ಕೃಷಿ ಕಾನೂನು ವಿರೋಧಿ ಹೋರಾಟದ ಮಂಚೂಣಿಯಲ್ಲಿದ್ದ ಭಾರತೀಯ ಕಿಸಾನ್ ಯೂನಿಯನ್ ಎರಡು ಹೋಳು; ಬಿಕೆಯು (ಎ) ಎಂಬ ಹೊಸ ಸಂಘಟನೆ ರಚನೆ

ನವದೆಹಲಿ: ಸುಮಾರು ಒಂದು ವರ್ಷಗಳ ಕಾಲ ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಡುವ ಜವಾಬ್ದಾರಿಯನ್ನು ಹೊತ್ತಿದ್ದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)  ಈಗ ಎರಡು ಹೋಳಾಗಿದೆ. ರಾಕೇಶ ಟಿಕಾಯತ್‌ ಅವರು ಸಂಘಟನೆಯನ್ನು ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಬಿಕೆಯು (ಎ) ಎಂಬ ಹೊಸ ರೈತ ಸಂಘಟನೆ ರಚನೆ ಮಾಡಲಾಗಿದ್ದು, ರೈತ ನಾಯಕ ರಾಜೇಶ್ ಸಿಂಗ್ ಚೌಹಾಣ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೌಹಾಣ್, ರೈತರ ಹಿತಾಸಕ್ತಿಗಳನ್ನು ಕಾಪಾಡಲು ರಚಿಸಲಾದ ಬಿಕೆಯು ಸಂಘಟನೆಯನ್ನು ಟಿಕಾಯತ್ ಸಹೋದರರು ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರೈತರ ಹಿತಾಸಕ್ತಿಗಳನ್ನು ಕಾಪಾಡಲು ನಿರ್ಮಿಸಲಾದ ಏಕೀಕೃತ ಭಾರತೀಯ ಕಿಸಾನ್ ಯೂನಿಯನ್ ರಚಿಸಲು ಸಾಕಷ್ಟು ಶ್ರಮ ವಹಿಸಲಾಗಿದೆ. ಹಾಗಿದ್ದರೂ, ಟಿಕಾಯತ್‌ ಸಹೋದರರ ಅಡಿಯಲ್ಲಿ ಸಂಘಟನೆಯು ‘ರಾಜಕೀಯ ಸಂಘಟನೆಯಾಗಿ ಬದಲಾಗುತ್ತಿತ್ತು. ರೈತ ಸಂಘಟನೆಯು ಯಾವುದೇ ‘ರಾಜಕೀಯ ಪಕ್ಷ’ಕ್ಕೆ ಕೆಲಸ ಮಾಡುವುದಿಲ್ಲ. ಭಾರತೀಯ ಕಿಸಾನ್ ಯೂನಿಯನ್ (ಅಪಾಲಿಟಿಕಲ್) ಎಂಬ ಹೊಸ ಬಣವನ್ನು ರಚಿಸುತ್ತೇವೆ ಎಂದು ರಾಜೇಶ್ ಸಿಂಗ್ ಚೌಹಾಣ್ ಹೊಸ ಬಣದ ಬಗ್ಗೆ ಘೋಷಿಸಿದ್ದಾರೆ.

ಇಂದು,ಭಾನುವಾರ ನಮ್ಮ ಸಂಘಟನೆಯು ಸಭೆ ನಡೆಸಿತು. ನಮ್ಮ ಹೊಸ ಸಂಘಟನೆಯ ಹೆಸರು ಭಾರತೀಯ ಕಿಸಾನ್ ಯೂನಿಯನ್ (ಅಪಾಲಿಟಿಕಲ್) ಆಗಿರುತ್ತದೆ. ರಾಕೇಶ್ ಟಿಕಾಯತ್ ಅಥವಾ ನರೇಶ್ ಟಿಕಾಯತ್ ಬಗ್ಗೆ ನಮ್ಮ ಯಾವುದೇ ಪ್ರತಿಕ್ರಿಯೆ ಇಲ್ಲ, ಅವರು ಏನು ಮಾಡಬೇಕೆಂದು ಬಯಸುತ್ತಾರೋ ಅದನ್ನು ಮಾಡಲಿ, ಆದರೆ ನಾವು ಹಾಗೆ ಮಾಡುವುದಿಲ್ಲ. ಅವರಿಂದಾಗಿ ಬಿಕೆಯುವಿನಲ್ಲಿ ರಾಜಕೀಯ ಪ್ರೇರಿತ ನಿರ್ಧಾರಗಳು ಬರಲು ಆರಂಭಿಸಿದವು. ನಾವು ರಾಕೇಶ್ ಟಿಕಾಯತ್ ಅವರೊಂದಿಗೆ ಮಾತನಾಡಿ ನಮ್ಮ ಕಳವಳವನ್ನು ವ್ಯಕ್ತಪಡಿಸಿದ್ದೇವೆ. ನಾವು ಬಿಕೆಯು ಅನ್ನು ರಚಿಸಲು ಸಾಕಷ್ಟು ಶ್ರಮಿಸಿದ್ದೇವೆ, ಆದರೆ ಅವರು ಒಂದು ಪಕ್ಷವನ್ನು ಬೆಂಬಲಿಸುವಂತೆ ಕೇಳಿದರು. ಅದಕ್ಕೆ ನಾವು ಆಕ್ಷೇಪಿಸುತ್ತೇವೆ. ನಮ್ಮ ಉದ್ದೇಶವು ರೈತರ ಸಮಸ್ಯೆಗಳನ್ನು ಪರಿಶೀಲಿಸುವುದು. ನಾವು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಲ್ಲ ಹಾಗೂ ಮಾಡುವುದೂ ಇಲ್ಲ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದರೊಂದಿಗೆ ರೈತರ ಮುಕ್ತಾಯಗೊಂಡ ನಂತರ, ರಾಕೇಶ್ ಟಿಕಾಯತ್ ರಾಜಕೀಯ ಪಕ್ಷಗಳ ಪ್ರಚಾರದೊಂದಿಗೆ ಗುರುತಿಸಿಕೊಂಡಿದ್ದರು. ರೈತರ ಸಂಘಟನೆಯ ವಕ್ತಾರರಾಗಿ, ಟಿಕಾಯತ್ ಅವರ ರಾಜಕೀಯ ಸಂಬಂಧಗಳು ಅಚ್ಚರಿ ಮೂಡಿಸಿದ್ದವು.ನಾನು ನರೇಶ್ ಟಿಕಾಯತ್ ಮತ್ತು ರಾಕೇಶ್ ಟಿಕಾಯತ್ ಅವರನ್ನು ಪೂರ್ಣ ಹೃದಯದಿಂದ ಬೆಂಬಲಿಸಿದೆ. ಆದರೆ ಚುನಾವಣೆ ಬಂದಾಗ ಅವರು ಮಹೇಂದ್ರ ಸಿಂಗ್ ಟಿಕಾಯತ್ ಅವರ ಆದರ್ಶದಿಂದ ವಿಮುಖರಾದರು ಎಂದು ಚೌಹಾಣ್ ಆರೋಪಿಸಿದ್ದಾರೆ.
ಅವರು ಈ ಸಂಘಟನೆಯನ್ನು ರಾಜಕೀಯ ಪಕ್ಷಗಳ ಕೈಗೊಂಬೆಯನ್ನಾಗಿ ಮಾಡಿದರು. ಇದರಿಂದ ನಾನು ತುಂಬಾ ದುಃಖಿತನಾಗಿದ್ದೆ ಮತ್ತು ನನಗೆ ನೋವಾಗಿದೆ. ರಾಕೇಶ್ ಟಿಕಾಯತ್ ರಾಜಕೀಯ ಪಕ್ಷಗಳಿಂದ ಪ್ರಭಾವಿತರಾಗಿದ್ದರು. ಅವರು ಒಂದು ಪಕ್ಷದ ಪರವಾಗಿ ಪ್ರಚಾರ ಮಾಡಿದರು, ಇನ್ನೊಂದು ಪಕ್ಷವನ್ನು ವಿರೋಧಿಸಿದರು.”ಎಂದು ಚೌಹಾಣ್ ಹೇಳಿದರು ಆದರೆ ಯಾವುದೇ ರಾಜಕೀಯ ಪಕ್ಷವನ್ನು ಅವರು ಹೆಸರಿಸಲಿಲ್ಲ.
ಚೌಹಾಣ್ ಅವರು ಹೊಸ ಸಂಘಟನೆಯನ್ನು ರಚಿಸಿದ್ದಾರೆ ಮತ್ತು ಕೆಲವು ಮಾಧ್ಯಮಗಳಲ್ಲಿ ತೋರಿಸಿರುವಂತೆ ನರೇಶ್ ಟಿಕಾಯಿತ್ ಮತ್ತು ರಾಕೇಶ್ ಟಿಕಾಯತ್‌ ಅವರನ್ನು ಹೊರಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅವರು (ಟಿಕಾಯತ್ ಸಹೋದರರು) ಬಿಕೆಯು (BKU)ಗೆ ಸೇರಿದವರು ಆದರೆ ನನ್ನ ಸಂಸ್ಥೆ BKU (A). ಇದೊಂದು ಹೊಸ ಸಂಸ್ಥೆಯಾಗಿದ್ದು, ನಾವು ಯಾವುದೇ ವಿವಾದವನ್ನು ಬಯಸುವುದಿಲ್ಲ ಎಂದು ಚೌಹಾಣ್ ಹೇಳಿದ್ದಾರೆ.
ಮಹೇಂದ್ರ ಸಿಂಗ್ ಟಿಕಾಯತ್ ಪಶ್ಚಿಮ ಉತ್ತರ ಪ್ರದೇಶದ ಪ್ರಭಾವಿ ರೈತ ನಾಯಕರಾಗಿದ್ದರು. ಅವರು ಅಕ್ಟೋಬರ್ 6, 1935 ರಂದು ಮುಜಾಫರ್ನಗರ ಜಿಲ್ಲೆಯ ಸಿಸೌಲಿ ಗ್ರಾಮದಲ್ಲಿ ಜನಿಸಿದರು ಮತ್ತು ಭಾರತೀಯ ಕಿಸಾನ್ ಒಕ್ಕೂಟದ ಸ್ಥಾಪಕ ಅಧ್ಯಕ್ಷರಾಗಿದ್ದರು.
ಅವರು ಮೇ 15, 2011 ರಂದು ತಮ್ಮ 75 ನೇ ವಯಸ್ಸಿನಲ್ಲಿ ಮುಜಫರ್‌ನಗರದಲ್ಲಿ ನಿಧನರಾದರು. BKU ಅನ್ನು 1987 ರಲ್ಲಿ ಸ್ಥಾಪಿಸಲಾಯಿತು ಮತ್ತು ಅದರ ಪ್ರಸ್ತುತ ಅಧ್ಯಕ್ಷ ನರೇಶ್ ಟಿಕಾಯತ್‌ ಆಗಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement