ಬೆಳಗಾವಿ : ಶಕ್ತಿ ಕೇಂದ್ರ ಎನಿಸಿಕೊಂಡಿರುವ ಸುವರ್ಣ ವಿಧಾನಸೌಧದ ಬಾಗಿಲಲ್ಲಿ ಈಗ ಶಾವಿಗೆ, ಸಂಡಿಗೆ ಒಣ ಹಾಕಿರುವುದು ಭಾರೀ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಈಗ ಸದ್ದು ಮಾಡುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ಸೌಧದ ಭದ್ರತೆಗೆ ನಿಯೋಜಿಸಲಾಗಿದ್ದರೂ ಅವರ ಕಣ್ತಪ್ಪಿಸಿ ಶಾವಿಗೆ ಒಣಗಿಸಿರುವುದು ಆದರೂ ಹೇಗೆ ಎನ್ನುವ ಪ್ರಶ್ನೆಗೆ ಕಾರಣವಾಗಿದೆ.
ಇಷ್ಟರಲ್ಲೇ ಮಳೆಗಾಲ ಕಾಲಿಡಲಿದೆ. ಈ ಹಿನ್ನಲೆಯಲ್ಲಿ ಯಾರೋ ನಿವಾಸಿಗಳು ಮಳೆಗಾಲಕ್ಕೆ ಬೇಕಾದ ಶಾವಿಗೆ, ಸಂಡಿಗೆ ಒಣ ಹಾಕಲು ಸುವರ್ಣಸೌಧದ ಬಾಗಿಲಿನ ಜಾಗವನ್ನು ಆಯ್ಕೆ ಮಾಡಿಕೊಂಡ ಫೋಟೋ ವೈರಲ್ ಆದ ನಂತರ ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣವಾದ ನಂತರ ಅದರ ನಿರೀಕ್ಷಿತ ಉದ್ದೇಶ ಈಡೇರಿಕೆ ಬಗ್ಗೆ ಪ್ರಶ್ನೆಗಳಿ ಇರುವಾಗಲೇ ಈ ಫೋಟೋ ವೈರಲ್ ಆಗಿದೆ.
ಬೆಳಗಾವಿ ಗಡಿಭಾಗವನ್ನು ಅಭಿವೃದ್ಧಿ ಪಡಿಸಲು ಕರ್ನಾಟಕ ಸರ್ಕಾರ 400 ಕೋಟಿ ವೆಚ್ಚದಲ್ಲಿ ಭವ್ಯ ಸುವರ್ಣ ಸೌಧವನ್ನು ನಿರ್ಮಿಸಿದೆ. ಆದರೆ ಈಗ ಸುವರ್ಣಸೌಧದ ಆವರಣದಲ್ಲಿ ಸಂಡಿಗೆಗಳನ್ನು ಒಣಹಾಕಲು ನಾಗರಿಕರು ದುರ್ಬಳಕೆ ಮಾಡಿಕೊಂಡಿರುವುದು ಎಷ್ಟು ಸರಿ ಪ್ರಜ್ಞಾವಂತರು ಪ್ರಶ್ನಿಸಿದ್ದಾರೆ. ಈ ವೈರಲ್ ಫೋಟೋಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ.
ನಿಮ್ಮ ಕಾಮೆಂಟ್ ಬರೆಯಿರಿ