ಮುಂಬೈ: ಮುಂಬೈನ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯವು ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಆರೋಪಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಂಡಿದೆ.
ಪ್ರಕರಣವನ್ನು ಮುಂದುವರಿಸಲು ಸಾಕಷ್ಟು ಆಧಾರಗಳಿವೆ ಎಂಬುದನ್ನು ಗಮನಿಸಿದ ವಿಶೇಷ ನ್ಯಾಯಾಧೀಶ ಆರ್. ಎನ್. ರೋಕಡೆ ನವಾಬ್ ಮಲಿಕ್ ಹಾಗೂ ಮತ್ತಿತರ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಮಲಿಕ್ ಚಿಕಿತ್ಸೆಗೆ ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳಿವೆಯೇ ಎಂದು ಇಡಿಯನ್ನು ಪ್ರಶ್ನಿಸಿದ ಮುಂಬೈ ಕೋರ್ಟ್
“ಶ್ರೀಮತಿ ಮುನಿರಾ ಪ್ಲಂಬರ್ (ದೂರುದಾರಳು) ಅವರಿಗೆ ಸೇರಿದ ಪ್ರಧಾನ ಆಸ್ತಿ ಕಬಳಿಸಲು ಡಿ ಕಂಪೆನಿಯ ಸದಸ್ಯರೊಂದಿಗೆ ಸೇರಿ ನವಾಬ್ ಮಲಿಕ್ ಕ್ರಿಮಿನಲ್ ಸಂಚು ರೂಪಿಸಿದ್ದರು. ಹೀಗಾಗಿ ಹಸೀನಾ ಪಾರ್ಕರ್ ಮತ್ತಿತರರೊಂದಿಗೆ ಸೇರಿ ಆರೋಪಿ (ಮಲಿಕ್) ಅತಿಕ್ರಮಿಸಿದ ಆಸ್ತಿ ಪಿಎಂಎಲ್ಎ ಕಾಯಿದೆಯಡಿ ಅಪರಾಧದ ಗಳಿಕೆಯಾಗಿದೆ. ಆರೋಪಿ ನೇರವಾಗಿ ಮತ್ತು ಉದ್ದೇಶಪೂರ್ವಕವಾಗಿ ಅಕ್ರಮ ಹಣ ವರ್ಗಾವಣೆ ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದು ಸೂಚಿಸುವ ಮೇಲ್ನೋಟದ ಸಾಕ್ಷಿಗಳು ಇವೆ. ಆದ್ದರಿಂದ, ಅಕ್ರಮ ಹಣ ವರ್ಗಾವಣೆಯ ಅಪರಾಧ ಎಸಗಿದ್ದಕ್ಕೆ ಆರೋಪಿ ಜವಾಬ್ದಾರನಾಗಿದ್ದು ಶಿಕ್ಷೆಗೆ ಅರ್ಹನಾಗಿದ್ದಾನೆ” ಎಂದು 7 ಪುಟಗಳ ಆದೇಶದಲ್ಲಿ ತಿಳಿಸಲಾಗಿದೆ.
ಡಿ-ಕಂಪನಿ ಎಂಬುದು ದಾವೂದ್ ಇಬ್ರಾಹಿಂ ನೇತೃತ್ವದ ಭೂಗತ ಸದಸ್ಯರಿಗೆ ನೀಡಲಾದ ಅನೌಪಚಾರಿಕ ಹೆಸರು. ಕಳೆದ ತಿಂಗಳು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ 9 ಸಂಪುಟದಷ್ಟು ಬೃಹತ್ ಆರೋಪ ಪಟ್ಟಿ ಸಲ್ಲಿಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ