ಜಮ್ಮು-ಕಾಶ್ಮೀದಲ್ಲಿ ಹಿಂದೂಗಳ ಹತ್ಯೆಗೆ ಸಂಬಂಧಿಸಿ ಬೆಂಗಳೂರಿನಲ್ಲಿ ಹಿಜ್ಬುಲ್ ಭಯೋತ್ಪಾದಕನ ಬಂಧನ

ಬೆಂಗಳೂರು: ಕಾಶ್ಮೀರದ ಕಣಿವೆಯಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ತಾಲಿಬ್ ಹುಸೇನ್ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆತನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.ಕಾಶ್ಮೀರದಿಂದ ಬೆಂಗಳೂರಿಗೆ ಬಂದು ಹೆಸರು ಬದಲಾಯಿಸಿಕೊಂಡು ಓಡಾಡುತ್ತಿದ್ದ ಉಗ್ರ ತಾಲಿಬ್ ಹುಸೇನ್ (38)​ ಎಂಬಾತನನ್ನು ಜಮ್ಮು ಮತ್ತ ಕಾಶ್ಮೀರದ ಪೊಲೀಸರು ಬೆಂಗಳೂರಿನ ಶ್ರೀರಾಂಪುರದಲ್ಲಿ ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ತಾಲಿಕ್ ಎಂದು ಹೆಸರು ಬದಲಿಸಿ ಓಡಾಡಿಕೊಂಡಿದ್ದ ಉಗ್ರ ತಾಲಿಬ್, ಬಿಎನ್​ಎಲ್​ ಏರ್​ ಸರ್ವಿಸ್​ನಲ್ಲಿ ಕೆಲಸ ಮಾಡುತ್ತಿದ್ದ.  ಅದರಂತೆ ಪತ್ನಿ ಮತ್ತು ಮೂವರು ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ನೆಲಸಿದ್ದನು.
ಶಂಕಿತ ಉಗ್ರ ತಾಲಿಬ್ ಹುಸೇನ್​ಗೆ ಓಕಳಿಪುರಂ ಮಸೀದಿ ಮುಖ್ಯಸ್ಥ ಆಶ್ರಯ ನೀಡಿದ್ದಾನೆ. ಈಗ ಉಗ್ರ ತಾಲಿಬ್​ನನ್ನು ಪೊಲೀಸರು ಬಂಧಿಸಿ ಕಾಶ್ಮೀರಕ್ಕೆ ಕರೆದುಕೊಂಡು ಹೋಗಿದ್ದಾರೆ.

ಬೆಂಗಳೂರಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂತಹ ಶಂಕಿತರ ಮೇಲೆ ಪೊಲೀಸ್ ಇಲಾಖೆ ನಿರಂತರ ಕಣ್ಣಿಟ್ಟಿದೆ. ಜಮ್ಮು-ಕಾಶ್ಮೀರ ಪೊಲೀಸರು ಕೂಡ ಹದ್ದಿನ ಕಣ್ಣಿಟ್ಟಿದ್ದಾರೆ. ಹಿಂದೆಯೂ ಭಟ್ಕಳದಲ್ಲಿ ಶಂಕಿತರನ್ನು ಬಂಧಿಸಲಾಗಿತ್ತು. ಕಾಶ್ಮೀರ ಪೊಲೀಸರಿಗೆ ಕರ್ನಾಟಕ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಉಗ್ರನ ಬಂಧನದ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಜಮ್ಮು-ಕಾಶ್ಮೀರ ಪೊಲೀಸರು ಉಗ್ರನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ನಮ್ಮ ಜೊತೆ ಜಮ್ಮು ಪೊಲೀಸರು ಸಂಪರ್ಕದಲ್ಲಿದ್ದಾರೆ. ಆದರೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ವಿನಿಮಯವಾಗಿಲ್ಲ. ಮುಂದಿನ ಹಂತದಲ್ಲಿ ನಮ್ಮ ಪೊಲೀಸರು ತನಿಖೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಹಿಜ್ಬುಲ್​ ಮುಜಾಹಿದ್ದೀನ್​ನ ಮಾಸ್ಟರ್​ಮೈಂಡ್​ ತಾಲಿಬ್​ ಹುಸೇನ್​ ಬಂಧನದ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್​ ಸಿಂಗ್​ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಜಮ್ಮುವಿನ ಕಿಸ್ತ್ವಾರ್​ ಜಿಲ್ಲೆ ನಾಗಸೇನಿ ತಹಸಿಲ್​ ಮೂಲದ ತಾಲಿಬ್​ ಹುಸೇನ್​, 2016ರಲ್ಲಿ ಹಿಜ್ಬುಲ್​ ಮುಜಾಹಿದ್ದೀನ್​ ಸೇರಿದ್ದ. ಬುಡಕಟ್ಟು ಜನಾಂಗದ ತಾಲಿಬ್​ಗೆ ಇಬ್ಬರು ಪತ್ನಿಯರು, ಐವರು ಮಕ್ಕಳಿದ್ದಾರೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಮೊದಲಿಗೆ ಯುವಕರನ್ನು ಟಾರ್ಗೆಟ್​ ಮಾಡಿ, ಉಗ್ರ ಸಂಟನೆಗೆ ಸೇರ್ಪಡೆ ಮಾಡುತ್ತಿದ್ದ. ನಂತರ ಇವರನ್ನೇ ಬಳಸಿಕೊಂಡು ಹಿಂದುಗಳ ಹತ್ಯೆಗೆ ಸ್ಕೆಚ್​ ರೂಪಿಸುತ್ತಿದ್ದ. ಬಾಂಬ್​ ಸ್ಫೋಟ ಪ್ರಕರಣಗಳಲ್ಲಿಯೂ ಈತ ಭಾಗಿಯಾಗಿದ್ದ ಎಂದು ಹೇಳಲಾಗಿದ್ದು, ಕೇಂದ್ರ ಪಡೆಗಳ ಲಿಸ್ಟ್‌ನಲ್ಲಿ ಈತನ ಹೆಸರು ಸೇರ್ಪಡೆಯಾಗುತ್ತದ್ದಂತೆ ಪರಾರಿಯಾಗಿದ್ದ. 2 ವರ್ಷಗಳ ಹಿಂದೆ ಒಬ್ಬಳು ಪತ್ನಿಯೊಂದಿಗೆ ಬೆಂಗಳೂರಿಗೆ ಬಂದು ಶ್ರೀರಾಂಪುರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ.
ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸಂದರ್ಭದಲ್ಲಿ ತಾಲಿಬ್​ ಹುಸೇನ್​ ಬೆಂಗಳೂರಿನಲ್ಲಿ ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ವಾರದ ಹಿಂದೆ ಬೆಂಗಳೂರಿಗೆ ಬಂದ ರಾಷ್ಟ್ರೀಯ ರೈಲ್ಸ್​ ಪಡೆ ಮತ್ತು ಸಿಆರ್​ಪಿಎ​ ವಿಶೇಷ ತಂಡ ನಗರ ಪೊಲೀಸ್​ ಆಯುಕ್ತರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ನೀಡಿತ್ತು. ಸ್ಥಳೀಯ ಪೊಲೀಸರು ಉಗ್ರನ ಮನೆ ಪತ್ತೆಹಚ್ಚಿ ಮಾಹಿತಿ ನೀಡಿದ್ದರು. ಆರೋಪಿಯನ್ನು ಬಂಧಿಸಿ ಜಮ್ಮು-ಕಾಶ್ಮೀರಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement