ಪಠ್ಯದಲ್ಲಿ ಸತ್ಯವಿರಬೇಕು, ನಿಮ್ಮ ಐಡಿಯಾಲಜಿಗಳಲ್ಲ : ಸಾಹಿತಿ ಎಸ್. ಎಲ್.ಭೈರಪ್ಪ

ಮೈಸೂರು: ಪಠ್ಯದಲ್ಲಿ ಸತ್ಯ ಇರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದು ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಎಸ್. ಎಲ್.ಭೈರಪ್ಪ ಹೇಳಿದ್ದಾರೆ.
ನಗರದಲ್ಲಿ ಇಂದು, ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ನನ್ನದು ಯಾವುದೇ ನಿಲುವನ್ನು ಪ್ರಕಟಿಸುತ್ತಿಲ್ಲ. ಇಂದಿರಾಗಾಂಧಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿತ್ತು. ಆಗ ನನ್ನನ್ನು ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು ಎಂದು ಅವರು ಹೇಳಿದ್ದಾರೆ.
ನನ್ನನ್ನು ಯಾವ ಕಾರಣಕ್ಕೆ ಹೊರಗಿಟ್ಟರು ಅಂದರೆ ನಾನು ಪಠ್ಯದಲ್ಲಿ ಸತ್ಯವನ್ನು ಹೇಳಬೇಕು ಎಂದಿದ್ದಕ್ಕೆ ನನ್ನನ್ನು ಹೊರಗಿಟ್ಟರು. ಆಗಲೂ ಅವರಿಗೆ ಬೇಕಾದವರನ್ನು ಸೇರಿಸಿಕೊಂಡು ಪಠ್ಯ ರಚನೆ ಮಾಡಿದ್ದರು. ಆವತ್ತಿನ ಬಹುತೇಕ ಕಾಂಗ್ರೆಸ್ ಸರ್ಕಾರದ ರಾಜ್ಯಗಳು ಆ ಪಠ್ಯವನ್ನು ಒಪ್ಪಿಕೊಂಡು ಅಳವಡಿಸಿಕೊಂಡವು ಎಂದು ಭೈರಪ್ಪ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಪಠ್ಯ ಪುಸ್ತಕದಲ್ಲಿ ಪ್ರಾಮಾಣಿಕವಾದದ್ದು ಯಾವುದೋ ಅದು ಇರಬೇಕು ಎಂದ ಅವರು, ವಾಜಪೇಯಿ ಪ್ರಧಾನಿ ಆಗಿದ್ದ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದರು. ಆಗ ಸಾಹಿತಿಗಳು ದೇಶದ ತುಂಬೆಲ್ಲ ‘ಪ್ರಶಸ್ತಿ ವಾಪ್ಸಿ’ ಚಳವಳಿ ಶುರು ಮಾಡಿದರು. ಆಗ ನಾನು, ಪ್ರಶಸ್ತಿ ಜೊತೆಗೆ ಹಣವನ್ನೂ ವಾಪಸ್ ಕೊಡಿ ಎಂದು ಸಲಹೆ ಕೊಟ್ಟಿದ್ದೆ. 15 ದಿನಗಳಲ್ಲಿ ಎಲ್ಲರೂ ಸುಮ್ಮನಾಗಿದ್ದರು ಎಂದು ಭೈರಪ್ಪ ಹೇಳಿದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಟಿಪ್ಪು ವಿಚಾರದಲ್ಲಿ ಎಡಪಂಥೀಯರುಮ ಮುಸ್ಲಿಮರು ಅವರದ್ದೇ ಐಡಿಯಾಲಜಿ ಮುಂದಿಡುತ್ತಾರೆ. ‘ಟಿಪ್ಪುವಿನ ನಿಜ ಸ್ವರೂಪ’ ಪುಸ್ತಕವನ್ನು ಯಾರೂ ಓದುವುದಿಲ್ಲ. ಬ್ರಿಟಿಷರು ನಷ್ಟವನ್ನು ತುಂಬಿಕೊಡುವಂತೆ ಟಿಪ್ಪುವಿಗೆ ಹೇಳಿದ್ದರು. ಹಣ ಇಲ್ಲದ ಕಾರಣಕ್ಕಾಗಿ ಮಕ್ಕಳನ್ನು ಒತ್ತೆಯಿಟ್ಟ. ಭಾರತವನ್ನು ಇಸ್ಲಾಂ ದೇಶ ಮಾಡೋಣ ಎಂದು ಟಿಪ್ಪು ಅಫ್ಘಾನಿಸ್ಥಾನದ ಸುಲ್ತಾನನಿಗೆ ಪತ್ರ ಬರೆದಿದ್ದ. ಆದರೆ ಯಾರೂ ಏಕೆ ಇದನ್ನು ಹೇಳುವುದಿಲ್ಲ. ನಮ್ಮ ರಾಷ್ಟ್ರದಲ್ಲಿ ಈ ರೀತಿ ಯಾಕೆ ಆಗುತ್ತಿದೆ ಎಂದು ಅರ್ಥವಾಗುತ್ತಿಲ್ಲ. ನೆಹರು ಅವರು ಔರಂಗಜೇಜ್‌ನನ್ನು ಆದರ್ಶವಾದಿ ಎಂದು ಬರೆಯುತ್ತಾರೆ. ಜೊತೆಗೆ ಆತನಿಗೆ ಅತಿರೇಕವಿತ್ತು ಎಂದೂ ಬರೆಯುತ್ತಾರೆ. ಆತ ಒಡೆದ ದೇವಸ್ಥಾನದ ಬಗ್ಗೆ ಮಾತನಾಡಿದರೆ ಕೋಮುವಾದಿ ಎಂದು ಹೇಳುತ್ತಾರೆ. ಪಠ್ಯದಲ್ಲಿ ಸತ್ಯವನ್ನು ಹೇಳಲು ಆಗುತ್ತಿಲ್ಲ. ಬದಲಾವಣೆ ಮಾಡಲು ಹೋದರೆ ಗಲಾಟೆ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾಬಲೇಶ್ವರ ಗಡ ಜಾಗದ ಬಗ್ಗೆ ಉಲ್ಲೇಖಿಸಿದ ಭೈರಪ್ಪ, ಮಹಾಬಲೇಶ್ವರದಲ್ಲಿ ಇತಿಹಾಸ ಮರೆ ಮಾಚಲಾಗಿದೆ. ಶಿವಾಜಿ ಕೊಲ್ಲಲು ಬಂದಿದ್ದ ಅಫ್ಜಲ್ಖಾನ್ ನನ್ನು ನಾಯಕನಂತೆ ಬಿಂಬಿಸಲಾಗಿದೆ. ನಾನು ಆ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆ. ಅಲ್ಲಿದ್ದ ಗೈಡ್ ಮೊದಲು ನನಗೆ ಸತ್ಯ ಹೇಳಲಿಲ್ಲ. 5 ರೂಪಾಯಿ ಕೊಟ್ಟ ನಂತರ ಘಟನಾ ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದ. ಅಫ್ಜಲ್‌ ಖಾನ್‌ ದಾಳಿ ಬಗ್ಗೆ ಅಲ್ಲಿ ಮೊದಲು ನಾಮ ಫಲಕ ಹಾಕಲಾಗಿತ್ತು. ಸರ್ಕಾರವೇ ನಂತರ ಅದನ್ನು ತೆಗೆದು ಹಾಕಿದೆ. ಇದನ್ನು ಯಾರಿಗೂ ಹೇಳಬೇಡಿ ಎಂದು ಆತ ಕೇಳಿಕೊಂಡ. ಇದೆಲ್ಲವೂ ಚುನಾವಣೆಗಾಗಿ ಆಗಿದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಣ ಸಚಿವ ನಾಗೇಶ್ ಅವರ ಮನೆ ಮೇಲೆ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪೊಲೀಸರು ಇಲ್ಲದಿದ್ದರೆ ನಾಗೇಶ ಅವರ ಮನೆ ಸುಟ್ಟು ಹೋಗುತ್ತಿತ್ತು. ಇಂಥದ್ದನ್ನು ಸುಮ್ಮನೆ ಯಾರೋ ಹುಡುಗರು ಮಾಡುವುದಿಲ್ಲ. ಇದನ್ನು ಯಾರೋ ಮಾಡಿಸುತ್ತಾರೆ. ಹೀಗಾದರೆ ನಮ್ಮ ದೇಶದಲ್ಲಿ ಐಕ್ಯತೆ ಯಾವಾಗ ಮೂಡುತ್ತದೆ ಎಂದರು.
ಪಠ್ಯದಲ್ಲಿ ಸತ್ಯ ಇರಬೇಕೇ ಹೊರತು ನಿಮ್ಮ ಐಡಿಯಾಲಜಿಗಳು ಅದರಲ್ಲಿ ಇರಬಾರದು. ನಾನು ಲೇಖಕನೇ ಹೊರತು ಕಾರ್ಯಕರ್ತ ಅಲ್ಲ. ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ನನ್ನದು ಯಾವುದೇ ನಿಲುವನ್ನು ಪ್ರಕಟಿಸುತ್ತಿಲ್ಲ. ಆದರೆ ಬಹಳ ವರ್ಷಗಳಿಂದ ಅನೇಕ ಸಂದರ್ಭಗಳಲ್ಲಿ ನಡೆದ ಎಲ್ಲವನ್ನೂ ಹೇಳಿದ್ದೇನೆ.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement