ಜೈಲಿನಲ್ಲಿ ಶಶಿಕಲಾಗೆ ಅಕ್ರಮವಾಗಿ ಸೌಲಭ್ಯ: ಐಪಿಎಸ್ ಅಧಿಕಾರಿ ಡಿ.ರೂಪ ವಿರುದ್ಧ ಮಾಜಿ ಪೊಲೀಸ್‌ ಅಧಿಕಾರಿ ಹೂಡಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ನಿವೃತ್ತ ಡಿಜಿಪಿ ಎಚ್​​​​​​​​​​​.ಎನ್ ಸತ್ಯನಾರಾಯಣ ರಾವ್ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ, ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್​​​​​​​​​​​​​ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸಿದೆ.
ಓರ್ವ ಸರ್ಕಾರಿ ಅಧಿಕಾರಿಯು ಮತ್ತೊಬ್ಬ ಸರ್ಕಾರಿ ಅಧಿಕಾರಿಯ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸುವುದು ಮಾನನಷ್ಟ ಮೊಕದ್ದಮೆ ಪ್ರಕರಣದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿ ಪ್ರಕರಣವನ್ನು ರದ್ದುಪಡಿಸಿದೆ.
2017 ಜುಲೈನಲ್ಲಿ ಕಾರಾಗೃಹ ಇಲಾಖೆಯ ಡಿಜಿಐ ಆಗಿದ್ದ ಡಿ. ರೂಪಾ, ಕಾರಾಗೃಹ ಇಲಾಖೆಯ ಡಿಜಿಪಿ ಆಗಿದ್ದ ಎಚ್​​​​​.ಎನ್. ಸತ್ಯನಾರಾಯಣ್ ರಾವ್ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮಾಜಿ ತಮಿಳುನಾಡು ಸಿಎಂ, ದಿವಂಗತ ಜಯಲಲಿತಾ ಆಪ್ತೆ, ಶಶಿಕಲಾ ನಟರಾಜನ್​ ಅವರಿಗೆ ವಿಶೇಷ ಸೌಲಭ್ಯ ಒದಗಿಸಲು 2 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ವರದಿ ಸಲ್ಲಿಸಿದ್ದರು.

ಅದೇ ವರ್ಷ ಜುಲೈ ಕೊನೆಯಲ್ಲಿ ಸೇವೆಯಿಂದ ನಿವೃತ್ತರಾಗಿದ್ದ ಸತ್ಯನಾರಾಯಣ್ ರಾವ್, ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದರಲ್ಲದೆ, ರೂಪಾ ಅವರು ನಮ್ಮ ಮೇಲೆ ಸುಳ್ಳು ಆರೋಪ ಮಾಡಿರುವುದರಿಂದ ನನ್ನ ಘನತೆಗೆ ಧಕ್ಕೆಯುಂಟಾಗಿದೆ 2018 ರಲ್ಲಿ ಬೆಂಗಳೂರಿನ 9ನೇ ಎಪಿಎಂಎಂ ನ್ಯಾಯಾಲಯದಲ್ಲಿ ಡಿ. ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು ಹಾಗೂ 20 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಹೇಳಿದ್ದರು. ದೂರು ದಾಖಲಿಸಿಕೊಂಡ ನ್ಯಾಯಾಲಯ ಡಿ. ರೂಪಾ ಅವರಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಪ್ರಸ್ತುತ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ರೂಪ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ಆದೇಶ ನೀಡಿದ್ದಾರೆ. ಸತ್ಯನಾರಾಯಣ ರಾವ್ ಅವರ ದೂರಿನ ಆಧಾರದ ಮೇಲೆ ತನ್ನ ವಿರುದ್ಧ ಅಕ್ಟೋಬರ್ 22, 2019 ರಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹೊರಡಿಸಿದ ಆದೇಶದ ಕಾನೂನುಬದ್ಧತೆಯನ್ನು ಅವರು ಪ್ರಶ್ನಿಸಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ವಿಚಾರಣೆ ನಡೆಸಿದ ಹೈಕೋರ್ಟ್‌, Cr.P.C ಸೆಕ್ಷನ್ 499 ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (Cr.P.C) ಸೆಕ್ಷನ್ 197 ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಪೂರ್ವ ಮಂಜೂರಾತಿಯನ್ನು ಕೋರಲಾಗಿಲ್ಲ ಅಥವಾ ನೀಡಲಾಗಿಲ್ಲವಾದ್ದರಿಂದ ಮಾನನಷ್ಟ ಮೊಕದ್ದಮೆಯನ್ನು ಮುಂದುವರಿಸಲಾಗುವುದಿಲ್ಲ ಎಂದು  ಹೇಳಿದೆ.
ಅಲ್ಲದೆ, ಎರಡು ಜನರ ನಡುವಿನ ಸಂವಹನವು ಸಂಪೂರ್ಣವಾಗಿ ಅಧಿಕೃತವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗೂ ರೂಪಾ ಮತ್ತು ಸತ್ಯನಾರಾಯಣ ರಾವ್‌ ಇಬ್ಬರೂ ಕಾರಾಗೃಹಗಳ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮಾನಹಾನಿಕರವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ಇದೀಗ ರೂಪಾ ಅವರ ವಿರುದ್ಧ ಸತ್ಯನಾರಾಯಣ್ ರಾವ್ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದ್ದು ರೂಪಾ ಅವರಿಗೆ ಬಿಗ್ ರಿಲೀಫ್‌ ಸಿಕ್ಕಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement