2022-23ರಲ್ಲಿ ರೈತರ ರಸಗೊಬ್ಬರಕ್ಕೆ ಹೆಚ್ಚುವರಿಯಾಗಿ ₹ 1.10 ಲಕ್ಷ ಕೋಟಿ ಸಬ್ಸಿಡಿ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರ ದರದಲ್ಲಿ ಭಾರಿ ಏರಿಕೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ ₹ 1.10 ಲಕ್ಷ ಕೋಟಿ ಮೊತ್ತವನ್ನು ರಸಗೊಬ್ಬರ ಸಬ್ಸಿಡಿಗೆ ನೀಡುವುದಾಗಿ ಹೇಳಿದೆ.
ಜಾಗತಿಕ ಮಟ್ಟದಲ್ಲಿ ಆಗಿರುವ ಬೆಲೆ ಏರಿಕೆಯ ಪರಿಣಾಮವನ್ನು ರಸಗೊಬ್ಬರ ಸಬ್ಸಿಡಿ ದರ ಏರಿಕೆಯ ಮೂಲಕ ರೈತರಿಗೆ ಹೊರೆಯಾಗದಂತೆ ನಿರ್ಧಾರ ಕೈಗೊಳ್ಳಲಾಗಿದೆ.
ಇದರಿಂದಾಗಿ 2022-23ನೇ ಹಣಕಾಸು ವರ್ಷಕ್ಕೆ ರಸಗೊಬ್ಬರಕ್ಕೆ ನೀಡುವ ಒಟ್ಟಾರೆ ಸಬ್ಸಿಡಿಯು ₹ 2.15 ಲಕ್ಷ ಕೋಟಿಗೆ ತಲುಪಬಹುದು ಎಂದು ಅಂದಾಜು ಮಾಡಲಾಗಿದೆ.

ಬಜೆಟ್‌ನಲ್ಲಿ ₹ 1.05 ಲಕ್ಷ ಕೋಟಿ ಸಬ್ಸಿಡಿ ನಿಗದಿಪಡಿಸಿದ್ದು, ಅದಲ್ಲದೆ ಹೆಚ್ಚುವರಿಯಾಗಿ ₹ 1.10 ಲಕ್ಷ ಕೋಟಿಯನ್ನು ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. 2021-22ನೇ ಹಣಕಾಸು ವರ್ಷದಲ್ಲಿ ರಸಗೊಬ್ಬರ ಸಬ್ಸಿಡಿಗೆ ₹ 1.62 ಲಕ್ಷ ಕೋಟಿ ಮೊತ್ತ ನೀಡಲಾಗಿತ್ತು.
ಅಲ್ಲದೆ, ಉಕ್ಕಿನ ಕಚ್ಚಾ ಸಾಮಗ್ರಿಗಳ ಮೇಲಿನ ಆಮದು ಸುಂಕ ಕೈಬಿಡಲಾಗಿದ್ದು, ಉಕ್ಕು ಉತ್ಪನ್ನಗಳ ದರ ಕಡಿಮೆ ಆಗಲಿದೆ. ಇದರ ಜೊತೆಗೆ ಕಬ್ಬಿಣದ ಅದಿರಿನ ಲಭ್ಯತೆ ಸುಧಾರಿಸುವ ನಿಟ್ಟಿನಲ್ಲಿ ರಫ್ತು ಸುಂಕವನ್ನು ಶೇ 30ರಿಂದ ಶೇ 50ಕ್ಕೆ ಹೆಚ್ಚಿಸಲಾಗಿದೆ. ಭಾನುವಾರದಿಂದ ಈ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಹೇಳಲಾಗಿದೆ.
ಪ್ಲಾಸ್ಟಿಕ್‌ ಉದ್ಯಮದಲ್ಲಿ ಬಳಸುವ ಕಚ್ಚಾ ಸಾಮಗ್ರಿಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲಾಗಿದೆ. ಸಿಮೆಂಟ್‌ ಲಭ್ಯತೆಯನ್ನು ಸುಧಾರಿಸಲು ಮತ್ತು ಸಿಮೆಂಟ್ ಬೆಲೆ ಕಡಿಮೆ ಮಾಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ; ಪಾಕ್‌ಗೆ ಬೆಂಬಲಿಸಿದ ಟರ್ಕಿ : ಭಾರತದಿಂದ ಹೊರದಬ್ಬಿದ ಒಂದೇ ದಿನದಲ್ಲಿ ಟರ್ಕಿ ಕಂಪನಿಗೆ ₹4700 ಕೋಟಿ ನಷ್ಟ !

ಜಾಗತಿಕ ಬೆಲೆಯಲ್ಲಿನ ತೀವ್ರ ಏರಿಕೆಯಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ರಸಗೊಬ್ಬರ ಸಬ್ಸಿಡಿ ಬಿಲ್ ₹ 2-2.5 ಲಕ್ಷ ಕೋಟಿಗಳ ನಡುವೆ ಇರಬಹುದೆಂದು ರಾಸಾಯನಿಕಗಳು ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವಿಯಾ ಇತ್ತೀಚೆಗೆ ಹೇಳಿದ್ದರು.
ಭಾರತವು ಯೂರಿಯಾ, ಪೊಟ್ಯಾಸಿಕ್ ಮತ್ತು ಫಾಸ್ಫೇಟಿಕ್ ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತದೆ, ಆದರೆ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ರಸಗೊಬ್ಬರ ಬೆಲೆ ಏರಿಕೆಯಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement