಿತ್ಸೆ ನೀಡಲು ಯೋಜಿಸಿದ್ದೇವೆ ಮತ್ತು ಗಂಭೀರ ಸ್ಥಿತಿಯಲ್ಲಿರುವವರನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ರಾಮದಾಸ್ ಮಾಧ್ಯಮಗಳಿಗೆ ತಿಳಿಸಿದರು.
ಇದೇ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಸಚಿವ ಎಂ.ವಿ.ಗೋವಿಂದನ್, ರಾಜ್ಯದೆಲ್ಲೆಡೆ ಇರುವ ಹೊಟೇಲ್ಗಳಲ್ಲಿ ಗುಣಮಟ್ಟದ ಆಹಾರ ನೀಡುವಂತೆ ಸರ್ಕಾರ ಖಚಿತಪಡಿಸುತ್ತದೆ.
ರೆಸ್ಟೋರೆಂಟ್ಗಳಲ್ಲಿ ನೀಡಲಾಗುವ ಆಹಾರವು ಉತ್ತಮ ಗುಣಮಟ್ಟದ್ದಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ರಾಜ್ಯಾದ್ಯಂತ ತಪಾಸಣೆ ನಡೆಸುತ್ತದೆ ಎಂದು ಸಚಿವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ