ನವದೆಹಲಿ: ದೇಶಾದ್ಯಂತ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ನಿಧನಾವಾಗಿ ಏರುತ್ತಿರುವ ನಡುವೆಯೇ ಭಾರತದಲ್ಲಿ ನಾಲ್ಕನೇ ಅಲೆ ಬಂದಿಲ್ಲ, ಬರುವ ಸಾಧ್ಯತೆಯೂ ಕಡಿಮೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಹೇಳಿದೆ.
ಪ್ರಸ್ತುತ ದೇಶದಲ್ಲಿನ ಕೋವಿಡ್ ಸೋಂಕಿನ ಪರಿಸ್ಥಿತಿಯನ್ನು ನಾಲ್ಕನೇ ಅಲೆ ಎಂದು ಹೇಳಲಾಗುವುದುಲ್ಲ. ಸೋಂಕು ಸ್ಥಳೀಯ ಮಟ್ಟದಲ್ಲಿದೆ ಇದೆಯಷ್ಟೇ ಎಂದು ಐಸಿಎಂಆರ್ ತಜ್ಞರು ಭಾನುವಾರ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಸೋಂಕಿನ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿದೆ. ದೆಹಲಿಯಲ್ಲಿ ನಿತ್ಯ 1,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲೂ ಸೋಂಕಿನ ಸಂಖ್ಯೆ ಮತ್ತೆ ನೂರನ್ನು ದಾಟಿದೆ. ಕೆಲವು ತಜ್ಞರು ಇದು ನಾಲ್ಕನೇ ಅಲೆಯ ಆರಂಭ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಸದ್ಯ ದೇಶದಲ್ಲಿ ನಾಲ್ಕನೇ ಅಲೆಯ ಸಾಧ್ಯತೆ ಕಡಿಮೆ,’ ಎಂದು ಐಸಿಎಂಆರ್ ಹೆಚ್ಚುವರಿ ನಿರ್ದೇಶಕ ಸಮೀರನ್ ಪಾಂಡಾ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಸಂದರ್ಶನದಲ್ಲಿ ಈ ಬಗ್ಗೆ ಹೇಳಿರುವ ಅವರು, ಜಿಲ್ಲಾ ಮಟ್ಟದಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ ಇದರಿಂದ ಇಡೀ ದೇಶವೇ ನಾಲ್ಕನೇ ಅಲೆಯತ್ತ ಸಾಗುತ್ತಿದೆ ಎಂದು ಹೇಳುವುದು ತಪ್ಪಾಗುತ್ತದೆ ಎಂದು ಹೇಳಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ಪರೀಕ್ಷೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅದರ ಅನುಪಾತಕ್ಕೆ ತಕ್ಕಂತೆ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆಯಷ್ಟೇ.
ಅಲ್ಲದೆ, ಇದು ಕೇವಲ ಸಣ್ಣ ಪ್ರಮಾಣವಷ್ಟೇ. ಇದರಿಂದ ಸಂಪೂರ್ಣ ರಾಜ್ಯಗಳೇ ಕೋವಿಡ್-19 ಸೋಂಕಿಗೆ ಒಳಗಾಗುತ್ತಿವೆ ಅಥವಾ ಭಯದಲ್ಲಿವೆ ಎಂದು ಹೇಳಲಾಗದು ಎಂದು ಹೇಳಿದ ಅವರು ಇದೇವೇಳೆ ದೇಶಾದ್ಯಂತ ಆಸ್ಪತ್ರೆಗೆ ಸೇರುವವರ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ ಎಂಬುದರತ್ತ ಗಮನ ಸೆಳೆದರು. ಜೊತೆಗೆ ನಾಲ್ಕನೇ ಅಲೆಯನ್ನು ಸೂಚಿಸುವ ಕೋವಿಡ್ ವೈರಸ್ಸಿನ ಯಾವುದೇ ಹೊಸ ತಳಿ ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ