ಬೆಂಗಳೂರು: ಕಾಶ್ಮೀರದ ಕಣಿವೆಯಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ತಾಲಿಬ್ ಹುಸೇನ್ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆತನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.ಕಾಶ್ಮೀರದಿಂದ ಬೆಂಗಳೂರಿಗೆ ಬಂದು ಹೆಸರು ಬದಲಾಯಿಸಿಕೊಂಡು ಓಡಾಡುತ್ತಿದ್ದ ಉಗ್ರ ತಾಲಿಬ್ ಹುಸೇನ್ (38) ಎಂಬಾತನನ್ನು ಜಮ್ಮು ಮತ್ತ ಕಾಶ್ಮೀರದ ಪೊಲೀಸರು ಬೆಂಗಳೂರಿನ ಶ್ರೀರಾಂಪುರದಲ್ಲಿ ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ತಾಲಿಕ್ ಎಂದು ಹೆಸರು ಬದಲಿಸಿ ಓಡಾಡಿಕೊಂಡಿದ್ದ ಉಗ್ರ ತಾಲಿಬ್, ಬಿಎನ್ಎಲ್ ಏರ್ ಸರ್ವಿಸ್ನಲ್ಲಿ ಕೆಲಸ ಮಾಡುತ್ತಿದ್ದ. ಅದರಂತೆ ಪತ್ನಿ ಮತ್ತು ಮೂವರು ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ನೆಲಸಿದ್ದನು.
ಶಂಕಿತ ಉಗ್ರ ತಾಲಿಬ್ ಹುಸೇನ್ಗೆ ಓಕಳಿಪುರಂ ಮಸೀದಿ ಮುಖ್ಯಸ್ಥ ಆಶ್ರಯ ನೀಡಿದ್ದಾನೆ. ಈಗ ಉಗ್ರ ತಾಲಿಬ್ನನ್ನು ಪೊಲೀಸರು ಬಂಧಿಸಿ ಕಾಶ್ಮೀರಕ್ಕೆ ಕರೆದುಕೊಂಡು ಹೋಗಿದ್ದಾರೆ.
ಬೆಂಗಳೂರಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂತಹ ಶಂಕಿತರ ಮೇಲೆ ಪೊಲೀಸ್ ಇಲಾಖೆ ನಿರಂತರ ಕಣ್ಣಿಟ್ಟಿದೆ. ಜಮ್ಮು-ಕಾಶ್ಮೀರ ಪೊಲೀಸರು ಕೂಡ ಹದ್ದಿನ ಕಣ್ಣಿಟ್ಟಿದ್ದಾರೆ. ಹಿಂದೆಯೂ ಭಟ್ಕಳದಲ್ಲಿ ಶಂಕಿತರನ್ನು ಬಂಧಿಸಲಾಗಿತ್ತು. ಕಾಶ್ಮೀರ ಪೊಲೀಸರಿಗೆ ಕರ್ನಾಟಕ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಉಗ್ರನ ಬಂಧನದ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಜಮ್ಮು-ಕಾಶ್ಮೀರ ಪೊಲೀಸರು ಉಗ್ರನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ನಮ್ಮ ಜೊತೆ ಜಮ್ಮು ಪೊಲೀಸರು ಸಂಪರ್ಕದಲ್ಲಿದ್ದಾರೆ. ಆದರೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ವಿನಿಮಯವಾಗಿಲ್ಲ. ಮುಂದಿನ ಹಂತದಲ್ಲಿ ನಮ್ಮ ಪೊಲೀಸರು ತನಿಖೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ನ ಮಾಸ್ಟರ್ಮೈಂಡ್ ತಾಲಿಬ್ ಹುಸೇನ್ ಬಂಧನದ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಜಮ್ಮುವಿನ ಕಿಸ್ತ್ವಾರ್ ಜಿಲ್ಲೆ ನಾಗಸೇನಿ ತಹಸಿಲ್ ಮೂಲದ ತಾಲಿಬ್ ಹುಸೇನ್, 2016ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸೇರಿದ್ದ. ಬುಡಕಟ್ಟು ಜನಾಂಗದ ತಾಲಿಬ್ಗೆ ಇಬ್ಬರು ಪತ್ನಿಯರು, ಐವರು ಮಕ್ಕಳಿದ್ದಾರೆ.
ಮೊದಲಿಗೆ ಯುವಕರನ್ನು ಟಾರ್ಗೆಟ್ ಮಾಡಿ, ಉಗ್ರ ಸಂಟನೆಗೆ ಸೇರ್ಪಡೆ ಮಾಡುತ್ತಿದ್ದ. ನಂತರ ಇವರನ್ನೇ ಬಳಸಿಕೊಂಡು ಹಿಂದುಗಳ ಹತ್ಯೆಗೆ ಸ್ಕೆಚ್ ರೂಪಿಸುತ್ತಿದ್ದ. ಬಾಂಬ್ ಸ್ಫೋಟ ಪ್ರಕರಣಗಳಲ್ಲಿಯೂ ಈತ ಭಾಗಿಯಾಗಿದ್ದ ಎಂದು ಹೇಳಲಾಗಿದ್ದು, ಕೇಂದ್ರ ಪಡೆಗಳ ಲಿಸ್ಟ್ನಲ್ಲಿ ಈತನ ಹೆಸರು ಸೇರ್ಪಡೆಯಾಗುತ್ತದ್ದಂತೆ ಪರಾರಿಯಾಗಿದ್ದ. 2 ವರ್ಷಗಳ ಹಿಂದೆ ಒಬ್ಬಳು ಪತ್ನಿಯೊಂದಿಗೆ ಬೆಂಗಳೂರಿಗೆ ಬಂದು ಶ್ರೀರಾಂಪುರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ.
ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸಂದರ್ಭದಲ್ಲಿ ತಾಲಿಬ್ ಹುಸೇನ್ ಬೆಂಗಳೂರಿನಲ್ಲಿ ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ವಾರದ ಹಿಂದೆ ಬೆಂಗಳೂರಿಗೆ ಬಂದ ರಾಷ್ಟ್ರೀಯ ರೈಲ್ಸ್ ಪಡೆ ಮತ್ತು ಸಿಆರ್ಪಿಎ ವಿಶೇಷ ತಂಡ ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ನೀಡಿತ್ತು. ಸ್ಥಳೀಯ ಪೊಲೀಸರು ಉಗ್ರನ ಮನೆ ಪತ್ತೆಹಚ್ಚಿ ಮಾಹಿತಿ ನೀಡಿದ್ದರು. ಆರೋಪಿಯನ್ನು ಬಂಧಿಸಿ ಜಮ್ಮು-ಕಾಶ್ಮೀರಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ನಿಮ್ಮ ಕಾಮೆಂಟ್ ಬರೆಯಿರಿ