ಪಟಿಯಾಲಾ (ಪಂಜಾಬ್): ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಂಜಾಬ್ನ ಪಟಿಯಾಲಾ ಸೆಷನ್ಸ್ ಕೋರ್ಟ್ಗೆ ಇಂದು, ಶುಕ್ರವಾರ ಶರಣಾಗಿದ್ದಾರೆ.
1988 ರ ರಸ್ತೆ ರಂಪಾಟ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಗುರುವಾರ ಸಿಧುಗೆ 1 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಶುಕ್ರವಾರ ಬೆಳಗ್ಗೆ ಸಿಧು ಕೋರ್ಟ್ಗೆ ಶರಣಾಗಬೇಕಿತ್ತು. ಆದರೆ ಅನಾರೋಗ್ಯದ ಕಾರಣವೊಡ್ಡಿ ಶರಣಾಗತಿಗೆ ಸಮಯ ನೀಡುವಂತೆ ಸಿಧು ಪರ ವಕೀಲ, ಅಭಿಷೇಕ್ ಮನು ಸಿಂಘ್ವಿ ಸುಪ್ರೀಂ ಕೋರ್ಟ್ ಕದ ತಟ್ಟಲು ನಿರ್ಧರಿಸಿದ್ದರು. ಆದರೆ ಸಂಜೆ ಸಿಧು ಕೋರ್ಟ್ಗೆ ಶರಣಾದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನವಜೋತ್ ಸಿಂಗ್ ಸಿಧು ಮಾಧ್ಯಮ ಸಲಹೆಗಾರ ಹಾಗೂ ಕಾಂಗ್ರೆಸ್ ನಾಯಕ ಸುರೀಂದರ್ ದಲ್ಲಾ, ಸಿಧು ನ್ಯಾಯಾಧೀಶರ ಎದುರು ತಾವೇ ಖುದ್ದಾಗಿ ಶರಣಾಗಿದ್ದಾರೆ. ಮೊದಲಿಗೆ ಸಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳಲಾಗುತ್ತದೆ. ನಂತರ ಅವರ ವೈದ್ಯಕೀಯ ಪರೀಕ್ಷೆ ಹಾಗೂ ಇನ್ನಿತರ ಕಾನೂನಾತ್ಮಕ ಪ್ರಕ್ರಿಯೆಗಳೂ ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.
ಪಂಜಾಬ್ನ ಪಟಿಯಾಲಾದಲ್ಲಿ 1988 ಡಿಸೆಂಬರ್ 27 ರಂದು ಜಿಪ್ಸಿ ವಾಹನದಲ್ಲಿ ತೆರಳುತ್ತಿದ್ದ ಸಿಧು, ರಸ್ತೆ ಮಧ್ಯದ ಕ್ರಾಸಿಂಗ್ನಲ್ಲಿ ತಮ್ಮ ವಾಹನ ನಿಲ್ಲಿಸಿದ್ದರು. ಈ ವೇಳೆ ಸಿಧು ಜೊತೆಗೆ ಅವರ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಇದ್ದರು. ಇದೇ ಮಾರ್ಗದಲ್ಲಿ ಮಾರುತಿ ಕಾರ್ನಲ್ಲಿ ಬಂದ ಗುರ್ನಾಮ್ ಸಿಂಗ್ ಎಂಬ ವೃದ್ಧರು ತಮಗೆ ಜಾಗ ಬಿಡುವಂತೆ ಸಿಧುಗೆ ಕೇಳಿಕೊಂಡಿದ್ದರು. ಬ್ಯಾಂಕ್ಗೆ ತೆರಳಿ ಮದುವೆಗೆ ಹಣ ಡ್ರಾ ಮಾಡಿಕೊಂಡು ಬರುವ ತರಾತುರಿಯಲ್ಲಿ ಗುರ್ನಾಮ್ ಸಿಂಗ್ ಇದ್ದರು. ಆದ್ರೆ, ಸಿಧು ಗುರ್ನಾಮ್ ಅವರ ವಾಹನ ಸಾಗಲು ದಾರಿ ಬಿಡಲಿಲ್ಲ ಎಂದು ಅರೋಪಿಸಲಾಗಿದೆ. ಈ ವೇಳೆ ವೃದ್ಧ ಗುರ್ನಾಮ್ ಸಿಂಗ್ ಹಾಗೂ ಜೊತೆಗಿದ್ದ ಜಸ್ವಿಂದರ್ ಸಿಂಗ್ ಅವರ ಮೇಲೆ ಸಿಧು ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ. ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಗುರ್ನಾಮ್ ಸಿಂಗ್ ಹಲ್ಲೆಯಿಂದಾಗಿ ಅಸ್ವಸ್ಥರಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತ ಪಟ್ಟಿದ್ದರು. ಈ ವೇಳೆ ಸ್ಥಳದಿಂದ ಪರಾರಿಯಾಗಿದ್ದ ನವಜೋತ್ ಸಿಂಗ್ ಸಿಧು ಅವರನ್ನು ಬಂಧಿಸಲಾಗಿತ್ತು..
ನಿಮ್ಮ ಕಾಮೆಂಟ್ ಬರೆಯಿರಿ